RSS ಬ್ಯಾನ್ ಮಾಡಬೇಕೆಂದ ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಮೇಯರ್ ಶಿವಕುಮಾರ್ ಸವಾಲು

ಮೈಸೂರು,ಜುಲೈ,4,2025 (www.justkannada.in): ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆಂದು ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಪಾಕಿಸ್ತಾನ ಪರ ವಿಧಾನ ಸೌಧದಲ್ಲಿ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಮಾತನಾಡಲಿ  ಎಂದು ಮಾಜಿ ಮೇಯರ್ ಶಿವಕುಮಾರ್ ಸವಾಲು ಹಾಕಿದ್ದಾರೆ.

ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೋರಾಟ ಮಾಡುತ್ತಿರುವ ಸಂಘ. ಇಂತಹ ಸಂಘಟನೆ ಬಗ್ಗೆ ಮಾತನಾಡುವ ಮುನ್ನ ಸಚಿವರು ಯೋಚಿಸುವುದು ಅತ್ಯವಶ್ಯಕ. ಅದನ್ನು ಬಿಟ್ಟು ಬ್ಯಾನ್ ಮಾಡಬೇಕು ಎಂಬ ಪದ ಬಳಸಿರುವುದು ಅಕ್ಷಮ್ಯ ಎಂದು ಶಿವಕುಮಾರ್ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ಸ್ವಯಂ ಸೇವಾ ಸಂಘದ ಕಾರ್ಯಕರ್ತರು ದೇಶ ರಕ್ಷಣೆಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಹೋರಾಟ ಮಾಡುತ್ತಿದ್ದಾರೆ. ಹಿಂದುತ್ವದ ಉಳಿವಿಗಾಗಿ ಸಂಘದ ಹಲವರು ಪ್ರಾಣ ತ್ಯಾಗ ಮಾಡಿರುವುದು ಕಣ್ಣ ಮುಂದಿದೆ. ಅಲ್ಲದೆ ದೇಶದ ಏಕತೆ ಮತ್ತು ಸಮನ್ವಯತೆಗಾಗಿ ಹೋರಾಡಿದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಎಲ್ಲೂ ಕೂಡ ಸಂಘದ ಸದಸ್ಯರು ದೇಶದ್ರೋಹಿ ಘಟನೆಗಳಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ಪ್ರಿಯಾಂಕ್ ಖರ್ಗೆ ಇಂತಹ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿದ್ದುಕೊಂಡು ಮಸಲತ್ತು ಮಾಡುತ್ತಿರುವವರನ್ನು ಮೊದಲು ಆಚೆ ಕಳುಹಿಸಲಿ. ಭಾರತ ಮಾತೆಗೆ ಅವಮಾನ ಮಾಡುವುದರ ಜತೆಗ ಭಯೋತ್ಪಾದನೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿ ಸಾಕ್ಷಿ ಸಮೇತ ಸಿಕ್ಕಿ ಹಾಕಿಕೊಂಡಿರುವವರನ್ನು ಗಡಿಪಾರಿ ಮಾಡುವ ಕೆಲಸವನ್ನು ಸಚಿವರು ಮೊದಲು ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಶಿಸ್ತು, ಸಂಯಮ ಹಾಗೂ ಪ್ರಮಾಣಿಕತೆಯ ಪ್ರತಿರೂಪವಾಗಿರುವ ಆರ್‌ಎಸ್‌ಎಸ್ ದೇಶಕ್ಕೆ ಮುಕುಟವಿದ್ದಂತೆ. ಇಂತಹ ಸಂಘಟನೆಯನ್ನು ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಇಂತಹ ಆಲೀಚನೆಗಳನ್ನು ಸಚಿವರು ತಮ್ಮ ತಲೆಯಿಂದ ತೆಗೆದುಹಾಕಲಿ ಎಂದು ತಿಳಿಸಿದ್ದಾರೆ.vtu

Key words: Former Mayor, Shivakumar, challenge, Minister, Priyank Kharge,