ಸಿಎಂ ಹೆಚ್.ಡಿಕೆ ಗ್ರಾಮವಾಸ್ತವ್ಯ ಬಗ್ಗೆ ಟೀಕೆ : ಹೆಚ್.ಡಿ ರೇವಣ್ಣರ ಲಿಂಬೇಹಣ್ಣಿನ ಬಗ್ಗೆ ವ್ಯಂಗ್ಯ- ಅಭಿವೃದ್ದಿಯಲ್ಲಿ ರಾಜ್ಯಕ್ಕೆ ಸಹಕಾರ ಎಂದ್ರು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ..

ಬೆಂಗಳೂರು,ಜೂ,3,2019(www.justkannada.in): ಅಭಿವೃದ್ಧಿಯಲ್ಲಿ ನಾವು ರಾಜಕಾರಣ ಮಾಡಿಲ್ಲ..ನಾವು ರಾಜ್ಯ ಸರ್ಕಾರ ಬೀಳಿಸಲ್ಲ. ರಾಜ್ಯದ ಅಭಿವೃದ್ದಿಗೆ ಕೇಂದ್ರದಿಂದ ಬೇಕಾದ ಸಹಕಾರ ನೀಡುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆಶ್ವಾಸನೆ ನೀಡಿದರು.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ,  ನಾವು ರಾಜ್ಯ ಸರ್ಕಾರ ಬೀಳಿಸಲ್ಲ.. ಅವರಾಗಿಯೇ ಬಿದ್ದರೆ ನಾವು ಜವಾಬ್ದಾರಿ ಅಲ್ಲ. ಅವರಾಗಿಯೆ ಬಿದ್ದರೆ ನಾವು ಸಿಂಗಲ್ ಲಾರ್ಜೆಸ್ಟ್  ಪಾರ್ಟಿ ಇದ್ದೇವೆ. ಕೆಲವೊಮ್ಮೆ ಎಲ್ಲಾ ಭವಿಷ್ಯ ನಿಜವಾಗಲ್ಲ. ಕುಮಾರಸ್ವಾಮಿ ರಾಜೀನಾಮೆ ನೀಡ್ತಾರೆ ಎಂದಿದ್ದು ನಿಜ. ಆದರೆ ಬೇರೆಯವರು ಅವರನ್ನು ರಾಜೀನಾಮೆ ಕೊಡದಂತೆ ತಡೆದಿರೋದು ನನ್ನ ತಪ್ಪಲ್ಲ..ದೇವೆಗೌಡರು ಮೂರು ಕ್ಷೇತ್ರ ಗೆಲ್ತಿವಿ ಅಂತಿದ್ರು. ಅವರ ಭವಿಷ್ಯ ಸುಳ್ಳಾಗಿಲ್ವಾ ಲಿಂಬೆಹಣ್ಣಿನ ಪ್ರಭಾವ ಕಡಿಮೆ ಆಗಿಲ್ವಾ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಮಾಡಿದ ಗ್ರಾಮವಾಸ್ತವ್ಯ ಅವರಿಗೆ ಸರಿಯಾದ ಫಲಕೊಟ್ಟಿಲ್ಲ..

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವಿಚಾರದ ಬಗ್ಗೆ ಟೀಕೆ ವ್ಯಕ್ತಪಡಿಸಿದ ಡಿ.ವಿ ಸದಾನಂದಗೌಡರು,  ಹಿಂದೆ ಕುಮಾರಸ್ವಾಮಿ ಮಾಡಿದ ಗ್ರಾಮವಾಸ್ತವ್ಯ ಅವರಿಗೆ ಸರಿಯಾದ ಫಲಕೊಟ್ಟಿಲ್ಲ. ಅವರು ವಾಸ್ತವ್ಯ ಮಾಡಿದ್ದ ಹಳ್ಳಿಗಳಲ್ಲೇ ಅವರಿಗೆ ತಿರುಗುಬಾಣವಾಗಿತ್ತು. ಹಾಗಾಗಿ ಈಗ ಶಾಲಾ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಹುಡುಗರು ಶಾಲೆಗಳಿಗೆ ಕಲಿಯಲು ಹೋಗುತ್ತಾರೆ. ಈಗ ಕುಮಾರಸ್ಬಾಮಿಯವರೂ ಸಹ ಶಾಲಾ ವಾಸ್ತವದ ಮೂಲಕ ಕಲಿಯಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರಧಾನಿ ಮೋದಿ ಅವರಿಂದ 100ಡೇಸ್ ಪ್ಲಾನ್

ಪ್ರಧಾನಿ ಮೋದಿ ಅವರು 100ಡೇಸ್ ಪ್ಲಾನ್ ನೀಡಿದ್ದಾರೆ. ನೂರು ದಿನಗಳಲ್ಲಿ ಯಾವೆಲ್ಲ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬೇಕು ಎಂದು ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಅಂದರೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗಾಗಿ ಪ್ರದಾನಿ ಕಾರ್ಯಾಲಯದಿಂದ ಈ ಆದೇಶ ನಮ್ಮ ಕೈ ಸೇರಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ತಿಳಿಸಿದರು.

ರಾಜ್ಯದ ಜನರು ಯಾವ ವಿಶ್ವಾಸದಿಂದ ಬಿಜೆಪಿಗೆ ಆಶೀರ್ವಾದ ಮಾಡಿದೀರೋ ಅದಕ್ಕೆ ಯಾವುದೇ ಚ್ಯುತಿ ಬರದ್ದಂತೆ ನಡೆದುಕೊಳ್ಳುತ್ತೇವೆ. ಮೋದಿ ಸರ್ಕಾರದಲ್ಲಿ ಈ ಭಾರಿಯೂ ದೇಶ ಮೊದಲು ಎನ್ನುವ ಅಭಿವೃದ್ಧಿ ಕಾರ್ಯಗಳು ಮುಂದುವರೆಯುತ್ತವೆ‌‌. ಪ್ರಥಮ ಕೇಂದ್ರ ಸಚಿವ ಸಂಪುಟದಲ್ಲಿ ತಗೆದುಕೊಂಡ ನಿರ್ಧಾರ ದೇಶದ ಅಭಿವೃದ್ಧಿಗೆ ದಿಕ್ಸೂಚಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ೪ ಕೇಂದ್ರ ಸಚಿವರು ಜನರಿಗೆ ಲಭ್ಯವಿರುವಂತೆ ನೋಡಿಕೊಳ್ಳುತ್ತೇವೆ. ದೆಹಲಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಿ ರಾಜ್ಯದ ಸಮಸ್ಯೆಗೆ ಸ್ಪಂದಿಸುವ ಕಚೇರಿ ಸ್ಥಾಪನೆ ಮಾಡುತ್ತೇವೆ. ನನ್ನ ಗೃಹ ಕಚೇರಿಯಲ್ಲಿಯೇ ಚಿಕ್ಕ ಕಚೇರಿ ಸ್ಥಾಪನೆ ಮಾಡಿ ತಿಂಗಳಿಗೆ ಒಂದು ದಿನ ನಾಲ್ವರು ಕೇಂದ್ರ ಮಂತ್ರಿಗಳು ಸಭೆ ನಡೆಸುತ್ತೇವೆ. ರಾಜ್ಯ ಮತ್ತು ಕೇಂದ್ರದ ನಡುವಿನ ಕೆಲಸಗಳನ್ನು ಅತ್ಯಂತ ಸುಲಲಿತವಾಗಿ ನಡೆಸಿಕೊಂಡು ಹೋಗುವ ತೀರ್ಮಾನ ಕೈಗೊಂಡಿದ್ದೇವೆ. ದಿ.ಅನಂತಕುಮಾರ ಈ ಹಿಂದೆ ನನ್ನ ಇಲಾಖೆಯನ್ನು ನಿರ್ವಹಿಸಿದ್ರು. ದೇಶದ ೭೦% ರೈತರಿಗೆ ನೆರವಾಗುವ ಇಲಾಖೆ ನನ್ನದು ಎಂದರು.

ರಸಗೊಬ್ಬರ ಖಾತೆಯನ್ನು ದಿವಗಂತ ಅನಂತ್ ಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜೊತೆಗೆ ಅದಕ್ಕೆ ಮತ್ತಷ್ಟು ವೇಗ ಕೊಡ್ತೇವೆ. ಹೆಚ್ಚೆಚ್ಚು ಜನೌಷಧಿ ಕೇಂದ್ರ ತೆರೆಯುತ್ತೆವೆ. ಅನಂತ್ ಕುಮಾರ್ ನಿಧನದ ಬಳಿಕ ಕ್ಯಾನ್ಸರ್‌ಗೆ ಒಳಪಟ್ಟ ಔಷದಿಗಳನ್ನು ಜನೌಷಧಿ ವ್ಯಾಪ್ತಿಗೆ ತರುತ್ತೇವೆ..ಕರ್ನಾಟಕಕ್ಕೆ ಪ್ರತ್ಯೇಕ ಜನೌಷಧಿ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಯೋಜನೆಯಲ್ಲಿ ಅನುದಾನ ಬಂದಿಲ್ಲ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ವಿ ಸದಾನಂದಗೌಡರು, ಕೇಂದ್ರದಿಂದ ಎಷ್ಟು ಹಣ ಬರಬೇಕು ಎಂದು ಲೆಕ್ಕ ಕೊಡಲಿ. ಕೇಂದ್ರ ನೀಡಿದ ಹಣ ಖರ್ಚು ಮಾಡಿದವರಿಗೆ ಹೆಚ್ಚು ಅನುದಾನ ನೀಡಿದ್ದೇವೆ. ಖರ್ಚು ಮಾಡದೇ ಹಣ ನೀಡಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ದಿಗಳಿಗೆ ಸ್ಪಂದಿಸಲ್ಲ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ ಕುರಿತು ಮಾತನಾಡಿ ಡಿವಿಎಸ್, ಮೇಕೆದಾಟು ಯೋಜನೆ ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದ್ರೆ ರಾಜ್ಯ ಸರ್ಕಾರ ಯೋಜನೆಯ ಡಿಪಿಎಆರ್ ಸಿದ್ದಗೊಳಿಸಿ ಕೇಂದ್ರಕ್ಕೆ ಕಳುಹಿಸಿದೆಯೇ  ಎಂದು ಪ್ರಶ್ನಿಸಿದರು.

ಇನ್ನು ಸಬ್ ಅರ್ಬನ್ ಯೋಜನೆ ಅನುಷ್ಟಾನಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ.ಆದ್ರೆ ರಾಜ್ಯ ಸರ್ಕಾರ ಪ್ಲ್ಯಾನ್ ಆಫ್ ಆ್ಯಕ್ಷನ್ ಈವರೆಗೂ ನೀಡಿಲ್ಲ.ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಯಾವಾಗಲೂ ಸಹಕಾರ ನೀಡುತ್ತೆ ಎಂದು ಭರವಸೆ ನೀಡಿದ ಡಿವಿ ಸದಾನಂದಗೌಡರು,  ನಾನು ರೈಲ್ವೆ ಮಂತ್ರಿಯಾಗಿದ್ದಾಗ ಆರು ಪ್ರಾಥಮಿಕ ರೈಲು ಕೊಟ್ಟು ಆರಂಭಿಸಿದೆವು. ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟಲ್ಲಿ‌ 17 ಸಾವಿರ ಕೋಟಿ ರೂ ಕೊಡಿಸಿದ್ವಿ. ಸಬರ್ಬನ್ ರೈಲು ಯೋಜನೆ ವೆಚ್ಚ ಕೇಂದ್ರ – ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿದೆವು. ಸಬರ್ಬನ್ ಸಂಬಂಧ ಎಲ್ಲ ಕೆಲಸಗಳನ್ನು ಕೇಂದ್ರದಿಂದ ಮಾಡಿಕೊಟ್ವಿದ್ದವು. ಆದ್ರೆ ಯೋಜನೆ ಇನ್ನೂವರೆಗೂ ಮುಂದಕ್ಕೆ ಹೋಗ್ತಿಲ್ಲ. ಈ ಸಂಬಂಧ ನಾನು ಸಧ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ. ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆಗೆ ವೇಗ ಕೊಡ್ತೇನೆ. ಸಬರ್ಬನ್ ರೈಲು ಯೋಜನೆ ಕುರಿತು ರಾಜ್ಯದಿಂದ ವಿಳಂಬ ಆಗ್ತಿದೆ ಎಂದು  ಆರೋಪ ಮಾಡಿದರು.

Key words: – Cooperation from the Central Government in the state development.-  Union Minister DV Sadananda Gowda.

#bangalore #CentralGovernment #DVSadanandaGowda #alliancegovrnament