ಗುಪ್ತಚರ ಮುಖ್ಯಸ್ಥರಿಗೆ ಸರಕಾರದ ಸಾಫ್ಟ್ ಕಾರ್ನರ್: ಸಿಎಂ ರತ್ತ ಬೊಟ್ಟು ಮಾಡಿದ ಭಾಸ್ಕರ್ ರಾವ್.

ಮೈಸೂರು,ಜೂನ್,7,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಗುಪ್ತಚರ ಇಲಾಖೆ ವೈಪಲ್ಯ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇಂಟಲಿಜೆನ್ಸ್ ಹೆಡ್ ಅಮಾನತು ಮಾಡದೆ ಬರೀ ವರ್ಗಾವಣೆ ಮಾಡಿದೆ. ಹೀಗಾಗಿ ಯಾಕೆ ಈ ಸಾಫ್ಟ್ ಕಾರ್ನರ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಈ ಬಗ್ಗೆ ನಿಮ್ಮೂರಿನವರೇ ಆದ ದೊರೆಯನ್ನು ಕೇಳಿ ಎಂದು ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡಿದರು.

ಇಂಟೆಲಿಜೆನ್ಸ್ ಮುಖ್ಯಸ್ಥರನ್ನು ಅಮಾನತು ಮಾಡದೆ ವರ್ಗಾವಣೆ ಮಾಡಿದ ವಿಚಾರದ ಬಗ್ಗೆ  ಮೈಸೂರಿನಲ್ಲಿ ಮಾತನಾಡಿದ ಭಾಸ್ಕರ್ ರಾವ್,  ‌ಕುರ್ಚಿಯ ಮೇಲೆ ಕುಳಿತ ದೊರೆಯನ್ನ ಕೇಳಬೇಕು. ಸಿಕ್ಕ‌ ಸಿಕ್ಕವರಿಗೂ ಕೂಡ ಸುಣ್ಣ ಹಾಕಬೇಕು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಸರಿಯಲ್ಲ. ಸಿಎಂಗೆ ಯಾರು ಅಡ್ವೈಸ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದನ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು, ನಿವೃತ್ತ ನ್ಯಾಯಾಧೀಶರ ತನಿಖೆ ‌ಬೇಡ. ಮೂರು ತಿಂಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಅಧಿಕಾರಿಗಳ ತಲೆದಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ಯಾರನ್ನಾದರೂ ಬಲಿಪಶು ಮಾಡಬೇಕಿತ್ತು. ಅದಕ್ಕೆ ಸರ್ಕಾರ ಯಾರನ್ನಾದರೂ ಹೊಣೆ ಮಾಡಬೇಕಿತ್ತು. ಒಂದು ಮಾಂಸದ ತುಂಡು ಬಿಸಾಕಿದಂತೆ ಬಿಸಾಕಿದ್ದಾರೆ. ದಯಾನಂದ್ ಉತ್ತಮ ಅಧಿಕಾರಿಯಾಗಿ ಕೆಲಸ‌ಮಾಡಿದ್ದಾರೆ. ಅವರನ್ನ ಅಮಾನತು ಮಾಡಿದ್ದು ಸರಿಯಲ್ಲ. ಒಬ್ಬ ಪುಟಗೋಸಿ ನನ್ ಮಗನ ಮಾತು ಕೇಳ್ತೀರಿ. ಅವನು ಲಂಡನ್ ಗೆ ಹೋಗಬೇಕು ಅಂತ ನೀವು ಅವನ ಮಾತು ಕೇಳ್ತೀರಿ? ನೀವು ಅವನನ್ನ ಕೇಳಿ ಕಾರ್ಯಕ್ರಮ ಆಯೋಜನೆ ಮಾಡ್ತೀರಿ? ನಿಮ್ಮ ಜುಟ್ಟು ಅವನ ಕೈಗೆ ಯಾಕೆ ಕೊಡ್ತೀರಿ? ಯಾವುದೇ ಪ್ಲಾನಿಂಗ್ ಇಲ್ಲದೇ ಕಾರ್ಯಕ್ರಮ ರೂಪಿಸಿದ್ದೀರಿ. ಇದಕ್ಕೆಲ್ಲ ಸರ್ಕಾರವೇ ನೇರ ಹೊಣೆ ಎಂದು ಭಾಸ್ಕರ್ ರಾವ್  ಆರೋಪಿಸಿದರು.vtu

Key words: Government, soft corner, intelligence chief, Bhaskar Rao, CM Siddaramaiah