ಬೆಂಗಳೂರು, ಜೂನ್,15,2026 (www.justkannada.in): ಪಕ್ಷ ನಿಷ್ಠೆ ಹಾಗೂ ತ್ಯಾಗ ಸೂರಜ್ ಅವರ ಸಾಧನೆ. ತಮ್ಮ ಸ್ನೇಹದ ಮೂಲಕ ಅವರು ನಮ್ಮೆಲ್ಲರ ಹೃದಯ ಗೆದ್ದವರು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ದಿವಂಗತ ಸೂರಜ್ ಹೆಗ್ಡೆ ಅವರನ್ನು ಕೊಂಡಾಡಿದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ದಿವಂಗತ ಸೂರಜ್ ಹೆಗ್ಡೆ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
ಇದೊಂದು ದುಃಖಕರ ಸಂದರ್ಭ. ಒಬ್ಬ ಸ್ನೇಹಿತ, ಕಾರ್ಯಕರ್ತ, ಮುಖಂಡನನ್ನು ಕಳೆದುಕೊಂಡಿದ್ದೇವೆ. ನಾವ್ಯಾರು ಶಾಶ್ವತವಾಗಿರಲು ಸಾಧ್ಯವಿಲ್ಲ. “ಆದರ್ಶವಿಲ್ಲದೇ ಬದುಕಿದರೆ, ಬದುಕಿಗೆ ಅವಮಾನ. ಸಾಧನೆ ಇಲ್ಲದೆ ಸತ್ತರೆ, ಸಾವಿಗೆ ಅವಮಾನ.” ನನ್ನ ಸ್ನೇಹಿತ ಸೂರಜ್ ಹೆಗ್ಡೆ ಆದರ್ಶ ಜೀವನ ನಡೆಸಿದ್ದಾರೆ. ತ್ಯಾಗ, ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆಯನ್ನು ಅಳವಡಿಸಿಕೊಂಡು ಅಧಿಕಾರ ಕೇಳದೆ ಕೆಲಸ ಮಾಡಿರುವ ಪಕ್ಷದ ಶಿಸ್ತಿನ ಸಿಪಾಯಿ” ಎಂದು ಸ್ಮರಿಸಿದರು.
ದೇವರಾಜು ಅರಸು ಅವರ ರಕ್ತ ಅವರ ಮೈಯಲ್ಲಿ ಇರುವ ಕಾರಣಕ್ಕೆ, ಈ ಆದರ್ಶ ಅಳವಡಿಸಿಕೊಂಡು ಬದುಕಿದ್ದರು. ಅವರು ಅಗಲುವ ಮೂರು ದಿನಗಳ ಮೊದಲು ದೇವರಾಜ ಅರಸು ಅವರ ಪ್ರತಿಮೆಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ಗೌರವ ಸಲ್ಲಿಸಲು ನಮ್ಮದೇ ಆದ ಯೋಜನೆಗಳನ್ನು ಹೊಂದಿದ್ದೆವು. ಈ ಸಂದರ್ಭದಲ್ಲಿ ನಾನು ಅವುಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಎಂದರು.
ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಬಹಳ ಮುಖ್ಯ. ಅವರು ನಮ್ಮನ್ನು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ತಮ್ಮ ಕೆಲಸಗಳನ್ನು ಬದಿಗೊತ್ತಿ, ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದರು ಎಂದರೆ, ಸೂರಜ್ ಅವರಲ್ಲಿನ ನಿಷ್ಠೆ ಪ್ರಾಮಾಣಿಕತೆ, ಕರ್ತವ್ಯದ ಬಗ್ಗೆ ಇದ್ದ ಶ್ರದ್ಧೆಗೆ ಬೇರೆ ಉದಾಹರಣೆ ಬೇಡ ಎಂದು ಹೇಳಿದರು.
ಇಂದು ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ನಾನು ಕೂಡ ಕಾರ್ಯಕರ್ತ. ನಾನು ಅವರ ಸ್ನೇಹಿತ. ಅದಕ್ಕಾಗಿ ಅವರಿಗೆ ನುಡಿನಮನ ಅರ್ಪಿಸಲು ಬಂದಿದ್ದೇವೆ. ಸೂರಜ್ ಎಂದರೆ ಬೆಳಕು ನೀಡುವ ಸೂರ್ಯ. ನಗುತ್ತಲೇ ತನ್ನ ಕೊನೆಯುಸಿರೆಳೆದಿದ್ದಾರೆ. ನಾನು ಅವರ ತಂದೆಯನ್ನು ಹತ್ತಿರದಿಂದ ಬಲ್ಲೆ. ನಾನು ವಿದ್ಯಾರ್ಥಿ ನಾಯಕನಾಗಿ ಚುನಾವಣೆ ಗೆದ್ದಾಗ, ಅವರ ಮನೆಗೆ ಹೋಗಿದ್ದೆ. ಅವರು ನಮ್ಮದೇ ಕ್ಷೇತ್ರದವರು. ಯಾರಿಗೂ ಯಾವ ಸ್ಥಾನ ಶಾಶ್ವತವಲ್ಲ. ಆದರೆ ಸ್ಥಾನ ಸಿಕ್ಕಾಗ ನಾವು ಆದರ್ಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರ ಕುಟುಂಬದವರು ತೆಗೆದುಕೊಂಡಿರುವ ಧೈರ್ಯವನ್ನು ನಾವು ಸ್ವಾಗತಿಸುತ್ತೇವೆ. ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿದ್ದಾಗ ಎಐಸಿಸಿ ಕಾರ್ಯದರ್ಶಿಯಾಗಿ, ನಮ್ಮ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಸರಳ, ಸ್ನೇಹಜೀವಿ, ಕಾರ್ಯರ್ತರಾಗಿ ಬದುಕು ನಡೆಸಿದ್ದಾರೆ. ಅವರ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲು ನಾವು ಸೇರಿದ್ದೇವೆ. ಅವರು ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ಕಾರ್ಯಕರ್ತರಿಗೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.
Key words: CM, D.K Shivakumar, praises, Suraj hedge, achievements






