Wednesday, August 26, 2026

BDA Apartments

Home Front Page ನಾನೀಗ ಆತುರದ ವ್ಯಕ್ತಿ: ರಾಜ್ಯದ ಜನರು, ಪಕ್ಷದ ಕಾರ್ಯಕರ್ತರಿಂದ ನನ್ನ ಮೇಲೆ ಅಪಾರ ನಿರೀಕ್ಷೆ- ಸಿಎಂ...

ನಾನೀಗ ಆತುರದ ವ್ಯಕ್ತಿ: ರಾಜ್ಯದ ಜನರು, ಪಕ್ಷದ ಕಾರ್ಯಕರ್ತರಿಂದ ನನ್ನ ಮೇಲೆ ಅಪಾರ ನಿರೀಕ್ಷೆ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,26,2026 (www.justkannada.in): ನಾನೀಗ ಆತುರದ ವ್ಯಕ್ತಿ. ರಾಜ್ಯದ ಜನರು ಹಾಗೂ ದೇಶದ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾನು ಉತ್ತಮ ಆಡಳಿತ ನೀಡುವ ನಂಬಿಕೆ ಇಟ್ಟಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಇಂಡಿಯಾ ಟುಡೇ ರೌಂಡ್ ಟೇಬಲ್ ಕರ್ನಾಟಕ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ ಶಿವಕುಮಾರ್  ಪಾಲ್ಗೊಂಡು ಮಾತನಾಡಿದರು. ಅವರ ಮಾತಿನ ಮುಖ್ಯಾಂಶಗಳು ಈ ಕೆಳಕಂಡಂತಿದೆ.

ಕರ್ನಾಟಕದ ಮೂಲಕ ಮಾತ್ರ ಭಾರತದ ಪ್ರಗತಿ ಸಾಧ್ಯ. ಹೀಗಾಗಿ ನನ್ನ ಬಳಿ ಇರುವ ಸಮಯದಲ್ಲಿ ಉತ್ತಮ ಕೆಲಸ ಮಾಡಿ, ಪಕ್ಷ ಸಂಘಟಿಸಿ ಸಂದೇಶ ರವಾನಿಸಬೇಕು. ನಾವು ಬೇರೆ ರಾಜ್ಯಗಳಿಗೆ ಮಾದರಿಯಾಗಬೇಕು. ಆ ಪ್ರಯತ್ನದಲ್ಲಿದ್ದೇನೆ.

ಶಾಸಕರ ಅಸಮಾಧಾನ ವಿಚಾರ: ನಮ್ಮ ಪಕ್ಷದಲ್ಲಿ ಇಂತಹ ಸಮಸ್ಯೆ ಇಲ್ಲ. ನಮ್ಮಲ್ಲಿರುವ ಎಲ್ಲಾ ಶಾಸಕರು, ಎಂಎಲ್ ಸಿ ಸಚಿವರಾಗಲು, ನಿಗಮ ಅಧ್ಯಕ್ಷರಾಗಲು ಅರ್ಹರು. ಪಕ್ಷದ ಹೈಕಮಾಂಡ್ ನಮ್ಮನ್ನು ವಿಶ್ವಾಸಕ್ಕೆ ಪಡೆದು ಅಂತಿಮ ತೀರ್ಮಾನ ಮಾಡುತ್ತದೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಬಂಗಾರಪ್ಪ ಸಚಿವರಾಗಿರಲಿಲ್ಲ. ಕೃಷ್ಣಾ ಅವರ ಕಾಲದಲ್ಲಿ ಹಿರಿಯರು ಸಂಪುಟದಿಂದ ಹೊರಗುಳಿದರು. ಧರಂ ಸಿಂಗ್ ಕಾಲದಲ್ಲಿ ನಾನು ಹಾಗೂ ಪರಮೇಶ್ವರ್ ಸಚಿವ ಸ್ಥಾನ ವಂಚಿತರಾಗಿದ್ದೆವು. ಸಿದ್ದರಾಮಯ್ಯ ಅವರ ಕಾಲದ ಆರಂಭದಲ್ಲೂ ನಾನು ಅವಕಾಶ ವಂಚಿತನಾಗಿದ್ದೆ. ಈಗ ನಾನು ಸಿಎಂ, ಪರಮೇಶ್ವರ್ ಡಿಸಿಎಂ. ರಾಜಕೀಯದಲ್ಲಿ ಎಲ್ಲವನ್ನು ಅರಗಿಸಿಕೊಳ್ಳಬೇಕು. ಆಸೆ ಪಡುವುದು ತಪ್ಪಲ್ಲ. ಪಕ್ಷದ ಪರಿಸ್ಥಿತಿ ಅರಿಯಬೇಕು.

ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ: ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಕಾಂಗ್ರೆಸ್ ಸರ್ಕಾರದ ಬದ್ಧತೆ, ಸಿದ್ಧಾಂತ.  ಮುಂದಿನ ಎರಡು ಮೂರು ದಿನಗಳಲ್ಲಿ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಸ್ಥಾನ ನೀಡುವುದಾಗಿ ಭರವಸೆ ನೀಡಿದರು.

ಬಣ ರಾಜಕೀಯ ವಿಚಾರ: ಕಾಂಗ್ರೆಸ್ ಪಕ್ಷವೇ ಒಂದು ಬಣ.  ನನಗೆ, ಸಿದ್ದರಾಮಯ್ಯ ಅವರಿಗೆ ಯಾವುದೇ ಬಣ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಸಿದ್ದರಾಮಯ್ಯ ಅವರೂ ಸೇರಿ ನನ್ನ ಸಂಖ್ಯೆ 138 ಎಂದು ಸದನದಲ್ಲಿ ಹೇಳಿದ್ದೆ. ಬಣಗಳು ಬಿಜೆಪಿಯಲ್ಲಿ ನಡೆಯಬಹುದು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ.  ನಾವು ಪಕ್ಷದ ಸೇನಾನಿಯಾಗಿ ಕೆಲಸ ಮಾಡುತ್ತೇವೆ.

ಸಿಎಂ ಆದ ಬಳಿಕ ಮಾಜಿ ಸಿಎಂಗಳ ಭೇಟಿ: ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೂ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ನಾವು ಈ ಸ್ಥಾನದಲ್ಲಿ ಕೂತಾಗ ಸಮಾಜದ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅದನ್ನೇ ಪ್ರಮಾಣ ವಚನ ತೆಗೆದುಕೊಂಡಿದ್ದೇವೆ. ನಾನು ತಾರತಮ್ಯ ಮಾಡಲು ಸಾಧ್ಯವೇ? ಅಸ್ಸಾಂ ನಲ್ಲಿ ಸರ್ಕಾರದ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಾರೆ. ಆದರೆ ನಾವು ಎಲ್ಲಾ ವರ್ಗದ ಜನರಿಗೂ ನೀಡುತ್ತೇವೆ. ನ್ಯಾಯದ ಪೀಠದಲ್ಲಿ ಕೂತು ಅನ್ಯಾಯ ಮಾಡಬಾರದು. ನಾನು ಈ ಸ್ಥಾನದಲ್ಲಿ ಕೂತಾಗ ಎಲ್ಲರನ್ನು ಒಂದೇ ರೀತಿ ಕಾಣಬೇಕು. ಆಡಳಿತ ವಿಚಾರದಲ್ಲಿ ನಾವು ಎಲ್ಲರನ್ನೂ ಸಮಾನರಾನ್ನಾಗಿ ನೋಡಬೇಕು ಎಂದರು.

ಕರ್ನಾಟಕಕ್ಕೆ ತಾರತಮ್ಯ ವಿಚಾರ: ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಇದೇ ಕಾರಣಕ್ಕೆ ಮೈಸೂರು ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಹೇಳಿಕೆ ಪ್ರಸ್ತಾಪಿಸಿ, ಕರ್ನಾಟಕಕ್ಕೆ ಹೃದಯ ಶ್ರೀಮಂತಿಕೆಯಿಂದ ನೆರವು ನೀಡಿ ಎಂದು ಪ್ರಧಾನಿಗಳನ್ನು ಕೇಳಿದೆ. ಕರ್ನಾಟಕವು ದೇಶದ ಜಿಡಿಪಿ, ತೆರಿಗೆ ವಿಚಾರದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಸಂವಿಧಾನ ಹೊಂದಿದ್ದೇವೆ.  ಮಹಾರಾಷ್ಟ್ರ, ಗುಜರಾತಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ತಾರತಮ್ಯ ಮಾಡಲಾಗುತ್ತಿದೆ. ನಾವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ಈಗ ಕ್ಷೇತ್ರ ಮರುವಿಂಗಡಣೆ, ಅನುದಾನ ಹಂಚಿಕೆಯನ್ನು ಜನಸಂಖ್ಯೆ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯ ಆಗುತ್ತಿದೆ. ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ನಾವು ಒಪ್ಪುವುದಿಲ್ಲ. ಈಗ ಹಾಲಿ ಇರುವ ಸಂಖ್ಯೆ ಉಳಿಸಿಕೊಂಡು ಮಹಿಳಾ ಮೀಸಲಾತಿ ನೀಡಲಿ. ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಿದರೆ ದಕ್ಷಿಣ ಭಾರತದ ಧ್ವನಿ ಹತ್ತಿಕ್ಕುವಂತಾಗುತ್ತದೆ. ಈ ವಿಚಾರವಾಗಿ ತಮಿಳುನಾಡು, ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು ಕೂಡ ನಮ್ಮ ಜೊತೆ ಧ್ವನಿಗೂಡಿಸಿದ್ದಾರೆ. ದಕ್ಷಿಣ ಭಾರತದ ಧ್ವನಿಯನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರು ಮೂಲಸೌಕರ್ಯ: ದೇಶದ ಬೇರೆ ನಗರಗಳಲ್ಲೂ ರಸ್ತೆಗುಂಡಿಗಳಿವೆ. ನಮ್ಮಲ್ಲಿ ಇದಕ್ಕೆ ಪರಿಹಾರ ನೀಡಲು ವೈಟ್ ಟಾಪಿಂಗ್ ರಸ್ತೆ ಮಾಡುತ್ತಿದ್ದೇವೆ.  60% ರಸ್ತೆಗಳು ವೈಟ್ ಟಾಪಿಂಗ್ ಮಾಡಲಾಗಿದೆ. ನಮ್ಮ ನಗರದಲ್ಲಿ 1.35 ಕೋಟಿ ವಾಹನಗಳಿವೆ. 1.40 ಕೋಟಿ ಜನಸಂಖ್ಯೆ ಇದೆ. ಸಂಚಾರ ದಟ್ಟಣೆ ವಿಚಾರದಲ್ಲಿ ನಮ್ಮ ರಸ್ತೆಗಳು ಈಗಿನ ವಾಹನ ದಟ್ಟಣೆಗೆ ನಿಭಾಯಿಸಲು ಆಗುತ್ತಿಲ್ಲ.  ಬೆಂಗಳೂರಿನಲ್ಲಿ ಆದಾಯ ಬಂದಷ್ಟು ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಹಾಯವಾಗಲಿದೆ. ಬೆಂಗಳೂರು ಜೊತೆಗೆ ಗ್ರಾಮೀಣ ಭಾಗಗಳ ಅಭಿವೃದ್ಧಿ ನಮ್ಮ ಆದ್ಯತೆ. ಈ ಸಮಸ್ಯೆ ನಿವಾರಣೆಗೆ 47 ಕಿ.ಮೀ ಟನಲ್ ರಸ್ತೆ, 115 ಕಿ. ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲು ಮುಂದಾಗಿದ್ದೇವೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ದೇಶದ ಬಿಜೆಪಿ ರಾಜ್ಯಗಳಲ್ಲೂ ಈ ಯೋಜನೆ ಮಾಡಲಾಗುತ್ತಿದೆ. ಆದರೆ ಬಿಜೆಪಿ ಸಂಸದ ಈ ವಿಚಾರದಲ್ಲಿ ವಿರೋಧ ಮಾಡುತ್ತಿದ್ದಾರೆ ಎಂದರು.

ಪಾರ್ಕ್ ಜಾಗಗಳ ಬಳಕೆ ವಿಚಾರ: ಬಿಜೆಪಿ ಕಾಲದಲ್ಲಿ ಪಾರ್ಕ್ ಗಳನ್ನು ತಮ್ಮ ಸಂಘಗಳು ಹಾಗೂ ಪಕ್ಷದ ಕಾರ್ಯಕರ್ತರ ಚಟುವಟಿಕೆಗಳಿಗೆ ನೀಡಲಾಗಿತ್ತು. ನಾವು ಕೇವಲ 5% ನಷ್ಟು ಮಾತ್ರ ಬಯಲು ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುತ್ತಿದ್ದೇವೆ. ಖಾಸಗಿಯವರಿಗೆ ನೀಡಿಲ್ಲ. ಅಕ್ರಮ ಒತ್ತುವರಿ ತಡೆಯಬೇಕು ಎಂದು ನಾವು ಮಸೂದೆ ತಂದಿದ್ದೇವೆ.  ನನ್ನ ಅವಧಿಯಲ್ಲಿ ಲಾಲ್ ಬಾಗ್ ಮಾದರಿಯ 5 ವೃಕ್ಷೋದ್ಯಾನ ನಿರ್ಮಿಸಲು ಮುಂದಾಗಿದ್ದೇವೆ. ಅರಣ್ಯ ಇಲಾಖೆ ಜೊತೆಗೆ ಚರ್ಚಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ಈ ಯೋಜನೆ ಜಾರಿ ಮಾಡಿಯೇ ನಾನು ನಿಮ್ಮ ಮುಂದೆ ಬರುತ್ತೇನೆ.

ಕಾವೇರಿ ಹಾಗೂ ನೀರಾವರಿ ವಿಚಾರ: ಮೇಕೆದಾಟು ಯೋಜನೆಯಲ್ಲಿ ಶೇಖರಣೆಯಾಗುವ 95% ನೀರು ತಮಿಳುನಾಡಿಗೆ ಹರಿಯುತ್ತದೆ. ಬೆಂಗಳೂರಿಗೆ ಮಾತ್ರ ಕುಡಿಯುವ ನೀರು ಪೂರೈಸಲಾಗುವುದು. ನೀರಾವರಿಗೆ ಒಂದು ಹನಿ ನೀರನ್ನು ಬಳಸುವುದಿಲ್ಲ. ತಮಿಳುನಾಡಿಗೆ ಇದು ಹೆಚ್ಚು ಪ್ರಯೋಜನವಾಗಲಿದೆ. ನಮ್ಮ ನೆಲದಲ್ಲಿ ನಮ್ಮ ಯೋಜನೆಗೆ ಯಾರ ಅಪ್ಪಣೆ ಬೇಕಿಲ್ಲ ಎಂದು ಕೋರ್ಟ್ ಹೇಳಿದೆ. ನಾವು ತಮಿಳುನಾಡಿನ ಪಾಲಿನ 177 ಟಿಎಂಸಿ ಹರಿಸಲು ನಾವು ಬದ್ಧ. ತುಂಗಭದ್ರಾ ವಿಚಾರದಲ್ಲಿ ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರು ರಾಜ್ಯಗಳ ಸಿಎಂ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ನ್ಯಾಯಾಲಯಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕೂತು ಚರ್ಚೆ ಮಾಡಿದರೆ ಪರಿಹಾರ ಸಿಗುತ್ತದೆ. ಇದು ನಮ್ಮ ಆದ್ಯತೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದ ವಿಚಾರ: ಪ್ರಧಾನಮಂತ್ರಿಗಳು ಹಾಗೂ ಹಣಕಾಸು ಸಚಿವರು ನಾಲ್ಕು ವರ್ಷಗಳ ಹಿಂದೆ ಈ ಯೋಜನೆಗೆ 5,400 ಕೋಟಿ ಘೋಷಿಸಿದರು. ಅದರ ಆಧಾರದ ಮೇಲೆ ಬೊಮ್ಮಯಿ ಅವರು ರಾಜ್ಯದ ಬಜೆಟ್ ನಲ್ಲಿ ಘೋಷಣೆ ಮಾಡಿದರು.  ಇವರೆಗೂ ನಯಾಪೈಸೆ ನೀಡಿಲ್ಲ. ಇದೇ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾಡುತ್ತಿರುವ ತಾರತಮ್ಯ. ಜನ ಬಿಜೆಪಿಗೆ ಮತ ಹಾಕಿಲ್ಲ ಎಂದು ಈ ರೀತಿ ನಡೆಸಿಕೊಳ್ಳಬಾರದು. ಇದು ನ್ಯಾಯವೇ? ಎಂದು ಕೇಂದ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ವಾಲ್ಮೀಕಿ ವಿಚಾರ: ಕೇಂದ್ರದ ಸಚಿವ ಸಂಪುಟ, ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಸಚಿವರ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣ ಇಲ್ಲವೇ? ಈ ವಿಚಾರವಾಗಿ ಯಾಕೆ ಮಾತನಾಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ಕಳೆದ ಸರ್ಕಾರಗಳಲ್ಲಿ ಕಳಂಕಿತ ಸಚಿವರು ಇರಲಿಲ್ಲವೇ? ನಾಗೇಂದ್ರ ಅವರು ಕಳೆದ 2 ವರ್ಷಗಳಿಂದ ಸಂಪುಟದಿಂದ ಹೊರಗಿದ್ದರು. ಇಲಾಖೆ ಆಂತರಿಕ ತನಿಖೆಯಲ್ಲಿ ಪ್ರಕರಣದಲ್ಲಿ ನಾಗೇಂದ್ರ ಅವರ ಕೈವಾಡ ಇಲ್ಲ ಎಂದು ಬಂದಿದೆ. ಹೀಗಾಗಿ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿದ್ದೇವೆ. ಬಿ ರಿಪೋರ್ಟ್ ಬರೆಯುವ ಮುನ್ನ ಸಿಬಿಐ, ಇಡಿ ಮಧ್ಯಪ್ರವೇಶ ಮಾಡಿದೆ. ಈ ಸಂಸ್ಥೆಗಳು ನಾಗೇಂದ್ರ ಮನೆಯಲ್ಲಿ ಒಂದು ರೂಪಾಯಿಯೂ ಪತ್ತೆ ಮಾಡಿಲ್ಲ. ಹಗರಣದಲ್ಲಿ ಲೂಟಿ ಮಾಡಿದ್ದ 95% ಹಣವನ್ನು ವಾಪಸ್ ಪಡೆಯಲಾಗಿದೆ.  ನಾಗೇಂದ್ರ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷ ಹೇಳಿದಂತೆ ಕೇಳುತ್ತಾರೆ ಎಂದರು.

ಜೆನ್ ಜೀಗಳ ಸಂಘಟನೆ ಬಗ್ಗೆ: ಯುವ ಪೀಳಿಗೆ ದೇಶದ ಧ್ವನಿ.  ನಾವು ಬೇರೆ ಪೀಳಿಗೆಯಲ್ಲಿದ್ದೇವೆ. ಅವರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರೇ ಉದ್ಯೋಗ ಸೃಷ್ಟಿಸುವಂತೆ ಪ್ರೋತ್ಸಾಹಿಸಬೇಕು. ಯುವಕರಿಗೆ ಅವಕಾಶ ನೀಡದೆ ದೇಶದ ಪ್ರಗತಿ ಅಸಾಧ್ಯ.

ಭಾರತ ಜೋಡೋ ಯುವ ಸಂಘ ಕುರಿತು ಪ್ರತಿಕ್ರಿಯಿಸಿ,  ಯುವಕರಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಬೇಕು. ಯುವಕರು ಡ್ರಗ್ಸ್ ಹಾಗೂ ಇತರ ವ್ಯಸನದಿಂದ ದೂರ ಇಡಬೇಕು. ಯುವ ಸಮುದಾಯವನ್ನು ವಿವಿಧ ಚಟುವಟಿಕೆಯಲ್ಲಿ ನಿರತರಾಗುವಂತೆ ನೋಡಿಕೊಳ್ಳಬೇಕು. ಅವರಿಗೆ ಉದ್ಯೋಗ ನೀಡುವುದರ ಜೊತೆಗೆ ಸಂಜೆ ಮೇಲೆ ಬೇರೆ ವ್ಯಸನ ಸಿಲುಕದಂತೆ ನೋಡಿಕೊಳ್ಳಬೇಕು. ನಾವು ರಾಜ್ಯದೆಲ್ಲೆಡೆ 10 ಸಾವಿರ ಸಂಘ ರಚಿಸಲು ಮುಂದಾಗಿದ್ದೇವೆ. ನಾವು ಯುವ ನಾಯಕರನ್ನು ಬೆಳೆಸಬೇಕು. ಕೇವಲ ರಾಜಕೀಯವಾಗಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ರೂಪಿಸಬೇಕು ಎಂದು ತಿಳಿಸಿದರು.

ಧಾರ್ಮಿಕ ಓಲೈಕೆ ವಿಚಾರ ಕುರಿತು ಪ್ರತಿಕ್ರಿಯಿಸಿ,  ನಾನು ನನ್ನ ಸರ್ಕಾರದಲ್ಲಿ ಅಲ್ಪಸಂಖ್ಯಾರ ಇಲಾಖೆ ಮುಚ್ಚಬೇಕೇ? ಕೇಂದ್ರ ಸರ್ಕಾರ ಆ ಇಲಾಖೆ ಮುಚ್ಚುವುದೇ? ದೇಶದಲ್ಲಿರುವ 18-20% ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದೇ ನಮ್ಮ ಕರ್ತವ್ಯ. ಅವರೂ ಭಾರತೀಯರು. ನಾವು ಎಲ್ಲಾ ಸಮುದಾಯದವರನ್ನು ಗೌರವಿಸುತ್ತೇವೆ ಎಂದರು.

ವಂದೇ ಮಾತರಂ ವಿಚಾರ: ಪಕ್ಷದ ಸಿದ್ಧಾಂತ ಹಾಗೂ ತೀರ್ಮಾನಕ್ಕೆ ನಾವು ಬದ್ಧ. ಮುಂದಿನ ದಿನಗಳಲ್ಲಿ ಅದನ್ನೇ ಪಾಲಿಸುತ್ತೇವೆ ಎಂದರು.

ಎಸ್ಐಆರ್ ವಿಚಾರ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಪ್ರತಿಯೊಬ್ಬ ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸುವುದು ನಮ್ಮ ಕರ್ತವ್ಯ.  ಹೀಗಾಗಿ ಮತದಾನದ ಹಕ್ಕು ರಕ್ಷಣೆಗೆ ನಾವು ನಿವಾಸ ದೃಢಿಕರಣ ಹಾಗೂ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದೇವೆ. 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆ. 2028ರಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ.  2029ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ.  ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಎಂಎಲ್ ಸಿ ಚುನಾವಣೆ: ನಾನು ಅಮಿತ್ ಶಾ ಆಗಲು ಬಯಸುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ನನಗೆ ಕೊಡುವ ಜವಾಬ್ದಾರಿ ನಿಭಾಯಿಸುವೆ. ನಾನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಒಡೆದಿಲ್ಲ. ಬಿಜೆಪಿ ಶಾಸಕರಿಗೂ ಕಾಂಗ್ರೆಸ್ ಸರ್ಕಾರವೇ ಈ ರಾಜ್ಯದ ಭವಿಷ್ಯ ಎಂದು ಭಾವಿಸಿದ್ದಾರೆ. ಹೀಗಾಗಿ 12 ವಿರೋಧ ಪಕ್ಷಗಳ ಶಾಸಕರು ತಮ್ಮ ಆತ್ಮಸಾಕ್ಷಿ ಮತಗಳನ್ನು ನಮಗೆ ಹಾಕಿದ್ದಾರೆ.ಈ ಬಗ್ಗೆ ವಿರೋಧ ಪಕ್ಷಗಳು ತನಿಖೆ ಮಾಡಿದವು. ಅದರ ವರದಿ ಏನಾಯ್ತು? ಎಂದು ಬಿಜೆಪಿಗೆ ಕುಟುಕಿದರು.

ಕುಮಾರಸ್ವಾಮಿ ಅವರು ಕೊನೆಗೆ ನನಗೆ ಮೊದಲೇ ಸೋಲು ಗೊತ್ತಿತ್ತು, ಶಾಸಕರ ಮನದಲ್ಲಿ ಏನಿದೆ ತಿಳಿಯಲು ಅಭ್ಯರ್ಥಿ ಕಣಕ್ಕೆ ಇಳಿಸಿದೆ ಎಂದು ಹೇಳಿದರು. ಮುಂದೆಯೂ ಇಂತಹ ಅಚ್ಚರಿ ಬೆಳವಣಿಗೆ ನಡೆಯುವುದೇ? ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚರಿಗಳು, ಬದಲಾವಣೆಗಳು ಖಂಡಿತಾ ನಡೆಯಲಿವೆ ಎಂದರು.

Key words: CM D.K. Shivakumar, India Today ,Round Table Karnataka, program