ಸಕಲ  ಸೌಲಭ್ಯಗಳಿರುವ ನವಬೆಂಗಳೂರು  ನಿರ್ಮಾಣಕ್ಕೆ ನೀಲನಕ್ಷೆ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜನವರಿ,5,2022(www.justkannada.in):  ಸಕಲ  ಸೌಲಭ್ಯಗಳಿರುವ ನವಬೆಂಗಳೂರನ್ನು  ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದ್ದು. ವಿಶೇಷ ಅನುದಾನವನ್ನು  ಸರ್ಕಾರ ಒದಗಿಸಲಿದೆ ಎಂದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಜಿ.ಎಂ ಹಾಗೂ ಅದ್ವಿತೀಯ ಗ್ರೂಪ್ ನ ಐ.ಟಿ ಪಾರ್ಕ್ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬೃಹತ್ ಆಗಿ ಬೆಳೆಯುತ್ತಿರುವ ಬೆಂಗಳೂರನ್ನು ಯೋಜನಾಬದ್ಧವಾಗಿ ಹಾಗೂ ಸಮಗ್ರವಾಗಿ ಅಭಿವೃದ್ಧಿ ಗೊಳಿಸಬೇಕಿದೆ. ಎಲ್ಲ ವರ್ಗದ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ವಿಶೇಷ ಯೋಜನೆಗಳನ್ನು  ಒಟ್ಟಾಗಿ ರೂಪಿಸುತ್ತಿದ್ದೇವೆ.

ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ರೂಪಿಸಲಾದ ಬೆಂಗಳೂರು ವಿಷನ್ 2022 ಯೋಜನೆಯಡಿ 4-5 ಕಾರ್ಯಕ್ರಮ ಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳಿಗೆ ವೇಗವನ್ನು ನೀಡಲು  ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಜಿ.ಎಂ. ಸಂಸ್ಥೆಯ ಕೊಡುಗೆ

ಜಿ.ಎಂ.ಸಿದ್ದೇಶ್ವರ ಅವರ ಎರಡು ಮತ್ತು ಮೂರನೇ ಪೀಳಿಗೆ ಯಶಸ್ವಿಯಾಗಿ ವ್ಯಾಪಾರದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೆಸರುವಾಸಿಯಾದ ಸಂಸ್ಥೆ ಯಾಗಿದೆ. ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಿಸಿ, ಆರೋಗ್ಯ ಸೇವೆಗಳನ್ನು ಉತ್ತಮ ರೀತಿಯಲ್ಲಿ  ನೀಡುತ್ತಿದ್ದಾರೆ. ಎಲ್ಲ ರಂಗದಲ್ಲಿಯೂ ಯಶಸ್ವಿಯಾಗಿ ಕಠಿಣ ಪರಿಶ್ರಮದಿಂದ ಉತ್ತಮವಾಗಿ  ಕಾರ್ಯನಿರ್ವಹಿಸಿದ್ದಾರೆ ಎಂದರು.

ಇದೀಗ ಐ.ಟಿ ಹಬ್ ನಿರ್ಮಿಸಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಪ್ರಸಿದ್ಧವಾಗಿದ್ದು ಐ.ಟಿ ಯಿಂದಾಗಿ. ನಾಲ್ಕು ದಿಕ್ಕಿನಲ್ಲಿಯೂ ಮಾಹಿತಿ ತಂತ್ರಜ್ಞಾನ ಉದ್ಯಮ ವಿಸ್ತರಣೆಯಾಗಿದೆ. ಐ.ಟಿ ಉದ್ಯಮಕ್ಕೆ ಹಿಂದಿನ ಸರ್ಕಾರಗಳೂ  ಸೇರಿದಂತೆ ನಮ್ಮ ಸರ್ಕಾರವೂ ಮಹತ್ವ ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿದೆ.  ಅತಿ ಹೆಚ್ಚು ಉದ್ಯೋಗ ಲಭಿಸುತ್ತಿರುವುದು ಐ.ಟಿ ವಲಯದಲ್ಲಿ. ವಿದ್ಯಾವಂತರಿಗೆ ದೊಡ್ಡ ಪ್ರಮಾಣದಲ್ಲಿ ಅವಕಾಶಗಳು ದೊರಕುತ್ತಿದೆ ಎಂದರು.

ದುಡಿಯುವ ವರ್ಗದವರ ಕೈಯಲ್ಲಿ ದೇಶದ ಆರ್ಥಿಕತೆ

ಜನರ ಕೈಯಲ್ಲಿ ಉದ್ಯೋಗ ಇದ್ದಾಗ ಮಾತ್ರ ದೇಶ ವೃದ್ಧಿಯಾಗಿ , ಆರ್ಥಿಕತೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಐ.ಟಿ ಸೇವೆಗಳು ದೇಶದ ಆರ್ಥಿಕತೆಯಲ್ಲಿ  ಪ್ರಮುಖ ಪಾತ್ರ ವಹಿಸುತ್ತಿದೆ. ಅತಿ ಹೆಚ್ಚು ರಫ್ತು ಆಗುತ್ತಿರುವುದು ಐ.ಟಿ ವಲಯದಲ್ಲಿ. ದೇಶದ ಒಟ್ಟು ರಫ್ತಿನ ಪ್ರಮಾಣದಲ್ಲಿ ಶೇ 40 ರಷ್ಟು ರಫ್ತು ಬೆಂಗಳೂರಿನಿಂದ ಆಗುತ್ತಿದೆ. ಹೀಗಾಗಿ ಬೆಂಗಳೂರು ದೇಶದ ಆರ್ಥಿಕತೆಯ  ಪ್ರಮುಖ ಕೇಂದ್ರವಾಗಿದೆ.

ಕೋವಿಡ್ ಮುಗಿದು ಆರ್ಥಿಕ ಬೆಳವಣಿಗೆಯಾಗುತ್ತಿರುವ ಸಂದರ್ಭದಲ್ಲಿ ಐ.ಟಿ ಹಬ್ ನಿರ್ಮಾಣ ವಾಗುತ್ತಿರುವುದು ಬೆಂಗಳೂರಿನ ಬೆಳವಣಿಗೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದಂತಾಗಿದೆ ಎಂದರು.

ಸಮಾರಂಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಬಿ.ಎ. ಬಸವರಾಜ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್ ಎ. ರವೀಂದ್ರನಾಥ, ಮೊದಲಾದವರು ಉಪಸ್ಥಿತರಿದ್ದರು.

Key words: Bangalore-CM- Basavaraja Bommai