ಕಂಟೇನರ್- ಖಾಸಗಿ ಬಸ್ ಭೀಕರ ಅಪಘಾತ: 9 ಮಂದಿ ಸಜೀವ ದಹನ

ಚಿತ್ರದುರ್ಗ,ಡಿಸೆಂಬರ್,25,2025 (www.justkannada.in): ಕಂಟೇನರ್- ಖಾಸಗಿ ಬಸ್ ನಡುವೆ  ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬಸ್ ಹೊತ್ತಿ ಉರಿದು  9 ಮಂದಿ ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗದ ಜಿಲ್ಲೆ ಹಿರಿಯೂರು  ತಾಲ್ಲೂಕು ಜವನಗೊಂಡಹಳ್ಳಿ ಬಳಿ ನಡೆದಿದೆ.

ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ  ಇಂದು ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್‌ ಗೆ ಮತ್ತು ಕಂಟೇನರ್ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಸುಮಾರು 9 ಮಂದಿ ಪ್ರಯಾಣಿಕರು ಸುಟ್ಟು ಭಸ್ಮವಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಂದ ಗೋಕರ್ಣಕ್ಕೆ ಸ್ಲೀಪರ್‌ ಕೋಚ್ ಬಸ್‌ನಲ್ಲಿ ಚಾಲಕ, ಕಂಡಕ್ಟರ್ ಸೇರಿ 30 ಜನ ಪ್ರಯಾಣ ಮಾಡುತ್ತಿದ್ದರು. ಆದರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ‌ ಜವನಗೊಂಡಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಸ್‌ ಅತೀ ವೇಗವಾಗಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಇದ್ದಕ್ಕಿದ್ದಂತೆ ಬಸ್‌ ಹೊತ್ತಿ ಉರಿದಿದೆ. ಈ ಬೆಂಕಿಗೆ ಬಸ್‌ನಲ್ಲಿದ್ದ 9 ಮಂದಿ ಸುಟ್ಟು ಭಸ್ಮವಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಮಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈ ದುರಂತದಲ್ಲಿ ಗಾಯಗೊಂಡವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬದಿದೆ.

Key words: Container-private bus, collision, 9 people, burnt alive