ಬಾಲ ಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆಯಾಗಬೇಕು – ಅಮರನಾಥ್ ಕೆ.ಕೆ

ಮೈಸೂರು,ಜೂನ್,12,2025 (www.justkannada.in): ಭಾರತದಲ್ಲಿ ಹೆಚ್ಚಿನವರು ವಿದ್ಯಾವಂತರೆ. ಈ ಬಾಲ ಕಾರ್ಮಿಕ ಪದ್ದತಿ ವಿರುದ್ದ ಹೋರಾಡುವ ಹಾಗೂ ಅದನ್ನು ನಿರ್ಮೂಲನೆ ಮಾಡುವ ಕೆಲಸವಾಗಬೇಕು. ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಮರನಾಥ್ ಕೆ.ಕೆ. ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ 1098 ಹಾಗೂ ಸ್ವಯಂ ಸೇವಾ ಸಂಸ್ಥೆಗಳು, ಮೈಸೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಾರಾಜ ಪದವಿಪೂರ್ವ (ಪ್ರೌಢಶಾಲಾ ವಿಭಾಗ)ದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆ”ಯನ್ನು ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡಲಾಗುತ್ತಿದೆ. ಮಕ್ಕಳ ದುಡಿಮೆಯಿಂದ ಕುಟುಂಬ ನಿರ್ವಹಣೆಯ ಮಾಡುವಂತಹ ಅನಿಷ್ಟ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಇದರ ನಿರ್ಮೂಲನೆಗಾಗಿ ಭಾರತದ ಸಂವಿಧಾನದಲ್ಲಿ 1986 ರಲ್ಲಿ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೊಳಿಸಿದೆ ಎಂದು ಹೇಳಿದರು.

ತಂದೆ ತಾಯಿ ಇದ್ದರೂ ಕೂಡ ಚಿಕ್ಕವಯಸ್ಸಿನಲ್ಲಿ ದುಡಿಯುವಂತಹ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆದಿರುವಂತದ್ದು, ಬಡತನ ಇದೆ ಎಂದು ಕೆಲಸಗಳಿಗೆ ಸೇರಿಕೊಂಡು ದುಡಿಯುವಂತದ್ದು, ಹೀಗೆ ಎಷ್ಟೋ ಮಕ್ಕಳು ಶಾಲೆಗಳಿಗೆ ಹೋಗದೆ ತಮ್ಮ ಸುಂದರವಾದ ಬಾಲ್ಯದ ದಿನಗಳನ್ನು ಈಗಲೂ ಸಹ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಾಲಕ ಕಾರ್ಮಿಕರನ್ನು ನೇಮಿಸಿಕೊಂಡು ಅಪಾಯಕಾರಿ ಉದ್ದಿಮೆಯಲ್ಲಿ ದುಡಿಸಿಕೊಳ್ಳುತ್ತಿರುವ ಮಾಲೀಕರಿಂದ 20.000/- ದಂಡ ವಸೂಲಾತಿ ಮಾಡಲಾಗುವುದು. ಹಾಗೂ ಅವರಿಗೆ 6 ತಿಂಗಳಿನಿಂದ 2 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ಅದರ ಜೊತೆಗೆ ಒಂದು ಲಕ್ಷ ರೂಪಾಯಿ ಅವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದರು.

ಬಾಲ ಕಾರ್ಮಿಕ ಅಪರಾಧಕ್ಕೆ ಸಂಬoಧಿಸಿದಂತೆ ಮಕ್ಕಳಿಗಾಗಿ ಸಂವಿಧಾನದಲ್ಲಿ 27 ಕಾಯ್ದೆಗಳಿದ್ದು, 2 ರ ಕಾಯ್ದೆ, 3ನೇ ಕಾಯ್ದೆ ಹಾಗೂ 14ನೇ ಕಾಯ್ದೆ ಪ್ರಮುಖ ಪಾತ್ರವಹಿಸುತ್ತದೆ. ಪ್ರಕರಣ ಸಾಭೀತಾದಲ್ಲಿ ಅಪರಾಧಿಗಳಿಗೆ ಕನಿಷ್ಠ 10 ಸಾವಿರ ರೂ. ದಂಡ ಹಾಗೂ 3 ತಿಂಗಳ ಕಠಿಣ ಶಿಕ್ಷೆಗಳಿರುತ್ತದೆ ಎಂದು ತಿಳಿಸಿದರು.

ಬಾಲ ಕಾರ್ಮಿಕ ಪದ್ದತಿಯಿಂದ ಮಕ್ಕಳ ಭವಿಷ್ಯ ಸರ್ವ ನಾಶವಾಗುತ್ತದೆ. ಶಿಕ್ಷಣದಿಂದ ವಂಚಿತರಾಗುತ್ತಾರೆ, ದೈಹಿಕವಾಗಿ, ಮಾನಸಿಕವಾಗಿ ಕುಂಟಿತರಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಈ ಮನಸ್ಥಿತಿಗಳನ್ನು ಬದಲಾಯಿಸುವ, ಜಾಗೃತಿ ಮೂಡಿಸುವ, ಎಚ್ಚರಿಸುವ ಕೆಲಸವಾಗಬೇಕು ಎಂದು ಹೇಳಿದರು.

ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಸದಸ್ಯ ಕಾರ್ಯದರ್ಶಿ ವೀಣಾ ಎಸ್.ಆರ್. ಅವರು ಮಾತನಾಡಿ ಮಕ್ಕಳ ಮುಂದಿನ ಸ್ವಪ್ರಜೆಗಳು ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನ ಇರಬೇಕು. ಅದನ್ನು ಬಿಟ್ಟು ಕೆಲಸದ ಕಡೆ ಗಮನ ಬಾರದಂತೆ ಪೋಷಕರು ಮಕ್ಕಳಿಗೆ ಹೆಚ್ಚಾಗಿ ಪ್ರೋತ್ಸಾಹವನ್ನು ಕೊಡಬೇಕು. ಬಾಲ್ಯದಲ್ಲೇ ವಿದ್ಯಾಭ್ಯಾಸವನ್ನು ಚಿವುಟಬಾರದು. ಮಕ್ಕಳಲ್ಲಿ ವಿದ್ಯಾಭ್ಯಾಸದ ಕಡೆ ಒತ್ತು ನೀಡುವಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಅಂತಹ ಮಕ್ಕಳು ಎಲ್ಲಿಯೇ ಕಂಡು ಬಂದರೂ ಸಹ ಅವರನ್ನು ಶಾಲಾ ಕಾಲೇಜುಗಳಿಗೆ ಸೇರಿಸುವಂತಹ ಒಂದು ಪ್ರವೃತ್ತಿಯನ್ನು ನಾವು ಸಹ ಬೆಳಸಿಕೊಳ್ಳಬೇಕು. ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಯಂತ್ರಣ ಕಾಯ್ದೆ 1986 ರ ಅಡಿಯಲ್ಲಿ 14 ವರ್ಷದ ಕಡಿಮೆ ಮಕ್ಕಳು ಮತ್ತು ಹದಿಹರೆಯದ ಮಕ್ಕಳನ್ನು ದುಡಿಮೆಗೆ ಬಳಸಬಾರದು ಅಂತಹ ಮಕ್ಕಳನ್ನು ದುಡಿಮೆಗೆ ಬಳಸಿಕೊಂಡರೆ ಅದು ಅಪರಾಧ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ವಕೀಲ ಎನ್. ಸುಂದರ್ ರಾಜ್ ಅವರು ‘ಬಾಲ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆಯ 1986 ರ ಕುರಿತು ಕಾನೂನು ಅರಿವು ಮೂಡಿಸಿ ಮಾತನಾಡಿದ ಅವರು ‘‘ಕೆಲವು ವರದಿಗಳ ಪ್ರಕಾರ ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿ ಹೆಚ್ಚಳಕ್ಕೆ ಕಾರಣ, ಬಡತನ ಹಾಗೂ ಅನಕ್ಷರತೆಯಿಂದ ಈ ಪ್ರಕರಣಗಳು ಹೆಚ್ಚಾಗಿವೆ. ಬಾಲ ಕಾರ್ಮಿಕರನ್ನು ವಿಮುಕ್ತರನ್ನಾಗಿ ಮಾಡಲು ಕೈಲಾಶ್ ಸತ್ಯಾರ್ಥಿ ಅವರು ದೇಶದಾದ್ಯಂತ ಬಚ್ಪನ್ ಬಚಾವ್ ಎಂಬ ಆಂದೋಲನ ಕೈಗೊಂಡಿದ್ದರು. ಇದರ ಅಂಗವಾಗಿ ದೇಶದಾದ್ಯಂತ 45 ಲಕ್ಷ ಮಕ್ಕಳನ್ನು ಬಾಲ ಕಾರ್ಮಿಕರಿಂದ ಹೊರತಂದರು. ಅವರಿಗೆ 2014 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದುಕೊಂಡಿದ್ದಾರೆ. ಎಂದು ತಿಳಿಸಿದರು.

ಸಂವಿಧಾನದ 24ನೇ ವಿಧಿಯ ಅನ್ವಯ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂಬ ಕಾನೂನಿದೆ. 21ಎ ವಿಧಿಯ ಪ್ರಕಾರ ಸರ್ಕಾರ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು. 45ನೇ ವಿಧಿಯು 6 ವರ್ಷ ಒಳಗಿನ ಮಕ್ಕಳಿಗೆ ಸರ್ಕಾರ ಕಡ್ಡಾಯವಾಗಿ ಪೌಷ್ಠಿಕ ಆಹಾರ ನೀಡಬೇಕು ಎಂದು ಸರ್ಕಾರವನ್ನು ಸಮಾಜವನ್ನು ಸಂವಿಧಾನ ಮಕ್ಕಳ ಹಕ್ಕಿಗಾಗಿ ಎಚ್ಚರಿಸುತ್ತಿದೆ. ಭಾರತದ ಸಂವಿಧಾನದಲ್ಲಿ ಒಟ್ಟು ಮಕ್ಕಳಿಗಾಗಿ 27 ಕಾನೂನುಗಳನ್ನು ಒಳಗೊಂಡಿದೆ. ಆದರೆ ದೇಶದಲ್ಲಿ ಹೆಚ್ಚಿನದಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಈ ಯಾವ ಕಾನೂನಿನ ಅರಿವುಗಳಿಲ್ಲ ಎಂದರು.

ಇoದು ಬಾಲ ಅಪರಾಧಿ ಹಾಗೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದಲ್ಲದೇ ಭಾರತದಲ್ಲಿ ಪ್ರತಿನಿತ್ಯ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಪಾರ ಪ್ರಮಾಣದಲ್ಲಿ ಕಾಣಸಿಗುತ್ತಿವೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಇಂತಹ ದೌರ್ಜನ್ಯಗಳು 900 ಪ್ರಕರಣಗಳು ದಾಖಲಾಗಿವೆ. ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವಾದರೂ ಕೃತ್ಯಗಳು ನಡೆಯುತ್ತಿರುವುದು, ಸಮಾಜವೇ ತಲೆ ತಗ್ಗಿಸುವಂತಹ ನೀಚ ಕೃತ್ಯಗಳು ಎಂದು ಹೇಳಿದರು.

1986 ಕಾಯ್ದೆ ನಂತರ 2016 ರಲ್ಲಿ ಬಾಲ ಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆಗೆ ತಿದ್ದು ಪಡಿ ಮಾಡಲಾಗಿದ್ದು, 18 ವರ್ಷ ಒಳಗಿನವರನ್ನು ಮಕ್ಕಳೆಂದು, 14ವರ್ಷ ಒಳಗಿನ ಮಕ್ಕಳನ್ನು ಹರೆಯದ ಮಕ್ಕಳೆಂದು ಪರಿಗಣಿಸಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳದಂತೆ ಪ್ರತಿಯೊಬ್ಬರು ಸಮಾಜವನ್ನು ಎಚ್ಚರಿಸುವ, ತಿಳಿ ಹೇಳುವ ಕೆಲಸ ಮಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಉಪವಿಭಾಗ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಉದುಂ ಶಂಕರ್, ಉಪ ಪ್ರಾಂಶುಪಾಲ ಮಹೇಶ್., ಇ.ಎಸ್.ಐ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಲಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರವಿಚಂದ್ರ, ಡಾನ್ ಬಾಸ್ಕೋ ಮಕ್ಕಳಾಲಯದ ಜಿಮ್ ಜೋಸ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾಧಿಕಾರಿ ಎಚ್.ಪಿ. ಮಲ್ಲಿಕಾರ್ಜುನ, ಮಡಿಲು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.vtu

Key words: Child Labor system, should be ,completely, Eradication, Amarnath KK