ತುಮಕೂರು, ಜೂನ್, 6,2025 (www.justkannada.in): ಕೆ.ಎನ್. ರಾಜಣ್ಣ ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ. ಸಮಾಜದಲ್ಲಿನ ಎಲ್ಲ ಬಡವರ ಬಗೆಗಿನ ಕಾಳಜಿ ಹೊಂದಿದ್ದಾರೆ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಬಹಳ ದೊಡ್ಡ ಗುಣ. ಜಾತಿ, ಧರ್ಮ ಎಂಬ ಬೇಧವಿಲ್ಲದೇ ಬಡ ಮಕ್ಕಳ ಶಾಲಾ ಶಿಕ್ಷಣಕ್ಕೆ ರಾಜಣ್ಣ ನೆರವು ನೀಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕೆ.ಎನ್ ರಾಜಣ್ಣ ಅವರ 75 ನೇ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ತೊಲಗಿಸಿ ಎಲ್ಲರೂ ಮುಖ್ಯ ವಾಹಿನಿಗೆ ತರಬೇಕು ಎನ್ನುವುದೇ ನಿಜವಾದ ರಾಜಕೀಯ ಗುರಿ. ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಮನುಷ್ಯತ್ವ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದು ಇದ್ದಾಗ ಮಾತ್ರ ಸಮಸಮಾಜ, ಬದಲಾವಣೆ ತರಲು ಸಾಧ್ಯವಾಗುತ್ತದೆ. ಇದಾಗಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಯನ್ನು ತುಂಬಬೇಕು. ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಎಲ್ಲರೂ ಸ್ವಾವಂಬಿಗಳಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ವೈರುಧ್ಯತೆ ಇರುವ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಸಮಸಮಾಜ ನಿರ್ಮಾಣವಾಗದೇ ಹೋದರೆ ಪ್ರಜಾಪ್ರಭುತ್ವದ ಸೌಧವನ್ನು ಜನರೇ ಧ್ವಂಸ ಮಾಡುತ್ತಾರೆ ಎಂದೂ ಕೂಡ ಹೇಳಿದ್ದರು ಎಂದರು.
ಸಾಲಮನ್ನಾ ಕಾರ್ಯಕ್ರಮದ ಶ್ರೇಯಸ್ಸು ರಾಜಣ್ಣನವರಿಗೆ ಸಲ್ಲಬೇಕು
ರೈತರು ಸಾಲ ಮನ್ನಾ ಮಾಡಬೇಕೆಂದು ಒತ್ತಡ ತಂದಿದ್ದ ಸಂದರ್ಭದಲ್ಲಿ 50,000 ರೂ.ಗಳ ವರೆಗೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕುಗಳಲ್ಲಿ ರೈತರ ಸಾಲದ ಸಂಪೂರ್ಣ ವಿವರಗಳನ್ನು ನೀಡಿದವರು ರಾಜಣ್ಣ. ಅವರಿಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದರ ಪೈಕಿ 300 ಕೋಟಿ ರೂ. ಬಾಕಿಯಿದ್ದು, ರೈತರ ಕಾರ್ಯಕ್ರಮವಾಗಿರುವುದರಿಂದ ಇದನ್ನು ಮುಂದಿನ ದಿನಗಳಲ್ಲಿ ಚುಕ್ತಾ ಮಾಡಲಾಗುವುದು ಎಂದು ತಿಳಿಸಿದರು. ಇದರ ಶ್ರೇಯ ರಾಜಣ್ಣನವರಿಗೆ ಸೇರಬೇಕಾಗಿದ್ದರೂ ಕುಮಾರಸ್ವಾಮಿಯವರು ಪಡೆದರು. ರಾಜಣ್ಣ ನೇರ ನಡೆ ನುಡಿಯವರು, ಈ ಗುಣಗಳು ಸ್ವಾಭಿಮಾನದ ಸಂಕೇತ. ಸ್ವಾಭಿಮಾನವಿದ್ದವರು ಮೇಲೆ ಬರುತ್ತಾರೆ ಎಂದರು.
ಬದ್ಧತೆಯಿರುವ ವಿಚಾರಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು
ದಲಿತರು ವಿದ್ಯಾವಂತರು, ಶ್ರೀಮಂತರಾದರೂ ಅವರನ್ನು ಏಕವಚನದಲ್ಲಿಯೇ ಮಾತನಾಡಿಸುತ್ತೇವೆ. ಇದು ದಾಸ್ಯದ ಸಂಕೇತ. ಮೀಸಲು ಕ್ಷೇತ್ರದಲ್ಲಿ ರಾಜಣ್ಣ ಸ್ಪರ್ಧೆ ಮಾಡದೇ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲವು ಸಾಮಾನ್ಯ. ನಾನೂ ಕೂಡ ನಾಲ್ಕು ಬಾರಿ ಸೋತು, ಒಂಭತ್ತು ಬಾರಿ ಗೆದ್ದಿದ್ದೇನೆ. ಸೋತರೂ ಗೆದ್ದರೂ ಬದ್ಧತೆಯಿರುವ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ಮರೆಯದೇ, ವಿಚಲಿತರಾಗಬಾರದು. ಇದನ್ನು ಮಾಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹುಟ್ಟು ಸಾವಿನ ನಡುವೆ ಬದುಕಿನ ಸಾರ್ಥಕಗೊಳಿಸಿಕೊಳ್ಳಬೇಕು. ಹುಟ್ಟಿದ ಮೇಲೆ ನನ್ನ ಜೀವನ ಸಾರ್ಥಕವಾಗಿದೆಯೇ ಎಂದು ಹಿಂದಿರುಗಿ ನೋಡಬೇಕು. ನಿಮಗೆ ನಿಮ್ಮ ಬದುಕು ಸಮಾಧಾನ ತಂದು ಕೊಡುವಂತಿರಬೇಕು. ರಾಜಣ್ಣ ನವರದ್ದು ಸಾರ್ಥಕ ಬದುಕು ಎಂದರು.
ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು
ಹಣೆಬರಹ, ಕರ್ಮ ಸಿದ್ದಾಂತಗಳನ್ನು ಬಸವಾದಿ ಶರಣರು ತ್ಯಜಿಸಿದ್ದರು. ದೇವರು ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಮೇಲು ಕೀಳು ಎಂಬುದಿಲ್ಲ. ಹುಟ್ಟಿನಿಂದ ಯಾರೂ ದಡ್ಡರೂ ಅಲ್ಲ, ಮೇಧಾವಿಗಳೂ ಅಲ್ಲ. ಅವಕಾಶಗಳು ಸಿಗಬೇಕು ಎಂದರು. ರಾಜಣ್ಣ ಅವರು ದಲಿತ ಜನಾಂಗದಲ್ಲಿ ಹುಟ್ಟಿ ಸಮರ್ಥ ಸಹಕಾರಿಯಾವುದು ಸುಲಭವಲ್ಲ. ಸಂವಿಧಾನ ಇರದೇ ಹೋಗಿದ್ದರೆ ನಾವ್ಯಾರೂ ಮುಖ್ಯವಾಹಿನಿಗೆ ಬರಲು ಸಾಧ್ಯವಿರಲಿಲ್ಲ ಎಂದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರ ಬಂದ ನಂತರ ಸಮಾಜದಲ್ಲಿ ಬಡತನ ತೊಡೆದುಹಾಕಲು ಸಾಮಾಜಿಕ, ಆರ್ಥಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.
ಜನರಲ್ಲಿ ಆರ್ಥಿಕ ಶಕ್ತಿ ತುಂಬಿದ ಗ್ಯಾರಂಟಿ ಯೋಜನೆಗಳು
ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ ಧರ್ಮದವರಿಗೆ ಒದಗಿಸಲಾಗಿದೆ. 1.64 ಕೋಟಿ ಜನರಿಗೆ ಗೃಹಜ್ಯೋತಿ, 1.22 ಕೋಟಿ ಜನರಿಗೆ ಗೃಹಲಕ್ಷ್ಮೀ, ಎಲ್ಲ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ಅನ್ನ ಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರನ್ನು ತಲುಪಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜಣ್ಣ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ ಸಿಎಂ ಸಿದ್ದರಾಮಯ್ಯ ನೂರು ವರ್ಷಗಳಿಗೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸಿದರು.
ಸಚಿವರಾದ ಜಿ. ಪರಮೇಶ್ವರ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಕೆ.ಎನ್.ರಾಜಣ್ಣ ಅವರ ಕುಟುಂಬ ವರ್ಗ ಉಪಸ್ಥಿತರಿದ್ದರು.
Key words: K.N. Rajanna, politics, cooperation, public service, CM Siddaramaiah