ಪ್ರಾರಂಭದಲ್ಲೇ ಕ್ಯಾನ್ಸರ್‌ ಪತ್ತೆ ಅನಿವಾರ್ಯ: ಸಚಿವ ದಿನೇಶ್‌ ಗುಂಡೂರಾವ್‌.

ಬೆಂಗಳೂರು,ಜನವರಿ,29,2024(www.justkannada.in):  ಬದಲಾದ ಜೀವನ ಶೈಲಿ ಹಾಗೂ ಪಾಶ್ಚಾತ್ಯ ಆಹಾರ ಪದ್ದತಿ ಅಳವಡಿಕೆಯಿಂದಾಗಿ ವಿವಿಧ ರೀತಿಯ ಕ್ಯಾನ್ಸರ್‌ ಖಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ, ಹೀಗಾಗಿ ಆರಂಭದಲ್ಲಿಯೇ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವ ಕೆಲಸ ಹೆಚ್ಚಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಫೋರ್ಟಿಸ್‌ ಆಸ್ಪತ್ರೆ ನಗರದಲ್ಲಿ ಆಯೋಜಿಸಿದ್ದ “ಫೊರ್ಟಿಸ್‌ ಕ್ಯಾನ್ಸರ್‌ ಸಮ್ಮಿಟ್‌”ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಮಾರಕವಾಗಿ ಎಲ್ಲರನ್ನು ಹರಡುತ್ತಿದೆ. ಹಿಂದೆಲ್ಲಾ ಈ ಕಾಯಿಲೆ ವಯಸ್ಸಾದ ಬಳಿಕ ಅಥವಾ ಕೆಲವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು, ಆದರಿಂದ ಸಾಕಷ್ಟು ಜನರು ಕ್ಯಾನ್ಸರ್‌ ಗೆ ತುತ್ತಾಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಹೀಗಾಗಿ ಕ್ಯಾನ್ಸರ್‌ ನ ಬಗ್ಗೆ ಮೊದಲು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕ್ಯಾನ್ಸರ್‌ ಗೆ ಔಷಧಿ ಕಂಡುಹಿಡಿಯುವ ಕೆಲಸ ನಿರಂತರವಾಗಿ ಸಾಗುತ್ತಿರುವುದು ಎಲ್ಲರಿಗೂ ತಿಳಿದಿದೆ.  ಆದಾಗ್ಯೂ ಈ ಖಾಯಿಲೆ ಬಗ್ಗೆ ಹೆಚ್ಚು ಜಾಗೃತಿ ವಹಿಸಿ, ನಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಇನ್ನು, ಕ್ಯಾನ್ಸರ್‌ ಪತ್ತೆ ಹಚ್ಚುವ ಕೆಲಸ ಪ್ರಾರಂಭದಲ್ಲಿಯೇ ಆಗುವುದರಿಂದ ಅದರ ಚಿಕಿತ್ಸೆ ಕೂಡ ಸುಲಭ. ಈಗಂತೂ ಕೃತಕ ಬುದ್ದಿಮತ್ತೆಯಂತಹ ತಂತ್ರಜ್ಞಾನಗಳಿಂದ ನಿಖರವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಿವೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜೀವನ ಶೈಲಿ ಸುಧಾರಿಸಿಕೊಳ್ಳುವ ಜೊತೆಗೆ, ಕ್ಯಾನ್ಸರ್‌ನಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಿವಿ ಮಾತು ಹೇಳಿದರು.

ಕ್ಯಾನ್ಸರ್‌ ತಜ್ಞ ಡಾ. ನಿತಿ ರೈಝಾದಾ ಮಾತನಾಡಿ, ಕ್ಯಾನ್ಸರ್‌ ಎಲ್ಲಾ ವಯೋಮಾನದವರಲ್ಲೂ ಕಾಣುತ್ತಿದೆ. ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಟೇಟ್‌, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್‌ ಕಾಣಿಸುತ್ತಿದ್ದರೆ, ಮಹಿಳೆಯರಲ್ಲಿ ಗರ್ಭಕಂಠ, ಸ್ತನದ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸಲಿದೆ, ಅದರಲ್ಲೂ ಗರ್ಭಕಂಠದ ಕ್ಯಾನ್ಸರ್‌ಗೆ ಹೆಚ್ಚಾಗಿ ಗ್ರಾಮೀಣ ಭಾಗದ ಮಹಿಳೆಯರೇ ತುತ್ತಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಫೋರ್ಟಿಸ್‌ ಹೆಲ್ತ್‌ ಕೇರ್‌ ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಶುತೋಷ್‌ ರಘುವಂಶಿ ಮತ್ತಿತರರು ಉಪಸ್ಥಿತರಿದ್ದರು.

Key words: Early detection – cancer – essential-Minister-Dinesh Gundurao