ಶಿವರಾಮ ಕಾರಂತ ಬಡಾವಣೆಯ 300 ಕಟ್ಟಡಗಳು ಸಕ್ರಮ: ಸುಪ್ರೀಂಕೋರ್ಟ್ ಆದೇಶ.

ಬೆಂಗಳೂರು, ಡಿಸೆಂಬರ್,2,2021(www.justkannada.in):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿರುವ ಡಾ. ಶಿವರಾಮ ಕಾರಂತ್ ಬಡಾವಣೆಯ ವ್ಯಾಪ್ತಿಯಲ್ಲಿ 03-08-2018ರ ಮುಂಚಿತವಾಗಿ ಸಾರ್ವಜನಿಕರು ನಿರ್ಮಾಣ ಮಾಡಿರುವ 300 ಕಟ್ಟಡಗಳನ್ನು ಸಕ್ರಮಗೊಳಿಸಿ ಭಾರತ ಸವೋಚ್ಛ ನ್ಯಾಯಾಲಯ  25-11-2021 ರಂದು ಆದೇಶ ಹೊರಡಿಸಿದೆ ಎಂದು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು ತಿಳಿಸಿದರು.

ಈ ಕುರಿತು ಅವರು ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಭಾರತ ಸರ್ವೋಚ್ಛ ನ್ಯಾಯಾಲಯ ಕಾರಂತ್ ಬಡಾವಣೆ ಕುರಿತು ರಚಿಸಿರುವ ತಮ್ಮ ನೇತೃತ್ವದ ಸಮಿತಿ ಈವರೆಗೆ ಸುಮಾರು 6200 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದ್ದು, ಅದರಲ್ಲಿ ಮೊದಲ ಹಂತದಲ್ಲಿ 300 ಕಟ್ಟಡಗಳ ದಾಖಲೆಗಳನ್ನು ಇತ್ತೀಚಿಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು, ಅದನ್ನು ಮಾನ್ಯ ಮಾಡಿರುವ ನ್ಯಾಯಪೀಠ ನಾಲ್ಕು ವಾರದೊಳಗಾಗಿ ಸಂಬಂಧಿಸಿದವರಿಗೆ ಹಕ್ಕುಪತ್ರ ವಿತರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿ ಆದೇಶಿಸಲಾಗಿದೆ ಎಂದು ಹೇಳಿದರು.

ಸಕ್ರಮಗೊಳಿಸಿರುವ ಈ 300 ಕಟ್ಟಡಗಳ ಮಾಲೀಕರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಸಹ ತಮ್ಮ ನೇತೃತ್ವದ ಸಮಿತಿಯ ಮಾರ್ಗದರ್ಶನದಲ್ಲಿ ನಡೆಸಬೇಕು ಎಂದು ಸೂಚಿಸಿದೆ. ಈಗಾಗಲೇ ಆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಪ್ರತಿಯೊಬ್ಬರಿಗೂ ನೇರವಾಗಿ ಅವರು ನೋಂದಾಯಿಸಿಕೊಂಡಿರುವ ಮೊಬೈಲ್‍ಗಳಿಗೆ ಹಕ್ಕುಪತ್ರ ವಿತರಣೆ ಕುರಿತು ಸಂದೇಶ ರವಾನಿಸಲು ಕ್ರಮ ಕೈಕೊಳ್ಳಲಾಗುವುದು.

ನ್ಯಾಯಾಲಯದ ಆದೇಶದಂತೆ ಕಾರಂತ್ ಬಡಾವಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರು ತಮ್ಮ ದಾಖಲೆಗಳನ್ನು ನೇರವಾಗಿ ಸಲ್ಲಿಸಲು ಸಹಾಯವಾಗುವಂತೆ ಸಹಾಯ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಕುರಿತು ಈವರೆಗೆ ಸಾರ್ವಜನಿಕ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಾಗೂ ಮಾಧ್ಯಮಗಳ ಮೂಲಕ ಜಾಹೀರಾತು ನೀಡಲಾಗಿದೆ. ಸಮಿತಿಯು ಸಾರ್ವಜನಿಕರು ಸಲ್ಲಿಸಿರುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ವೈಜ್ಞಾನಿಕವಾಗಿ ಶೇಖರಿಸಿಡಲಾಗುತ್ತಿದೆ.

ಮೊದಲ ಹಂತದಲ್ಲಿ ಸಲ್ಲಿಸಿದ್ದ 300 ಕಟ್ಟಡಗಳನ್ನು ಸಕ್ರಮಗೊಳಿಸಿರುವ ನ್ಯಾಯಾಲಯಕ್ಕೆ ಪ್ರತಿ ತಿಂಗಳಿಗೊಮ್ಮೆ ಇಂತಿಷ್ಟು ಗುರಿಯೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ವೇಗವಾಗಿ ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಮತ್ತು ಸಕ್ರಮವಾಗಿ ಕಟ್ಟಡ ಕಟ್ಟಿರುವ ಸಾರ್ವಜನಿಕರ ಹಿತ ಕಾಯಲಾಗುವುದು ಎಂದು ಹೇಳಿದರು.

ಸರ್ವೋಚ್ಛ ನ್ಯಾಯಾಲಯ ನೀಡಿರುವ ಈ ಆದೇಶ ಅತ್ಯಂತ ಮಹತ್ತರವಾದದ್ದಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ಕಾರಂತ್ ಬಡಾವಣೆ ಒಂದು ಅತ್ಯುತ್ತಮ ಬಡಾವಣೆಯಾಗಿ ರೂಪುಗೊಳ್ಳಲಿದ್ದು, ತಮ್ಮ ನೇತೃತ್ವದ ಸಮಿತಿ ಪ್ರತಿ ಹಂತದಲ್ಲೂ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.

ಕಾರಂತ್ ಬಡಾವಣೆಯ ಸಾರ್ವಜನಿಕರು ತಮ್ಮ ವ್ಯಾಜ್ಯಗಳ ಕುರಿತಂತೆ ಸಮಿತಿಯನ್ನು ನೇರವಾಗಿ ಭೇಟಿಯಾಗಬಹುದಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ದಾಖಲೆಗಳನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಡಿಸೆಂಬರ್ ಮಾಹೆಯ ಒಳಗಾಗಿ ಮತ್ತೊಂದು ಆದೇಶವನ್ನು ಪಡೆಯುವ ಗುರಿ ನಿರೀಕ್ಷಿಸಲಾಗಿದೆ.

ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಒಟ್ಟು ಮೂರು ವಿಧಗಳಲ್ಲಿ ವಿಭಜಿಸಲಾಗಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು, ಸಕ್ಷಮವಲ್ಲದ ಸ್ಥಳೀಯ ಪ್ರಾಧಿಕಾರದಿಂದ (ಗ್ರಾಮ ಪಂಚಾಯಿತಿಗಳು) ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು ಹಾಗೂ ಯಾವುದೇ ಅನುಮತಿಯನ್ನು ಪಡೆಯದೇ ನಿರ್ಮಿಸಿರುವ ಕಟ್ಟಡಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಯೊಂದನ್ನು ಸಹ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಎಲ್ಲರಿಗೂ ನ್ಯಾಯ ಒದಗಿಸುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕರು ಸಮಿತಿಯ ಹೆಚ್ಚಿನ ಮಾಹಿತಿಗಾಗಿ     https://jcc-skl.in/  ಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಜೈಕರ್ ಜೆರೋಮ್ ಅವರು ಉಪಸ್ಥಿತಿರಿದ್ದರು.

Key words: 300 -buildings -Shivarama karanta –project-Supreme Court- order