ಬೆಂಗಳೂರು, ಆ.೧೨,೨೦೨೫: “ಗಣೇಶ ವಿಗ್ರಹ ತಂದದ್ದು ಬಿಜೆಪಿ ಶಾಸಕ, ಪ್ರಧಾನಿಗೆ ಕೊಟ್ಟದ್ದು ಡಿಸಿಎಂ ಡಿ ಕೆ ಶಿವಕುಮಾರ್” ಎಂಬ ಸಾರಾಂಶ ಹೊತ್ತು “ವಿಜಯವಾಣಿ” ಪತ್ರಿಕೆಯಲ್ಲಿ ಪ್ರಕಟವಾಗಿರೋ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಡಿಸಿಎಂ ಮಾಧ್ಯಮ ಸಲಹೆಗಾರ ತ್ಯಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ತ್ಯಾಗರಾಜ್ ಹೇಳಿರುವುದು ಹೀಗೆ….
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಟ್ರೋಲ್ ಆಗಿದೆ. ಸತ್ಯ, ಅಸತ್ಯ ನೋಡದೇ, ತಲೆಬುಡ ಸೋಸದೇ “ಡಿಸಿಎಂ ಗುರಿ”ಕಾರರು ಈ ಸುದ್ದಿಯನ್ನು ಯದ್ವಾ-ತದ್ವಾ ಹಂಚಿಕೊಂಡಿದ್ದಾರೆ. ಬಾಯಿಗೆ ಬಂದಂತೆ ಟೀಕೆ ಮಾಡಿದ್ದಾರೆ!
ಆದರೆ ವಾಸ್ತವವಾಗಿ ಡಿಸಿಎಂ ಅವರೇ ಈ ಬೆಳ್ಳಿ ಗಣಪತಿ ವಿಗ್ರಹವನ್ನು ಅವರ ಮನೆಯಿಂದ ತೆಗೆದುಕೊಂಡು ಬಂದದ್ದು, ಅವರ ಕಚೇರಿ ಸಿಬ್ಬಂದಿಯೇ ಪ್ರಧಾನಿ ಭದ್ರತೆ ಹೊಣೆ ಹೊತ್ತ ಎಸ್ಪಿಜಿಯವರಿಗೆ ಕೊಟ್ಟು ತಪಾಸಣೆ ನಡೆಸಿದ್ದು, ಎಸ್ಪಿಜಿ ಸಿಬ್ಬಂದಿಯೇ ಈ ವಿಗ್ರಹವನ್ನು ಪ್ರಧಾನಿ ಅವರಿಗೆ ಡಿಸಿಎಂ ಅವರು ನೀಡಲು ನೆರವಾದದ್ದು!!
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರನಾಗಿ ಈ ಎಲ್ಲಕ್ಕೂ ನಾನು ಪ್ರತ್ಯಕ್ಷ ಸಾಕ್ಷಿ.
ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರೇ ನನಗೆ ದೂರವಾಣಿ ಕರೆ ಮಾಡಿ, “ಪೇಪರ್ ನಲ್ಲಿ ಸುಳ್ಳು ಸುದ್ದಿ ಹಾಕಿದ್ದಾರೆ. ನಾನು ಯಾರಿಗೂ ಈ ರೀತಿ ಹೇಳಿಲ್ಲ. ನಾನು ಸ್ಟೇಜ್ ಮೇಲೆ ಹೋಗೋಕೇ ಅವಕಾಶ ಇರಲಿಲ್ಲ. ಇನ್ನು ಪ್ರಧಾನಿಗೆ ಗಣೇಶ ವಿಗ್ರಹ ಹೇಗೆ ಕೊಡಲಿ? ಈ ಬಗ್ಗೆ ಪತ್ರಿಕೆಯವರಿಗೆ ಸ್ಪಷ್ಟನೆ ಕೊಡ್ತೇನೆ” ಅಂತ ಹೇಳಿದ್ರು.
ಹಾಗಾದರೆ ಈ ಸುದ್ದಿ ಸೃಷ್ಟಿಯಾದದ್ದು ಹೇಗೆ? ವರದಿ ಬರೆದ ಬೃಹಸ್ಪತಿಗೆ ಈ ಸುದ್ದಿ ಕೊಟ್ಟವರು ಯಾರು? ಸುದ್ದಿ ಕೆತ್ತುವ ಮುನ್ನ ಖಚಿತ ಮಾಡಿಕೊಳ್ಳಬೇಕು ಎನ್ನುವ ಸಾಮಾನ್ಯ ಪರಿಜ್ಞಾನ ಬೇಡವೇ?!
“ಸುದ್ದಿ ಸಣ್ಣದು, ಸುಳ್ಳು ದೊಡ್ಡದು, ಪ್ರಭಾವ ಕೆಟ್ಟದ್ದು”. ಪತ್ರಿಕೆಯವರಿಗೆ ಸ್ಪಷ್ಟನೆ ನೀಡಬಹುದು. ಆದರೆ ಸಾಮಾಜಿಕ ಜಾಲತಾಣದವರಿಗೆ?
ಹೀಗಾಗಿ ಈ ಪೋಸ್ಟ್..!
key words: “Vijayavani” newspaper, completely false, DCM, media advisor
This news from “Vijayavani” newspaper is completely false: DCM’s media advisor