ಸಿದ್ಧರಾಮಯ್ಯ ವಿರುದ್ಧ ಕಾಫಿ,ತಿಂಡಿ , ಬಿಸ್ಕೆಟ್‍ ಹೆಸರಿನಲ್ಲಿ 200 ಕೋಟಿ ರೂ. ಲೂಟಿ ಆರೋಪ: ದಾಖಲೆ ಬಿಡುಗಡೆ ಮಾಡಿದ ಎನ್.ಆರ್ ರಮೇಶ್.

ಬೆಂಗಳೂರು,ಮಾರ್ಚ್,6,2023(www.justkannada.in):  ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫೀ – ತಿಂಡಿ – ಬಿಸ್ಕೆಟ್‍ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಎನ್.ಆರ್ ರಮೇಶ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಕಛೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ಬೃಹತ್ ಹಗರಣ ನಡೆದಿದೆ.  2013-14 ರಿಂದ 2017-18 ರವರೆಗಿನ 05 ವರ್ಷಗಳ ಅವಧಿಯಲ್ಲಿ – ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ / ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಈ 05 ವರ್ಷಗಳ ಅವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಛೇರಿಯ ಕಾರ್ಯಗಳಿಗೆ ಕಾಫೀ – ಟೀ – ತಿಂಡಿ – ಸ್ನಾಕ್ಸ್ – ಉಪಹಾರ ಪೂರೈಕೆ ಕಾರ್ಯಗಳಿಗೆಂದು ವೆಚ್ಛ ಮಾಡಿರುವ ಒಟ್ಟು ಮೊತ್ತ ₹. 200,62,93,027/- ಗಳು. ನಂಬಲ ಸಾಧ್ಯವಾದರೂ ಸಹ ಇದು ಸತ್ಯ ಎಂದು ಹೇಳಿದರು.

ಕರ್ನಾಟಕ ಸರ್ಕಾರದ “ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ” ಹಾಗೂ “ರಾಜ್ಯ ಅತಿಥಿ ಗೃಹಗಳ ವಿಭಾಗ”ದ ಅಧಿಕಾರಿಗಳು RTI ಕಾಯ್ದೆಯಡಿಯಲ್ಲಿ ನೀಡಿರುವ ಅಧಿಕೃತ ದಾಖಲೆಗಳಿಂದ ಈ ಆಘಾತಕಾರಿ ಮಾಹಿತಿಗಳು ಬಯಲಾಗಿದೆ. 5 ವರ್ಷಗಳಲ್ಲಿನ  410 ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ 11 ಲಕ್ಷ ರೂಪಾಯಿ ವೆಚ್ಛ. 410 ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ 14 ಲಕ್ಷ ರೂಪಾಯಿ ವೆಚ್ಛವಾಗಿದೆ ಎಂದು ದೂರಿದರು.

ಐದು ವರ್ಷಗಳ ಅವಧಿ ಎಂದರೆ ಒಟ್ಟು 1,825 ದಿನಗಳು. 52 ಭಾನುವಾರಗಳು, 12 ಎರಡನೇ ಶನಿವಾರಗಳು ಮತ್ತು 20 ಕ್ಕೂ ಹೆಚ್ಚು ಸರ್ಕಾರೀ ರಜಾ ದಿನಗಳು ಸೇರಿದಂತೆ ಪ್ರತೀ ವರ್ಷಕ್ಕೆ 82 ದಿನಗಳಂತೆ, ಐದು ವರ್ಷಗಳಿಗೆ ಸುಮಾರು 410 ದಿನಗಳು ಸರ್ಕಾರೀ ರಜಾ ದಿನಗಳು ಆಗುತ್ತವೆ. ಆದರೂ, ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಛೇರಿಯು ಒಂದು ದಿನವೂ ರಜೆಯಿಲ್ಲದೆ ಎಲ್ಲಾ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲಾ ಸರ್ಕಾರೀ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಿದೆಯೆಂದು ಭಾವಿಸಿದರೂ ಸಹ ಐದು ವರ್ಷಗಳ ಅವಧಿಯ ಒಟ್ಟು 1,825 ದಿನಗಳಲ್ಲಿ ಸಿದ್ಧರಾಮಯ್ಯ ಅವರ ಅಧಿಕೃತ ಕಛೇರಿಯ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಿನಲ್ಲಿ ಕಾಫೀ – ತಿಂಡಿ – ಸ್ನಾಕ್ಸ್ – ಉಪಹಾರಗಳಿಗೆಂದು ಪ್ರತೀ ದಿನವೊಂದಕ್ಕೆ ಸರಾಸರಿ ₹. 10,99,339/- ಗಳನ್ನು ವೆಚ್ಛ ಮಾಡಲಾಗಿದೆ. ಇದು ಕೇಳಲು ಹಾಸ್ಯ ಪ್ರಸಂಗದಂತಿದ್ದರೂ ಸಹ ದಾಖಲೆಗಳು ಅಸಲೀ ಸತ್ಯವನ್ನು ಬಿಚ್ಚಿಡುತ್ತಿವೆ. ಈ ನಂಬಲಸಾಧ್ಯವಾದಂತಹ ದಾಖಲೆಗಳಿಂದ 2013-14 ರಿಂದ 2017-18 ರವರೆಗಿನ ಐದು ವರ್ಷಗಳಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಒಟ್ಟು ₹. 200,62,93,027/- ಗಳನ್ನು ಲೂಟಿ ಮಾಡಿರುವುದು ಬಟಾಬಯಲಾಗಿದೆ ಎಂದು ಎನ್. ಆರ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಅಂದಿನ ಮುಖ್ಯಮಂತ್ರಿಗಳ ಕಛೇರಿಯ ಈ ನಂಬಲಸಾಧ್ಯವಾದ ವೆಚ್ಛಗಳ ಬಗ್ಗೆ Office of the Principal Accountant General, Karnataka ದವರು ನೀಡಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ತಮ್ಮ ತೀವ್ರ ಆಕ್ಷೇಪಣೆಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿವೆ. ಆದರೂ, ಭ್ರಷ್ಟಾಚಾರದ ಪಿತಾಮಹ ಸಿದ್ಧರಾಮಯ್ಯ ಅವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮೂಲಕ ತಾವೆಂಥ ಭಂಢ ರಾಜಕಾರಣಿ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ. ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಹ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ಧರಾಮಯ್ಯನವರ ಅವಧಿಯಲ್ಲಿ ನಡೆದಿದೆ. ಹಾಸಿಗೆ – ದಿಂಬು, ಇಂದಿರಾ ಕ್ಯಾಂಟೀನ್ ತಿಂಡಿ, ನೆಲದಡಿಯ ಕಸದ ಡಬ್ಬಗಳು ಮತ್ತು LED ದೀಪಗಳ ಅಳವಡಿಕೆಯಂತಹ ಯೋಜನೆಗಳ ಹೆಸರಿನಲ್ಲೂ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಛೇರಿಯ ಕಾರ್ಯಗಳಿಗೆ ಕಾಫೀ – ತಿಂಡಿ – ಬಿಸ್ಕೇಟ್ ಪೂರೈಕೆ ಹೆಸರಿನಲ್ಲೂ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದನ್ನು ನೋಡಿದರೆ, ಇಂತಹ ಬೃಹತ್ ಭ್ರಷ್ಟಾಚಾರಗಳ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಸರ್ಕಾರದ ಯಾವೊಂದು ಯೋಜನೆಗಳನ್ನೂ ಬಿಡದೆ, ಎಲ್ಲದರಲ್ಲೂ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದ ಸಿದ್ಧರಾಮಯ್ಯನವರ ಸರ್ಕಾರವು – ಕೊನೆಗೆ ಕಾಫೀ – ತಿಂಡಿ – ಉಪಹಾರದ ಹೆಸರಿನಲ್ಲೂ ಬೃಹತ್ ಮೊತ್ತದ ವಂಚನೆ ಎಸಗಿದೆ.

ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಅವರ ಕಛೇರಿಗೆ ಆಗಮಿಸಿರುವ ಅತಿಥಿ ,  ಗಣ್ಯರ ಉಪಚಾರ ಕಾರ್ಯಗಳಿಗೆ ಕಾಫೀ – ತಿಂಡಿ – ಸ್ನಾಕ್ಸ್ – ಉಪಹಾರ ಪೂರೈಕೆಯ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಈ ಬೃಹತ್ ಹಗರಣವನ್ನು CBI ಅಥವಾ CID ತನಿಖೆಗೆ ವಹಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಎನ್,ಆರ್ ರಮೇಶ್ ಆಗ್ರಹಿಸಿದರು.

Key words: 200 crores –  looting- Siddaramaiah- Allegation –BJP-NR Ramesh