ಭಾರತದ ವಿಮಾನಗಳಿಗೆ ನಿಷೇಧ: ಸೈನಾ, ಕೆ. ಶ್ರೀಕಾಂತ್ ಟೋಕಿಯೊ ಒಲಿಂಪಿಕ್ಸ್ ಕನಸಿಗೆ ಕಂಟಕ

ಬೆಂಗಳೂರು, ಮೇ 07, 2021 (www.justkannada.in):

ಸೈನಾ ನೆಹ್ವಾಲ್‌ ಮತ್ತು ಕೆ. ಶ್ರೀಕಾಂತ್‌ ಅವರ ಟೋಕಿಯೊ ಒಲಿಂಪಿಕ್ಸ್‌ ಕನಸು ಭಗ್ನವಾಗುವ ಅನುಮಾನ ಶುರುವಾಗಿದೆ.

ವಾಯುಯಾನ ನಿರ್ಬಂಧದಿಂದಾಗಿ ಕೊನೆಯ ಅರ್ಹತಾ ಪಂದ್ಯಾವಳಿಯಾದ ಮಲೇಶ್ಯ ಓಪನ್‌ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣವಾಗಿದೆ.

ಇಂಡಿಯಾ ಓಪನ್‌ ಟೂರ್ನಿ (ಮೇ 11-16) ಮುಂದೂಡಲ್ಪಟ್ಟ ಬಳಿಕ ಸೈನಾ ಮತ್ತು ಶ್ರೀಕಾಂತ್‌ ಮಲೇಶ್ಯ ಓಪನ್‌ ಮೇಲೆ ಭರವಸೆ ಇರಿಸಿಕೊಂಡಿದ್ದರು (ಮೇ 25-30). ಆದರೆ ಮಲೇಶ್ಯ ಮತ್ತು ಸಿಂಗಾಪುರ ಭಾರತದ ವಿಮಾನಗಳಿಗೆ ನಿಷೇಧ ಹೇರಿವೆ.

ಬ್ಯಾಡ್ಮಿಂಟನ್‌ ತಂಡದ ಆಗಮನಕ್ಕಾಗಿ ಈ ನಿರ್ಬಂಧ ವನ್ನು ಸಡಿಲುಗೊಳಿಸುವಂತೆ ಮಲೇಶ್ಯ ಸರಕಾರವನ್ನು ಭಾರತ ಕೇಳಿಕೊಂಡಿದೆ. ಇದಕ್ಕೆ ಮಲೇಶ್ಯ ಸಕಾರಾತ್ಮಕವಾಗಿ ಸ್ಪಂದಿಸೀತೇ ಎಂಬುದನ್ನು ಕಾದು ನೋಡಬೇಕಿದೆ.