“ಜವಳಿ ಮತ್ತು ಉಡುಪು ವಲಯದಲ್ಲಿ 4200.00 ಕೋಟಿ. ರೂ. ಬಂಡವಾಳ ಹೂಡಿಕೆ “

ಬೆಂಗಳೂರು,ನವೆಂಬರ್,4,2022(www.justkannada.in):  ರಾಜ್ಯ ಸರ್ಕಾರವು ಇಲ್ಲಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ-2022’ ರಲ್ಲಿ  ಪ್ಯಾನೆಲ್ ಡಿಸ್ಕಶನ್ ನಡೆಯಿತು.

ಕೈಮಗ್ಗ ಮತ್ತು ಜವಳಿ ಖಾತೆ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಅವರು ಮಾತನಾಡಿ, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24’ರ ಪರಿಣಾಮಕಾರಿ ಜಾರಿಯಿಂದಾಗಿ ರಾಜ್ಯಕ್ಕೆ ಬಂಡವಾಳ ಹೂಡಿಕೆ ಹರಿವು ಹೆಚ್ಚಾಗಿದ್ದು, ರಾಜ್ಯದಲ್ಲಿ ಒಟ್ಟು 37 ಹೊಸ ಎಂಎಸ್ಎಂಇ ಘಟಕಗಳು, ದೊಡ್ಡ ಹಾಗೂ ಮೆಗಾ ಜವಳಿ ಘಟಕಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುತ್ತವೆ. ಇದರಿಂದಾಗಿ ರಾಜ್ಯಕ್ಕೆ ಅಂದಾಜು ಸುಮಾರು 4200 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಸುಮಾರು 36,457 ಜನರಿಗೆ ಉದ್ಯೋಗಾವಕಾಶ ದೊರಕಿದಂತಾಗುತ್ತದೆ ಎಂದರು.

ರಾಜ್ಯ ಸರ್ಕಾರವು ಜವಳಿ ಮತ್ತು ಉಡುಪು ವಲಯದಲ್ಲಿ ಕರ್ನಾಟಕ ರಾಜ್ಯವನ್ನು ಪ್ರಮುಖ ಬಂಡವಾಳ ಹೂಡಿಕೆ ತಾಣವನ್ನಾಗಿ ಮಾಡಲು ಹಾಗೂ ಜವಳಿ ಮೌಲ್ಯ ಸರಪಳಿಯನ್ನು (Textile Value Chain) ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ‘ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24’ನ್ನು 4ನೇ ನವೆಂಬರ್‌ 2019 ರಿಂದ ಜಾರಿಗೊಳಿಸಿತ್ತು. ಬಳಿಕ, ಕೋವಿಡ್-19 ಪರಿಣಾಮದಿಂದಾಗಿ ಸಂಕಷ್ಟದಲ್ಲಿದ್ದ ಜವಳಿ ಉದ್ಯಮಕ್ಕೆ ಸಹಾಯ ಹಸ್ತ ಚಾಚಲು ರಾಜ್ಯ ಸರ್ಕಾರವು ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ನ್ನು 02.08.2022 ರಂದು ಪರಿಷ್ಕರಿಸಿತು. ಪರಿಷ್ಕರಣೆ ಅನುಸಾರ, ಶೇ.5 ರ ಬಡ್ಡಿ ದರದಲ್ಲಿ ಬಡ್ಡಿ ಸಹಾಯಧನ ಯೋಜನೆಯನ್ನು ಬೃಹತ್ ಕೈಗಾರಿಕೆಗಳ ಜೊತೆಗೆ ಮಧ್ಯಮ  ಕೈಗಾರಿಕೆಗಳಿಗೂ ವಿಸ್ತರಿಸಲಾಯಿತು. ಜವಳಿ ಹಾಗೂ ಸಿದ್ಧ ಉಡುಪು ಘಟಕಗಳಿಗೆ ನೀಡುವ ರಿಯಾಯಿತಿ ಮತ್ತು ಪ್ರೋತ್ಸಾಹಧನಗಳ ಮೇಲಿನ ಮಿತಿಯನ್ನು ಶೇ. 100 ರವರೆಗೆ ವಿಸ್ತರಿಸಲಾಯಿತು.

ಜವಳಿ ಪಾರ್ಕ್ ಮೂಲಭೂತ ಸೌಕರ್ಯಗಳಿಗಾಗಿ ಪ್ರತ್ಯೇಕ ಉದ್ಯಮಿಗೆ ಎಸ್.ಪಿ.ವಿ. ಮಾದರಿಯಲ್ಲಿರುವ ಯೋಜನಾ ಮೊತ್ತದ ಮೇಲೆ ಶೇ.40% ಅಥವಾ ರೂ.40.00 ಕೋಟಿ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಒದಗಿಸಲು ನಿರ್ಧರಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸಿದ್ಧ ಉಡುಪು ಘಟಕಗಳಿಗೆ ವೇತನ ಸಹಾಯಧನವನ್ನು ರೂ.1,500/-ಗಳಿಂದ ರೂ.3,000/-ಗಳಿಗೆ ಹಾಗೂ ಇತರೆ ಕರ್ನಾಟಕ ಭಾಗದಲ್ಲಿ ಈ ಸಹಾಯಧನವನ್ನು ರೂ.1,000/- ಗಳಿಂದ ರೂ.2,000/- ಗಳಿಗೆ ಹೆಚ್ಚಿಸಲಾಯಿತು. ಈ ಕ್ರಮಗಳು ರಾಜ್ಯದ ಜವಳಿ ಮತ್ತು ಉಡುಪು ವಲಯದಲ್ಲಿ ಚೇತರಿಕೆಯನ್ನು ಉಂಟು ಮಾಡಿದವು. ಪರಿಣಾಮವಾಗಿ ಈಗ ಬಂಡವಾಳ ಹೂಡಿಕೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಅವರು ವಿವರಿಸಿದರು.

Key words: 4200.00 crore – textile and apparel- sector- investment.