ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ.

ಅಯೋಧ್ಯೆ, ಜನವರಿ,22,2024(www.justkannada.in): ಕೋಟ್ಯಾಂತರ ರಾಮಭಕ್ತರ ಕನಸು ಇಂದು ನನಸಾಗುತ್ತಿದ್ದುಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರೋ ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ.

ಈ ಅದ್ಧೂರಿ ಕಾರ್ಯಕ್ರಮಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಎಲ್ಲ ಸಿದ್ಧತೆಗಳು ನಡೆದಿವೆ. ಅಯೋಧ್ಯಾ ನಗರವು ಸಂಪೂರ್ಣವಾಗಿ ಅಲಂಕರಿಸಲ್ಪಟ್ಟಿದ್ದು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.  ಪ್ರಧಾನಿ ನರೇಂದ್ರ ಮೋದಿ, ಜನಪ್ರಿಯ ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು, ಸಂತರು, ಸೆಲೆಬ್ರಿಟಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳನ್ನು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದ್ದು, ಅಯೋಧ್ಯೆಗೆ ರಾಮಭಕ್ತರು ಜಮಾಯಿಸಿದ್ದಾರೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಶಾನಿ ನರೇಂದ್ರ ಮೋದಿ 10.55ಕ್ಕೆ ಹೆಲಿಕಾಪ್ಟರ್‌ನಲ್ಲಿ ಶ್ರೀರಾಮ ಮಂದಿರ ತಲುಪಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೂ ಸಮಯ ಕಾಯ್ದಿರಿಸಲಾಗಿದೆ. ಮಧ್ಯಾಹ್ನ 12.05-12.55ರವರೆಗೆ ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.55ಕ್ಕೆ ಪೂಜಾ ಸ್ಥಳದಿಂದ ಹೊರಡಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಕಾರ್ಯಕ್ರಮ ಸ್ಥಳದಲ್ಲಿರುವ ಮೋದಿ, ಮಧ್ಯಾಹ್ನ 2.10ಕ್ಕೆ ಕುಬೇರ್ ತಿಲಾಗೆ ಭೇಟಿ ನೀಡಲಿದ್ದಾರೆ.

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಗೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. 13 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮಂದಿರದ ಸುತ್ತ ನಾಲ್ಕು ಹಂತದ ಭದ್ರತೆ ಏರ್ಪಡಿಸಲಾಗಿದ್ದು, ಪೊಲಿಸ್, ಆರ್​ಎಎಫ್, ಕಮಾಂಡೋ, ದೇವಾಲಯ ಭದ್ರತಾ ಅಧಿಕಾರಿಗಳಿಂದ ರಕ್ಷಣೆ ಒದಗಿಸಲಾಗುತ್ತಿದೆ. ಮಂದಿರದ ಕಾರ್ಯಕರ್ತರಿಗೆ ವಿಶೇಷ ಪಾಸ್, ಕಾರ್ಮಿಕರಿಗೂ ಸಹ ವಿಶೇಷ ಪಾಸ್ ನೀಡಲಾಗಿದೆ. ಮಂದಿರದ ಸುತ್ತಮುತ್ತ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

Key words: Countdown – Shree Ram Lalla- Prana pratishtapana- Tight security – Ayodhya