ಅಣೆಕಟ್ಟು ಸುರಕ್ಷತೆ:  ಒಡೆಯರ್, ಅರಸು ಸ್ಮರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆಬ್ರವರಿ,13,2026 (www.justkannada.in): ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮಾಜಿ ಸಿಎಂ ದಿ. ಡಿ.ದೇವರಾಜ ಅರಸು ಅವರನ್ನು ಸಿಎಂ ಸಿದ್ದರಾಮಯ್ಯ ಸ್ಮರಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ 2026 ನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಬರಡು ಪ್ರದೇಶಗಳನ್ನು ಫಲವತ್ತಾದ ಬಯಲುಗಳಾಗಿ ಪರಿವರ್ತಿಸಿದ ನೀರಾವರಿ ಕಾಮಗಾರಿಗಳಿಗೆ ನೆರವು ಒದಗಿಸಲು ಅಸಾಧಾರಣ ದೂರದೃಷ್ಟಿಯನ್ನು ತೋರಿದರು. ನಂತರ ದೇವರಾಜ ಅರಸು ಅವರಿಂದ ಮೊದಲುಗೊಂಡು ನಂತರದಲ್ಲಿ ಬಂದ  ಆಡಳಿತವು, ಸಮಾನ ಪ್ರಾದೇಶಿಕ ಅಭಿವೃದ್ಧಿಗಾಗಿ ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸಿದರು ಎಂದು ನುಡಿದರು.

ಅಣೆಕಟ್ಟುಗಳು ಕೇವಲ ಕಾಂಕ್ರೀಟ್ ಮತ್ತು ಉಕ್ಕಿನ ರಚನೆಗಳಲ್ಲ. ಭಾರತದ ಮೊದಲ ದೂರದರ್ಶಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು “ಆಧುನಿಕ ಭಾರತದ ದೇವಾಲಯಗಳು” ಎಂದು ಕರೆದಿದ್ದರು. ಇವು ನಮ್ಮ ಸಾಮೂಹಿಕ ಆಕಾಂಕ್ಷೆಗಳ ಸಂಕೇತಗಳು. ಕೃಷಿ ಸಮೃದ್ಧಿ ಮತ್ತು ಕೈಗಾರಿಕಾ ಪ್ರಗತಿಯ ಜೀವಾಳವೂ ಆಗಿವೆ. ಭಾರತದಲ್ಲಿ ಇಂದು 6,628 ನಿರ್ದಿಷ್ಟ ಅಣೆಕಟ್ಟುಗಳಿವೆ. ಈ ಮೂಲಕ ನಾವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಅಣೆಕಟ್ಟುಗಳನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ಕರ್ನಾಟಕದಲ್ಲಿ 231 ನಿರ್ದಿಷ್ಟ ಅಣೆಕಟ್ಟುಗಳಿದ್ದು, ದೇಶದಲ್ಲಿ ಆರನೇ ಸ್ಥಾನದಲ್ಲಿದೆ ಎಂದರು.

ಅಣೆಕಟ್ಟುಗಳು ಕರ್ನಾಟಕವನ್ನು ಸಾಮಾಜಿಕ, ಆರ್ಥಿಕ ಸ್ಥಿತಿಯನ್ನಲ್ಲದೆ  ಪರಿಸರವನ್ನೂ  ಮಾರ್ಪಡಿಸಿವೆ. ಮುಂಗಾರಿನ  ಅನಿಶ್ಚಿತತೆಯನ್ನು ಲಕ್ಷಾಂತರ ಜನರಿಗೆ ಭರವಸೆಯ ಜೀವಾಳವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ. ಜಲವಿದ್ಯುತ್ ಮತ್ತು ಬಹುಪಯೋಗಿ ಜಲಾಶಯಗಳು ಅಪಾರ ಶಕ್ತಿ ಮತ್ತು ನೀರಿನ ಭದ್ರತೆಯನ್ನು ಒದಗಿಸುತ್ತಿವೆ. ಕರ್ನಾಟಕದ ಸ್ಥಾಪಿತ ಜಲವಿದ್ಯುತ್ ಸಾಮರ್ಥ್ಯ ಸುಮಾರು 4,800 ಮೆಗಾವ್ಯಾಟ್. ರಾಜ್ಯದ ಜಲಾಶಯಗಳಲ್ಲಿ ನೂರಾರು ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ. ಇದು ನೀರಾವರಿ ಮತ್ತು ನಗರಗಳ ನೀರಿನ ಅಗತ್ಯವನ್ನು ಪೂರೈಸುತ್ತಿದೆ. ಕೃಷ್ಣಾ, ಕಾವೇರಿ ಮತ್ತಿತರ ನದಿಗಳ ಬಳಿ ನಿರ್ಮಿತವಾದ ಜಲಾಶಯ ಯೋಜನೆಗಳು, ಅಲ್ಲಿನ ಜಿಲ್ಲೆಗಳಲ್ಲಿ ಕೃಷಿ , ನೀರಿನ ಅಗತ್ಯಗಳು ಮತ್ತು ಜನಜೀವನವನ್ನು ಸುಸ್ಥಿರಗೊಳಿಸಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Dam, safety, CM Siddaramaiah, remembers, Nalvadi krishnaraja Wodeyar, Devaraj Urs