ದುಸ್ಥಿತಿಯಲ್ಲಿರುವ ಮೈಸೂರು ಪಾರಂಪರಿಕ ಕಟ್ಟಡಗಳ ಉಳಿವಿಗೆ ಆಸಕ್ತಿ ವಹಿಸಿ- ಮಾಜಿ ಮೇಯರ್ ಶಿವಕುಮಾರ್ ಆಗ್ರಹ

ಮೈಸೂರು,ಜುಲೈ,21,2025 (www.justkannada.in): ಮೈಸೂರಿನ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತಕ್ಕೆ ಬಂದಿವೆ. ಹೀಗಾಗಿ ಪಾರಂಪರಿಕ ಕಟ್ಟಡಗಳ ಉಳಿವಿಗೆ ಆಸಕ್ತಿ ವಹಿಸಿ ಹೆಚ್ಚಿನ ಅನುದಾನ ಒದಗಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಮೈಸೂರು ಪಾರಂಪರಿಕ ನಗರ, ಸ್ವಚ್ಛ ನಗರಿ, ಯೋಗ ನಗರ ಅಂತ ಹಲವು ಬಿರುದುಗಳನ್ನಹೊಂದಿದೆ. ನಮ್ಮ ಮಹಾರಾಜರು ಕೊಟ್ಟಂತಹ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತಕ್ಕೆ ಬಂದಿವೆ. ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇತಿಹಾಸವನ್ನ ಸಾರುವ ಎಷ್ಟೋ ಕಟ್ಟಡಗಳು ಅಳಿವಿನ ಹಂಚಿಗೆ ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುಮಾರು 234 ಪಾರಂಪರಿಕ ಕಟ್ಟಡಗಳು ಇವೆ. ಅದರಲ್ಲಿ ಅಧಿಕೃತವಾಗಿ 129 ಪಾರಂಪರಿಕ ಕಟ್ಟಡಗಳು ಎಂದು ಸರ್ಕಾರ ಘೋಷಣೆ ಮಾಡಿದೆ. ಮೈಸೂರಿನ ಮಹಾರಾಜ ಕಾಲೇಜು 179 ವರ್ಷಗಳ ಹಳೇ ಕಟ್ಟಡ  ಶಿಥಿಲಾವಸ್ಥೆಗೆ ತಲುಪಿದೆ. ಮಹಾರಾಜ ಕಾಲೇಜು ದೊಡ್ಡ ದೊಡ್ಡ ವ್ಯಕ್ತಿಗಳು ಕುವೆಂಪು, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಎಸ್ ಎಂ ಕೃಷ್ಣ, ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳ ಓದಿರುವ ಕಾಲೇಜು. ಸಿಎಂ ಸಿದ್ದರಾಮಯ್ಯ ಓದಿದ ಯುವರಾಜ ಕಾಲೇಜು ಕೂಡ ಶಿಥಿಲವಾಗಿದೆ. ನಗರದ ಸಂಸ್ಕ್ರತ ಪಾಠ ಶಾಲೆ 150 ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚ್ಯ ವಸ್ತು ಸಂಗ್ರಹಾಲಯವೂ ಕೂಡ ಶಿಥಿಲವಾಗಿದೆ. ಅಲ್ಲಿ 46 ಸಾವಿರಕ್ಕೂ ಹೆಚ್ಚು ತಾಳೆಗರಿ ಶಾಸನಗಳನ್ನ ಹೊಂದಿದೆ. ವಾಣಿ ವಿಲಾಸ ರಸ್ತೆಯಲ್ಲಿರುವ ಚಿಕ್ಕ ಅರಮನೆ ಇದೆ ಅದೂ ಕೂಡ ಶಿಥಿಲವಾಗಿದೆ. ಅಲ್ಲಿ ಸಮಾಜ ಕಲ್ಯಾಣದ ಹಾಸ್ಟೆಲ್ ನಡೆಸುತ್ತಿದ್ದಾರೆ. ಅದು ಯಾವುದೇ ಸಂದರ್ಭದಲ್ಲಿ ಬೀಳಬಹುದು.

ಜೊತೆಗೆ ಕೆ.ಆರ್ ಸರ್ಕಲ್ ಸೆಲ್ಲಾರ್ ಸಹ ದುಸ್ಥಿತಿಯಲ್ಲಿದೆ. ಹಾಗೆಯೇ ದೊಡ್ಡಗಡಿಯಾರ  ನಿರ್ಮಾಣದಲ್ಲೂ ಕಳಪೆ ಕಾಮಗಾರಿಯಾಗಿದ್ದು, ಮೈಸೂರಿನ ಹಲವೆಡೆ ಕಮಾನುಗಳಿವೆ.  ಅವು ಕೂಡ ಬೀಳುವ ಪರಿಸ್ಥಿತಿಯಲ್ಲಿವೆ. ನಾನು ಮೇಯರ್ ಆಗಿದ್ದ ಸಂದರ್ಭದಲ್ಲಿ ಅವುಗಳ ದುರಸ್ತಿಗೆ 2.80 ಕೋಟಿ ಹಣ ಮೀಸಲಿಟ್ಟಿದ್ದೆ. ನಮ್ಮ ಅವಧಿ ಮುಗಿದ ಮೇಲೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಅವುಗಳ ದುರಸ್ತಿ ಮಾಡುವ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯನವರು ಇದರ ಬಗ್ಗೆ ಆಸಕ್ತಿ ವಹಿಸಬೇಕು. ಪಾರಂಪರಿಕ ಕಟ್ಟಡಗಳನ್ನ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ  ನೀಡಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಸರ್ಕಾರಕ್ಕೆ ಮನವಿ ಮಾಡಿದರು.vtu

Key words: Mysore, Heritage, Buildings, Former Mayor, Shivakumar