ಮೈಸೂರು, ಜೂ.೧೭, ೨೦೨೫: ಆಯಾ ಜಾತಿ ಸಮುದಾಯದ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸಲು ಇದರಿಂದ ಸುಲಭವಾಗುತ್ತದೆ. ಅಲ್ಲದೆ ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಇದೊಂದು ಮಹತ್ತರ ಹೆಜ್ಜೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಎಚ್. ಎ.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಹೇಳಿದಿಷ್ಟು…
ಹತ್ತು ವರ್ಷಗಳ ಹಿಂದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿತ್ತಾದರೂ ಅನೇಕ ಕಾರಣಗಳಿಂದಾಗಿ ವರದಿ ಮಂಡನೆಯಾಗಿಲ್ಲ. ಬಹಳಷ್ಟು ಸಮಯ ಕಳೆದಿರುವುದರಿಂದ ಅಂಕಿ ಅಂಶಗಳು ಬದಲಾಗುವುದು ಸಹಜ. ಹೀಗಾಗಿ ಎಲ್ಲಾ ಜನ ಸಮುದಾಯಗಳಿಗೂ ಅರ್ಹ ಪಾಲು ನೀಡಲು ಸರ್ಕಾರ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಮಾಹಿತಿಯೊಂದಿಗೆ ಜಾತಿ ಸರ್ವೆ ನಡೆಸಲು ಹೊರಟಿರುವುದು ಉತ್ತಮ ಬೆಳವಣಿಗೆ.
ಈ ನಡುವೆ ಕೆಲ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಮರು ಜಾತಿ ಸಮೀಕ್ಷೆ ನಿಲುವಿಗೆ ವಿರೋಧ ವ್ಯಕ್ತ ಮಾಡಿದ್ದಾರೆ. ಆದರೆ ಇವರು ಮೂಲಭೂತ ಅಂಶಗಳನ್ನು ರಾಜಕೀಯ ಕಾರಣಕ್ಕಾಗಿ ಮರೆಮಾಚುತ್ತಿದ್ದಾರೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಸಂವಿಧಾನದನ್ವಯ ಆಯಾ ರಾಜ್ಯಗಳೇ ಹಿಂದುಳಿದ ವರ್ಗದ ಪಟ್ಟಿಯನ್ನು ನಿಗದಿಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರತ್ಯೇಕ ಜಾತಿಗಣತಿಯನ್ನು ನಡೆಸುವುದು ಅನಿವಾರ್ಯ. ಕೇಂದ್ರ ನಡೆಸುವ ಗಣತಿಗೂ ರಾಜ್ಯ ಸರ್ಕಾರದ ಸಾಮಾಜಿಕ ಶೈಕ್ಷಣಿಕ ಮತ್ತು ಜಾತಿಗಣತಿಗೂ ಯಾವುದೇ ಸಂಬಂಧ ಇಲ್ಲ.
ಇಂತಹ ಸಾಮಾನ್ಯ ಅಂಶಗಳ ಅರಿವಿಲ್ಲದೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂತಾದವರು ಬಾಯಿಗೆ ಬಂದಂತೆ ಹಗುರ ಹೇಳಿಕೆ ನೀಡಿ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ.
ಇಷ್ಟಕ್ಕೂ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆ ಮಾಡಿದ್ದು ಕರ್ನಾಟಕ ಸರ್ಕಾರ. ಹಿಂದುಳಿದ ವರ್ಗಗಳ ನೇತಾರ ದೇವರಾಜ ಅರಸು ಅವರು ಹಾಕಿಕೊಟ್ಟ ಮಾದರಿ ಇಡೀ ದೇಶಕ್ಕೆ ಮಾರ್ಗದರ್ಶಕ. ಪ್ರತಿ 10 ವರ್ಷಕ್ಕೊಮ್ಮೆ ಹಿಂದುಳಿದ ವರ್ಗಗಳ ಸ್ಥಿತಿಗಳ ಅಧ್ಯಯನ ಆಗಬೇಕಿತ್ತು. ವಂಚಿತ ಸಮುದಾಯಗಳಿಗೆ ಅವಕಾಶ ಸಿಗಬೇಕಾಗಿತ್ತು. ಇದನ್ನು ಒದಗಿಸಿಕೊಡಲು ರಾಜ್ಯ ಸರ್ಕಾರ ಈಗ ಮುಂದಾಗಿರುವಾಗ ಬಿಜೆಪಿ ನಾಯಕರು ಕೊಂಕು ನುಡಿಯುತ್ತಿರುವುದು ಇವರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಬಿಜೆಪಿ ಯಾವುದೇ ಸೌಲಭ್ಯ ಸವಲತ್ತು ನೀಡಲಿಲ್ಲ . ಬದಲಿಗೆ ಈ ವರ್ಗಗಳ ಹೆಚ್ಚಿನ ಯುವಕರನ್ನು ಧರ್ಮದ ಅಪೀಮು ತಿನ್ನಿಸಿ ಕೋಮುಗಲಭೆಗಳಲ್ಲಿ ದುರ್ಬಳಕೆ ಮಾಡಿಕೊಂಡು, ಇಂತಹ ಬಹುತೇಕರ ಭವಿಷ್ಯ ಹಾಳು ಮಾಡಿದೆ. ಈಗ
ಹಿಂದುಳಿದ ಸಮುದಾಯಗಳು ಎಚ್ಚೆತ್ತಿದ್ದು ಬಿಜೆಪಿಯ ಈ ದುರ್ನಡತೆಯನ್ನು ಅರಿತಿವೆ. ಹೀಗಾಗಿ ಇಂತಹ ಸಮುದಾಯಗಳಿಗೆ ಸೌಲಭ್ಯ ಸಿಗಬಾರದು ಎಂಬ ದುರುದ್ದೇಶದಿಂದ ಬಿಜೆಪಿ ಪಕ್ಷ ರಾಜ್ಯದ ಜಾತಿ ಗಣತಿ ವಿರೋಧಿಸುವ ಮೂಲಕ ಹುನ್ನಾರ ನಡೆಸುತ್ತಿರುವಂತಿದೆ.
“ಡಾ.ಯತೀಂದ್ರ ಬಗ್ಗೆ ಪ್ರತಾಪ್ ಸಿಂಹಗೆ ಅಸಹನೆ.”
ವಿಧಾನಪರಿಷತ್ ಸದಸ್ಯ ಹಾಗೂ ಸಿಎಂ ಪುತ್ರ ಡಾ. ಯತೀಂದ್ರ ಅವರ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಯಲ್ಲಿಯೂ ಇಂತಹದೇ ಅಸಹನೆ ತುಂಬಿತುಳುಕುತ್ತಿದೆ. ಹಿಂದುಳಿದವರು ಸಾಮಾಜಿಕವಾಗಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದೆ ಬರುವುದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎನ್ನುವುದಕ್ಕೆ ಪ್ರತಾಪ್ ಸಿಂಹ ಅವರ ಹೇಳಿಕೆಯೇ ಸಾಕ್ಷಿ ಎಂದು ಎಚ್ಎ ವೆಂಕಟೇಶ್ ಟೀಕಿಸಿದ್ದಾರೆ.
key words: “caste census”, Karnataka state, welcome, congress, KPCC, spokesperson, H. A. Venkatesh
Government’s decision to conduct “caste census” in the state is welcome: H. A. Venkatesh