ಅ.13 ರಂದು ಮಹಿಷ ದಸರಾ ಆಚರಣೆಗೆ ನಿರ್ಧಾರ- ಮಾಜಿ ಮೇಯರ್ ಪುರುಷೋತ್ತಮ್ ಮಾಹಿತಿ.

ಮೈಸೂರು,ಸೆಪ್ಟಂಬರ್,7,2023(www.justkannada.in):   ಅಕ್ಟೋಬರ್ 13 ರಂದು ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ನಿರ್ಧಾರ ಮಾಡಿದೆ.

15/10/2023ರಂದು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಆದಕ್ಕೂ ಮುನ್ನ ಅಕ್ಟೋಬರ್ 13 ರಂದು ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ತೀರ್ಮಾನಿಸಿದ್ದು, ಅಂದು ಬೆಳಿಗ್ಗೆ11 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಚನೆ ಮಾಡುವ ಮೂಲಕ  ಮಹಿಷ ದಸರೆಗೆ ಚಾಲನೆ  ಸಿಗಲಿದೆ.

ಸೆಪ್ಟಂಬರ್ 10 ರಂದು ಲಲಿತ ಕಲೆಗಳ ಕಾಲೇಜು ಸಭಾಂಗಣ ಮಾನಸ ಗಂಗೋತ್ರಿಯಲ್ಲಿ ಮಹಿಷ ಮಂಡಲದ ಆದಿ ದೊರೆ ಮಹಿಷಾಸುರ  ಒಂದು ಚಾರಿತ್ರಿಕ ನೋಟ ಕುರಿತು ವಿಚಾರ ಸಂಕಿರಣ ನಡೆಯಲಿದೆ.

ಈ ಕುರಿತು  ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಮಹಿಷ ದಸರಾ ಆಚರಣೆ ಸಮಿತಿಯಿಂದ ಸುದ್ದಿಗೋಷ್ಠಿ ನಡೆಯಿತು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಮಾಡಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಚಾಮುಂಡಿ ಬೆಟ್ಟದ ಮೇಲೆ ಸ್ಥಳಾವಕಾಶದ ಕೊರತೆ ಇದೆ. ಹಾಗಾಗಿ ವೇದಿಕೆ ಕಾರ್ಯಕ್ರಮವನ್ನು ಬೆಟ್ಟದ ತಪ್ಪಲಿನಲ್ಲಿ ಸೂಕ್ತವಾದ ಸ್ಥಳದಲ್ಲಿ ಆಯೋಜನೆ ಮಾಡಲಾಗುವುದು. ಈ ಬಾರಿಯ ಮಹಿಷ ದಸರಾ ಆಚರಣೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಇತರೆ ಕಡೆಗಳಿಂದ ಆಗಮಿಸುವ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. ಮಹಿಷ ದಸರಾ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.  ಪೊಲೀಸ್ ಇಲಾಖೆ ಕೂಡ ಸಹಕಾರ ಕೊಡುವ ನಿರೀಕ್ಷೆಯಿದೆ. ಮಹಿಷ ದಸರಾಗೂ, ನಾಡಹಬ್ಬ ದಸರಾಗೂ ಸಂಬಂಧವಿಲ್ಲ ಎಂದರು.

ಮಹಿಷ ದಸರಾ ಆಚರಣೆಗೆ ಪೂರ್ವಭಾವಿಯಾಗಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದಿಂದ ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 10ರಂದು ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಮೂರು ಗೋಷ್ಠಿ ನಡೆಯಲಿವೆ ನಡೆಯಲಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ 28 ಮಂದಿ ಪ್ರಗತಿಪರ ಚಿಂತಕರು ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

Key words: Decision – celebrate -Mahisha Dasara –october 13- Former Mayor -Purushottam