ಮೈಸೂರು,ಆಗಸ್ಟ್,27,2026 (www.justkannada.in): ನಗರದ ದಟ್ಟಗಳ್ಳಿ 3ನೇ ಹಂತದಲ್ಲಿ, ಮಹಾಲಕ್ಷ್ಮಿ ದೇವಸ್ಥಾನದ ಸಮೀಪದಲ್ಲಿರುವ “ಸೈನಿಕ” ಉದ್ಯಾನವನದಲ್ಲಿ ತಿಂಗಳುಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ಮಕ್ಕಳಿಗಾಗಿ ಆಟದ ಸಾಮಗ್ರಿಗಳು, ವಯಸ್ಕರು ಹಾಗೂ ಹಿರಿಯ ನಾಗರಿಕರಿಗಾಗಿ ಜಿಮ್ ಮತ್ತು ಫಿಟ್ನೆಸ್ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ, ಅರ್ಧಂಬರ್ದ ಕಾಮಗಾರಿ, ಅಪೂರ್ಣ ವ್ಯವಸ್ಥೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಇಡೀ ಉದ್ಯಾನವನವೇ ಬಳಕೆಗೆ ಅಸಾಧ್ಯವಾಗಿರುವ ಆರೋಪ ಕೇಳಿಬರುತ್ತಿದೆ.
ಮಕ್ಕಳ ಆಟದ ಸಾಮಗ್ರಿಗಳನ್ನು ಅಳವಡಿಸಿ, ಅವುಗಳನ್ನು ಬಳಸಲು ಅಗತ್ಯವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಯಸ್ಕರು ಮತ್ತು ಹಿರಿಯರ ಆರೋಗ್ಯದ ದೃಷ್ಟಿಯಿಂದ ಅಳವಡಿಸಿರುವ ಫಿಟ್ನೆಸ್ ಉಪಕರಣಗಳೂ ಇದ್ದೂ ಇಲ್ಲದಂತಾಗಿವೆ.
ಉದ್ಯಾನವನ ನಿರ್ಮಾಣಕ್ಕೆ ಹಣ ಖರ್ಚಾಗಿದೆ… ಉಪಕರಣಗಳು ಬಂದಿವೆ… ಆದರೆ ಸಾರ್ವಜನಿಕರಿಗೆ ಮಾತ್ರ ಬಳಕೆಯ ಅವಕಾಶ ಇಲ್ಲ! ಇದಕ್ಕಿಂತ ದೊಡ್ಡ ನಿರ್ಲಕ್ಷ್ಯವಲ್ಲದೇ ಮತ್ತೇನು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇದರ ನಡುವೆ ಮಳೆಗಾಲವೂ ಮುಂದುವರಿದಿದ್ದು, ಹೊರಾಂಗಣದಲ್ಲಿ ಅಳವಡಿಸಿರುವ ಕಬ್ಬಿಣದ ಉಪಕರಣಗಳಿಗೆ ತುಕ್ಕು ಹಿಡಿಯುವ ಅಪಾಯ ಎದುರಾಗಿದೆ. ಕಾಮಗಾರಿ ಹೀಗೆಯೇ ವಿಳಂಬವಾದರೆ, ಹೊಸದಾಗಿ ಅಳವಡಿಸಿರುವ ಉಪಕರಣಗಳೇ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಜನರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಉದ್ಯಾನವನವೊಂದು ಪೂರ್ಣಗೊಳ್ಳುವ ಮುನ್ನವೇ ಹಾಳಾಗುವಂತಾಗಬಾರದು. ಹೀಗಾಗಿ ಕಾಮಗಾರಿ ಯಾವ ಹಂತದಲ್ಲಿದೆ? ತಿಂಗಳುಗಳು ಕಳೆದರೂ ಏಕೆ ಪೂರ್ಣಗೊಂಡಿಲ್ಲ? ಉದ್ಯಾನವನವನ್ನು ಸಾರ್ವಜನಿಕರ ಬಳಕೆಗೆ ಯಾವಾಗ ಮುಕ್ತಗೊಳಿಸಲಾಗುತ್ತದೆ? ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಿದೆ.
ನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಳವಡಿಸಿರುವ ಉಪಕರಣಗಳ ಗುಣಮಟ್ಟವನ್ನೂ ಪರಿಶೀಲಿಸಿ, ಮಳೆಯಿಂದ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಆಟದ ಮೈದಾನ ಬೇಕು… ಹಿರಿಯರಿಗೆ ವ್ಯಾಯಾಮದ ಸ್ಥಳ ಬೇಕು… ಜನರಿಗೆ ಸುಂದರ ಉದ್ಯಾನವನ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Key words: Incomplete, unusable, condition, Mysore, Soldier park






