ಮೈತ್ರಿಕೂಟ ‘ಇಂಡಿಯಾ’ ಟೀಕಿಸಿರುವ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

ಬೆಂಗಳೂರು, ಜುಲೈ 26, 2023 (www.justkannada.in): ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಅಂದರೆ ಭಾರತ. ಅದು ಒಳ್ಳೆಯದೋ, ಕೆಟ್ಟದ್ದೋ ಎಂಬ ಬಗ್ಗೆ ಮಾತನಾಡುವ ಮೂಲಕ ಪ್ರಧಾನ ಮಂತ್ರಿ ಸ್ಥಾನಕ್ಕಿರುವ ಗೌರವವನ್ನು ಗೌಣ ಮಾಡಬೇಡಿ. ಸಂಸತ್‌ನಲ್ಲಿ ಮಣಿಪುರದ ಬಗ್ಗೆ ಮಾತನಾಡಿ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಮಣಿಪುರಕ್ಕೆ ಆಗಿರುವ ಗಾಯವನ್ನು ವಾಸಿ ಮಾಡಲು ನಾವು ನೆರವಾಗುತ್ತೇವೆ. ಅಲ್ಲಿನ ಪ್ರತಿ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸುತ್ತೇವೆ. ಮಣಿಪುರದ ಜನರಿಗೆ ಶಾಂತಿ ಮತ್ತು ಪ್ರೀತಿಯನ್ನು ಮರಳಿ ತರುತ್ತೇವೆ’ ಎಂದು ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ನಮ್ಮ ಮೈತ್ರಿಕೂಟದ ಹೆಸರು ‘ಇಂಡಿಯಾ’ ಎಂದಿರುವುದರಿಂದ ಯಾಕೆ ತಬ್ಬಿಬ್ಬುಗೊಂಡಿದ್ದಾರೆ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

‘ಮಣಿಪುರದಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ಸಂಸತ್‌ನಲ್ಲಿ ಮಾತನಾಡಬೇಕು. ನಿಯಮ 267ರಡಿ ಚರ್ಚೆ ನಡೆಸಲು ನಾವು ಮನವಿ ಮಾಡಿದ್ದೇವೆ. ಚರ್ಚೆ ನಂತರ ಮತ ಚಲಾವಣೆಯೂ ನಡೆಯಲಿದೆ’ ಎಂದು ಹೇಳಿದ್ದಾರೆ.