ಪ್ರಧಾನಿ ಮೋದಿ ಟೀಕಿಸುವುದು ಬಿಡಿ- ಬಿಜೆಪಿ ಮುಖಂಡ ಜೋಗಿ ಮಂಜು.

ಮೈಸೂರು,ಜೂನ್,29,2023(www.justkannada.in): ಚುನಾವಣೆಗೂ ಮುನ್ನ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ಈಗ ಅಕ್ಕಿ ಬದಲು ಹಣ ಕೊಡುವುದಾಗಿ ಹೇಳಿ ಜನರಿಗೆ ದಾರಿ ತಪ್ಪಿಸುವ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅಕ್ಕಿ ವಿಚಾರದಲ್ಲಿ ವಿನಾಕಾರಣ ಪ್ರಧಾನಿಮೋದಿ ಅವರನ್ನ ಟೀಕಿಸುವುದರಲ್ಲಿ ಅರ್ಥವಿಲ್ಲ  ಎಂದು ಬಿಜೆಪಿ ಹಿಂದುಳಿದ ವರ್ಗದ ಮೊರ್ಚಾದ  ಅಧ್ಯಕ್ಷ ಜೋಗಿ ಮಂಜು ಕಿಡಿ ಕಾರಿದ್ದಾರೆ.

ಇಂದು ಈ ಕುರಿತು ಮಾತನಾಡಿದ ಜೋಗಿ ಮಂಜು,  ಬೇರೆ ರಾಜ್ಯದ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಕ್ಕಿಗಾಗಿ ಪರದಾಡುತ್ತಿರುವುದು ರಾಜ್ಯದ ಜನ ಬೇರೆ ರಾಜ್ಯದ ಜನರ ಮುಂದೆ ತಲೆ ತಗ್ಗಿಸುವ ರೀತಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದ ಮೇಲೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿನಾಕಾರಣ ಪ್ರಧಾನಿಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಇಡೀ ವಿಶ್ವವೇ ಪ್ರಧಾನಿ ಮೋದಿ ಅವರನ್ನು ವಿಶ್ವಗುರು ಎಂದು ಮನ್ನಿಸಿದೆ. ವಿಶ್ವದ ಸೂಪರ್ ಪವರ್ ರಾಷ್ಟ್ರಗಳು ಸಹ ಮೋದಿ ಅವರ ನಾಯಕತ್ವಕ್ಕೆ ತಲೆದೂಗಿವೆ. ಇಂಥ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸುವುದು ಮೂರ್ಖತನ ಹಾಗೂ ಹುಚ್ಚುತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.

Key words: BJP leader-Jogi Manju –CM Siddaramaiah- Prime Minister- Modi.