ಮೈಸೂರು,ಜೂನ್,24,2025 (www.justkannada.in): ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ನಗರದ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಆರೋಪಿಸಿದ್ದಾರೆ.
ನವ ನಗರ ನಿರ್ಮಾಣ ಕುರಿತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಗೋಮಾಳ ಜಾಗವನ್ನು ಅತಿಕ್ರಮಣಮಾಡಿಕೊಂಡು ಅಕ್ರಮವಾಗಿ ಲೇಔಟ್ಗಳನ್ನು ನಿರ್ಮಿಸಿರುವವರ ವಿರುದ್ಧ ಸಚಿವರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತಾಗಬೇಕು. ಆ ಬಳಿಕ ನವನಗರ ಕುರಿತು ಹೇಳಿಕೆ ನೀಡಲಿ. ಅಲ್ಲದೆ ಅಧಿಕಾರಿಗಳು ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ನಗರದ ಅಭಿವೃದ್ಧಿ ಬಗ್ಗೆ ಚಿಂತನೆ ಹರಿಸುತ್ತಿಲ್ಲ ಎಂದು ಎಂ.ಜೆ. ರವಿಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿರುವ ಭೈರತಿ ಸುರೇಶ್ ಮುಖ್ಯಮಂತ್ರಿಗಳ ತವರಿನ ಅಭಿವೃದ್ಧಿಗೆ ಏಕೆ ಅನುದಾನ ನೀಡುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, ಏಳು ವರ್ಷದ ಹಿಂದೆ ಅಳವಡಿಸಲಾದ ಹೆರಿಟೇಜ್ ಕಂಬಗಳಿಗೆ ಬಣ್ಣ ಹೊಡೆದಿಲ್ಲ. ಸಮರ್ಪಕ ರೀತಿಯಲ್ಲಿ ರಸ್ತೆ ಅಭಿವೃದ್ಧಿಗೊಳಿಸಿಲ್ಲ. ರೆವಿನ್ಯೂ ದಂಧೆ, ಅಕ್ರಮ ಕಟ್ಟಡಗಳಿಗೆ ತಡೆ ಇಲ್ಲದಂತಾಗಿದೆ ಎಂದು ದೂರಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಪಾಲಿಕೆಗೆ ನೂರು ಕೋಟಿ ಅನುದಾನ ನೀಡುವ ಮೂಲಕ ಮೈಸೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಆದರೀಗ ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪ ಮೈಸೂರಿನವರೇ ಆಗಿದ್ದರೂ ಪಾಲಿಕೆಗೆ ಅನುದಾನ ನೀಡದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಅಧಿಕಾರಿಗಳು ಕಮಿಷನ್ ಕೆಲಸಕ್ಕೆ ಒತ್ತು ನೀಡುತ್ತಿದ್ದಾರೆ. ಅವೈಜ್ಞಾನಿಕ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಕಟ್ಟಡ ನಿರ್ಮಾಣದಲ್ಲಿ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಠ ಉಂಟು ಮಾಡಲಾಗುತ್ತಿದೆ. ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಪ್ರತಿನಿಧಿಸುವ ಜಿಲ್ಲೆಗೆ ಅನುದಾನ ಇಲ್ಲದೆ. ಜಿಲ್ಲೆ ಸೊರಗುವಂತಾಗಿದೆ. ಶಾಸಕರು ಅನುದಾನ ಇಲ್ಲದೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿರುವ ಅಪಾಯದ ಹಂತದಲ್ಲಿರುವ ಮರಗಳನ್ನು ತೆರವು ಮಾಡುತ್ತಿಲ್ಲ. ನಗರದ ಸ್ವಚ್ಛತೆಗೆ ಒತ್ತು ನೀಡುತ್ತಿಲ್ಲ. ಪ್ರಾಧಿಕಾರಕ್ಕೆ ಚುನಾವಣೆ ನಡೆಸಿ ಜನಪ್ರತಿನಿಧಿಗಳನ್ನು ಆಯ್ಕೆಮಾಡಿದರೆ ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ನಗರಾಭಿವೃದ್ಧಿ ಸಚಿವರು ಗಮನ ಹರಿಸಲಿ:
ನಗರಾಭಿವೃದ್ಧಿ ಸಚಿವರು ಮುಖ್ಯಮಂತ್ರಿಗಳ ತವರು ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡದ್ದಾರೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ಜನತೆ ಅವೈಜ್ಞಾನಿಕ ಲೇಔಟ್ ನಿರ್ಮಾಣದ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದರು. ಸರಿಯಾದ ರೀತಿಯಲ್ಲಿ ರಸ್ತೆ, ಪಾರ್ಕ್ ನಿರ್ಮಿಸದೆ ಲೇಔಟ್ ನಿರ್ಮಾಣಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ ಎಂದು ರವಿ ಕುಮಾರ್ ದೂರಿದ್ದಾರೆ.
Key words: MDA, corporation, representatives, Former Mayor, M.J. Ravikumar