ರಾಜ್ಯದಲ್ಲಿ 3.5 ಲಕ್ಷ ಮನೆ ವಿತರಣೆಗೆ ಸಿದ್ದತೆ: ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣ ಕುರಿತು ಸಚಿವ ವಿ.ಸೋಮಣ್ಣ ಹೇಳಿದ್ದೇನು ಗೊತ್ತೆ..?

ಮೈಸೂರು,ಫೆ,28,2020(www.justkannada.in): ಮೈಸೂರು ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣ ವಿಚಾರ ಸಬಂಧ  ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರವಾಗುವ ವಿಶ್ವಾಸ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದರು.  ದೇವಾಲಯದ ಭೇಟಿ ನಂತರ ಜಿಲ್ಲಾಡಳಿತ ನಿರ್ಮಾಣ ಮಾಡುತ್ತಿರುವ ಅಂಗಡಿ ಮಳಿಗೆ ಕಾಮಗಾರಿ ಪರಿಶೀಲನೆ ನಡೆಸಿದರು.  ಬಹುಮಹಡಿ ಪಾರ್ಕಿಂಗ್ ಸಮೀಪದಲ್ಲೆ 196 ಸಾಮೂಹಿಕ ಅಂಗಡಿ ಮಳಿಗೆ ನಿರ್ಮಾಣ ಮಾಡಲಾಗುತ್ತಿದ್ದು ಈ ಕಾಮಗಾರಿಯನ್ನ ಸಚಿವ ಸೋಮಣ್ಣ ಪರಿಶೀಲಿಸಿದರು. ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆ ಆಯುಕ್ತರು ಸಚಿವ ಸೋಮಣ್ಣಗೆ ಸಾಥ್ ನೀಡಿದರು. ಇನ್ನೊಂದು ತಿಂಗಳಲ್ಲಿ ಕೆಲಸ ಮುಗಿಸುವಂತೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.

ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಇನ್ನೊಂದು ತಿಂಗಳಲ್ಲಿ ಚಾಮುಂಡಿಬೆಟ್ಟ ಕಾಮಗಾರಿ ಪೂರ್ಣವಾಗಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನೀಡುತ್ತೇವೆ. ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ವ್ಯವಸ್ಥೆ ಮಾಡ್ತಿವಿ. ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ಶ್ರಮ ಹಾಕಿ ಕೆಲಸ ಮಾಡ್ತಿವಿ ಎಂದು ಹೇಳಿದರು.

ರಾಜ್ಯದಲ್ಲಿ 3.5 ಲಕ್ಷ ಮನೆ ವಿತರಣೆಗೆ ಎಲ್ಲ ಸಿದ್ದತೆ

ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮನೆ ವಿತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಮನೆಗಳಲ್ಲಿ ಕೃಷ್ಣನ ಲೆಕ್ಕ ಹೋಗಿ ರಾಮನ ಲೆಕ್ಕ ಮಾತ್ರ ಉಳಿದಿದೆ. ರಾಜ್ಯದಲ್ಲಿ 3.5 ಲಕ್ಷ ಮನೆ ವಿತರಣೆಗೆ ಎಲ್ಲ ಸಿದ್ದತೆ ನಡೆದಿದೆ. ಮೊದಲು 15 ಲಕ್ಷ ಮನೆ ವಿತರಣೆ ಅರ್ಜಿ ಬಂದಿತ್ತು. ಆಧಾರ್, ಬಿಪಿಎಲ್, ಎಪಿಎಲ್ ಕಾರ್ಡುಗಳನ್ನ ಲಿಂಕ್ ಮಾಡಿದ್ವಿ. ಆ ನಂತರ 15 ಲಕ್ಷದಿಂದ 6 ಲಕ್ಷಕ್ಕೆ ಬಂತು. ಇದೀಗ 3.5 ಲಕ್ಷ ನಿಜವಾದ ಸಂತ್ರಸ್ತರಿಗೆ ಮನೆ ವಿತರಣೆಗೆ ಸಿದ್ದತೆ ನಡೆದಿದೆ‌. ಜೂನ್ ಅಂತ್ಯದ ಒಳಗೆ ಎಲ್ಲರಿಗು ಮನೆ ವಿತರಣೆ ಮಾಡ್ತಿವಿ‌ ಎಂದು ತಿಳಿಸಿದರು.

ಮೈಸೂರು ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ,  ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರವಾಗುವ ವಿಶ್ವಾಸ ಇದೆ. ನಾನು ಮುಜರಾಯಿ ಇಲಾಖೆ ಸಚಿವರ ಜೊತೆ ಮಾತನಾಡಿದ್ದೇನೆ‌. ಚಿನ್ನದ ರಥ ನಿರ್ಮಾಣ ಮಾಡುವ ಬಜೆಟ್ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ. ಸಪ್ತಪದಿ ಯೋಜನೆ ಅನುಷ್ಠಾನಕ್ಕೂ ನಮ್ಮ ಸರ್ಕಾರ ಸಿದ್ದವಾಗಿದೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ನಂಜನಗೂಡಿನಲ್ಲಿ ನೆರೆ ಸಂತ್ರಸ್ತರಿಗೆ ಅನ್ಯಾಯ ವಿಚಾರ ಕುರಿತು ಮಾತನಾಡಿದ ಸಚಿವ ಸೋಮಣ್ಣ, ಆ ಫಲಾನುಭವಿಯ ಮಾಹಿತಿ ತರಿಸಿಕೊಳ್ಳುತ್ತೇನೆ. ಮನೆ ಬಿದ್ದುಹೋಗಿದ್ದರೆ ಅದಕ್ಕೆ ಸೂಕ್ತ ಪರಿಹಾರ ಕೊಡುತ್ತೇವೆ. ಜಿಲ್ಲಾಧಿಕಾರಿಗಳಿಂದ ಈ ಬಗ್ಗೆ ವರದಿ ತರಿಸಿಕೊಂಡು ಆ ಕುಟುಂಬಕ್ಕೆ ಸಹಾಯ ಮಾಡ್ತಿನಿ ಎಂದು ತಿಳಿಸಿದರು.

ನಿನ್ನೆ ಯಡ್ಯೂರಪ್ಪನವರ ಹುಟ್ಟುಹಬ್ಬಕ್ಕೆ ಸಿದ್ದರಾಮಯ್ಯ ಬಂದಿದ್ದರು. ಇದು ಕರ್ನಾಟಕದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದೆ. ಎಲ್ಲರೂ ಒಟ್ಟಾಗಿ ಸಿಎಂಗೆ ಶುಭ ಕೋರಿದ್ದಾರೆ. ಹಾಗೇಯೆ ಎಲ್ಲರೂ ಒಟ್ಟಾಗಿ ರಾಜ್ಯದ ಅಭಿವೃದ್ಧಿ ಮಾಡ್ತಿವಿ. ಎಲ್ಲರೂ ಪಕ್ಷಭೇದ ಮರೆತು ಸಿಎಂಗೆ ಶುಭಕೋರಿದ್ದು ಸಂತೋಷವಾಯಿತು ಎಂದರು.

Key words: 3.5 lakhs -home delivery –Minister- V Somanna – construction – golden chariot – Chamundi hills