ಬಿಜೆಪಿ ಅಭ್ಯರ್ಥಿ ಯದುವೀರ್ ಗೆ ಮಾಜಿ ಸಿಎಂ ದೇವರಾಜ ಅರಸು ಮೊಮ್ಮಗ ಬೆಂಬಲ ಘೋಷಣೆ.

ಮೈಸೂರು,ಏಪ್ರಿಲ್,11,2024 (www.justkannada.in): ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ಹೆಚ್ಚಾಗಿದ್ದು ಈ ನಡುವೆ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಗೆ ಮಾಜಿ ಸಿಎಂ ದೇವರಾಜ ಅರಸು ಅವರ ಮೊಮ್ಮಗ ಮಂಜುನಾಥ್ ಅರಸು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಾಜಿ ಸಂಸದೆ ಚಂದ್ರಪ್ರಭಾ ಅರಸು ಅವರ ಪುತ್ರ ಮಂಜುನಾಥ್ ಅರಸು ಅವರು  ಹಣುಸೂರಿನ ಅರಸು ಕಲ್ಲಹಳ್ಳಿಯಲ್ಲಿ  ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ  ಬೆಂಬಲ ಘೋಷಣೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ಮಾಡಿದರು.  ಹುಣಸೂರು ಪಟ್ಟಣದ ಮಾಜಿ ಸಿಎಂ ಡಿ.ದೇವರಾಜ ಅರಸ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ  ಡಿ.ದೇವರಾಜ ಅರಸು ಸಮಾಧಿಗೆ ಯದುವೀರ್ ಒಡೆಯರ್ ಪೂಜೆ ಸಲ್ಲಿಕೆ ಮಾಡಿದರು. ಈ ಮೂಲಕ  ಸಾಮಾಜಿಕ ನ್ಯಾಯದ ಹರಿಕಾರನಿಗೆ ಮೈತ್ರಿ ನಾಯಕರು ಗೌರವ ಸಲ್ಲಿಸಿದರು.

ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಯದುವೀರ್ ಒಡೆಯರ್ ಅವರಿಗೆ  ಸ್ಥಳೀಯ ಶಾಸಕ‌ ಜಿ.ಡಿ. ಹರೀಶ್ ಗೌಡ, ದೇವರಾಜ ಅರಸು ಅವರ ಮೊಮ್ಮಗ ಮಂಜುನಾಥ್ ಅರಸ್ ಸಾಥ್ ನೀಡಿದರು.

ಯದುವೀರ್ ಒಡೆಯರ್ ಹುಣಸೂರಿನ ಮೊಮ್ಮಗ: ನಮ್ಮ ತಾಲೂಕಿನ ಅಭ್ಯರ್ಥಿಗೆ ಮತ ಹಾಕಿ- ಶಾಸಕ ಜಿಡಿ ಹರೀಶ್ ಗೌಡ.

ಈ ವೇಳೆ ಮಾತನಾಡಿದ ಶಾಸಕ ಜಿಡಿ ಹರೀಶ್ ಗೌಡ, ಯದುವೀರ್ ಒಡೆಯರ್ ಹುಣಸೂರಿನ ಮೊಮ್ಮಗ. ನಮ್ಮ ತಾಲೂಕಿನ ಅಭ್ಯರ್ಥಿಗೆ ಮತ ಹಾಕಿ.  ಯದುವೀರ್ ನಮ್ಮ ತಾಲೂಕಿನವರು ಅನ್ನೋದು ಈಗ ಗೊತ್ತಾಯ್ತು‌. ಯದುವೀರ್ ಅವರ ತಾಯಿಯ ತಾಯಿ ಅರಸು ಕಲ್ಲಹಳ್ಳಿಯವರು. ಮೈಸೂರು ರಾಜರು ಕೃಷಿ ಭೂಮಿಗೆ ನೀರಾವರಿ ಒದಗಿಸಿದ ಮನೆತನ. ಅಂತಹ ಕುಟುಂಬಕ್ಕೆ ಮತ ಹಾಕುವುದು ನಮ್ಮ ಪುಣ್ಯ. ನಮ್ಮ ತಾಲೂಕಿನ ಮೊಮ್ಮಗನಿಗೆ ಮತ ಹಾಕಿದಂತೆ ಆಗುತ್ತೆ.  ಹುಣಸೂರು ಕ್ಷೇತ್ರದಲ್ಲೇ 25 ಸಾವಿರ ಲೀಡ್ ಕೊಡಬೇಕು.  ಆ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ನಾನು‌ ಚುನಾವಣೆಗೋಸ್ಕರ ಗಿಮಿಕ್ ಮಾಡ್ತಿಲ್ಲ-ಯದುವೀರ್

ಮಾಜಿ ಸಿಎಂ ದಿ. ದೇವರಾಜ ಅರಸು ಅವರ ಸಮಾಧಿಗೆ ಪೂಜೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ನಾನು‌ ಚುನಾವಣೆಗೋಸ್ಕರ ಗಿಮಿಕ್ ಮಾಡ್ತಿಲ್ಲ. ನಾವು ಚುನಾವಣೆಗೆ ತಂತ್ರಗಾರಿಕೆ ಮಾಡುತ್ತಿಲ್ಲ. ಅವರು ಒಳ್ಳೆ ಕೆಲಸ ಮಾಡಿರುವ ಕಾರಣ ನಾವು ಗೌರವಿಸುತ್ತಿದ್ದೇವೆ. ದೇವರಾಜ ಅರಸು ಅವರು ನಮ್ಮ ಸಮುದಾಯ, ಸಂಬಂಧಿಕರೂ ಆಗಿದ್ದಾರೆ. ನಮಗೆ ಎಲ್ಲರೂ ಕೂಡ ಬೆಂಬಲ ನೀಡುವ ವಿಶ್ವಾಸ ಇದೆ. ನಮಗೆ ಗೆಲ್ಲುವ ವಿಶ್ವಾಸ ಹೆಚ್ಚಿದೆ. ಹೆಚ್ಚಿನ ಲೀಡ್ ನಲ್ಲಿ ಗೆಲ್ಲುವ ನಂಬಿಕೆ ಇದೆ ಎಂದರು.

ಮಹಾರಾಜ ಕುಟುಂಬದ ಮೇಲೆ ಅಪಾರ ಗೌರವ: ನಾನು ಬೆಂಬಲ ಸೂಚಿಸುತ್ತಿದ್ದೇನೆ- ಮಂಜುನಾಥ್ ಅರಸು.

ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಬೆಂಬಲ ಘೋಷಿಸಿ ಮಾತನಾಡಿದ ದಿ.ದೇವರಾಜ ಅರಸು ಮೊಮ್ಮಗ ಮಂಜುನಾಥ್ ಅರಸು, ಮಹಾರಾಜ ಕುಟುಂಬದ ಮೇಲೆ ಅಪಾರ ಗೌರವ ಆ ಕಾರಣಕ್ಕೆ ಅವರನ್ನ ನಾನು ಬೆಂಬಲ ಸೂಚಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಅರಸು ಅವರನ್ನ ಬಳಸಿಕೊಳ್ತಿದ್ದಾರೆ. ಸಭೆ- ಸಮಾರಂಭಗಳಲ್ಲಿ ಫೋಟೋ ಇಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಳ್ತಾರೆ ಎಂದು ಕಿಡಿಕಾರಿದರು.

ನಾನಿನ್ನೂ ಬಿಜೆಪಿ ಸೇರ್ಪಡೆ ಆಗಿಲ್ಲ. ಮಹಾರಾಜ ಕುಟುಂಬದ ಮೇಲೆ ಅಪಾರ ಗೌರವವಿದೆ. ಆ ಕಾರಣಕ್ಕೆ ಅವರನ್ನ ನಾನು ಬೆಂಬಲ ಸೂಚಿಸುತ್ತಿದ್ದೇನೆ. ಕಾಲ ಪಕ್ವವಾದ ಬಳಿಕ ನಾನು ಬಿಜೆಪಿ ಸೇರುತ್ತೇನೆ. ಬಿಜೆಪಿ ಬಾವುಟ ಹಾಕಿದ್ದೇನೆ. ಮುಂದೆ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ. ನನಗೆ ಮೋದಿ ಅವರ ಸಿದ್ಧಾಂತ ಇಷ್ಟವಾಗಿದೆ. ಪ್ರಪಂಚದಲ್ಲೇ ಭಾರತವನ್ನ ಗುರುತಿಸುವಂತೆ ಮಾಡಿದ್ದಾರೆ. ಹಲವು ಯೋಜನೆಗಳು ನನಗೆ ಇಷ್ಟವಾಗಿದೆ. ದೇವರಾಜ ಅರಸು ಅವರನ್ನ ಕೊನೆಗಾಲದಲ್ಲಿ ಕೆಟ್ಟದಾಗಿ ನಡೆಸಿಕೊಂಡರು. ವಿಪಕ್ಷ ನಾಯಕ ಹೇಗೆ ಆದರು? ಕ್ರಾಂತಿರಂಗ ಪಕ್ಷ ಕಟ್ಟಿ ಏನೆಲ್ಲಾ ಆಯ್ತು. ಅದೆಲ್ಲ ಬಿಡಿ, ನಮ್ಮ ಕುಟುಂಬಕ್ಕೆ ಕಾಂಗ್ರೆಸ್ ನವರು ಏನು ಮಾಡಿದ್ದಾರೆ. ಪೋಸ್ಟರ್ ಅಲ್ಲಿ ಅವರ ಹೆಸರು ಬೇಕು? ಕಾರ್ಯಕ್ರಮಗಳಲ್ಲಿ ಅವರ ಫೋಟೋ ಬಳಸಿಕೊಳ್ಳಬೇಕು ಅಷ್ಟೇ ಅವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

ಕೆಲವರು ಅವರನ್ನ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲ್ಲ. ಇಂದಿರಾಗಾಂಧಿ ಅವರನ್ನೇ ಕರೆದುಕೊಂಡು ಬಂದು ಗೆಲ್ಲಿಸಿದವರು. ರಾಜಕೀಯವಾಗಿ ನಮ್ಮನ್ನ ಬಳಸಿಕೊಂಡರು. ಚಂದ್ರಪ್ರಭಾ ಅರಸು ಅವರು ಎಂಎಲ್ ಎ ಆಗಿದ್ದರು. ಅವರ ರಾಜೀನಾಮೆ ಕೊಡಿಸಿ ಎಂಪಿ‌ ಚುನಾವಣೆಗೆ ನಿಲ್ಲಿಸಿದ್ದರು. ಆದರೆ, ಚಂದ್ರಪ್ರಭಾ ಅವರು ಅವರನ್ನೂ ಕೂಡ ಕಡೆಗಣಿಸಿದರು. ಇಡಿ‌ ಕರ್ನಾಟಕದ ಜನತೆಗೆ ಗೊತ್ತಿದೆ. ಈಗ ಇರುವ ಎಲ್ಲಾ ದೊಡ್ಡ ನಾಯಕರನ್ನ ಬೆಳೆಸಿದ್ದು ದೇವರಾಜ ಅರಸು ಅವರು. ಆದರೆ, ಅಂತಹವರನ್ನ ,ಅವರ ಕುಟುಂಬವದನ್ನ ಕಡೆಗಣಿಸಿದ್ದರು. ರಾಜಕೀಯವಾಗಿ ಯಾವುದೇ ಸ್ಥಾನ ಮಾನ ನೀಡಿಲ್ಲ. ನಾನು ಈವರೆಗೆ ಸಿಎಂ ಹಾದಿಯಾಗಿ ಯಾರನ್ನೂ ಭೇಟಿ ಆಗಿಲ್ಲ. ನಮ್ಮ ಚಿಕ್ಕಮ್ಮನ ಮಗ ಕೂಡ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಅವರಿಗೆ ಕೂಡ ಯಾವುದೇ ಸ್ಥಾನ – ಮಾನ ನೀಡಿಲ್ಲ.

70 ನೇ ಶತಮಾನಕ್ಕೂ ಈಗಿನ ಕಾಲಕ್ಕೂ ಬದಲಾವಣೆ ಆಗಿದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಿದ್ದೇವೆ. ನಾನು ಈಗ  ಬಿಜೆಪಿ, ಮೋದಿ ಬೆಂಬಲಿಸುವೆ. ನಾಲ್ವಡಿ ಅವರ ಕಾರ್ಯವೈಖರಿ ಮೆಚ್ಚಿ ಯದುವೀರ್ ಬೆಂಬಲಿಸುವೆ ಎಂದು ಮಂಜುನಾಥ್ ಅರಸು ಹೇಳಿದರು.

Key words: Devaraja Arasu, grandson, support, Yaduveer