ಮೈಸೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ  ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಬಡಗಲಪುರ ನಾಗೇಂದ್ರ ತೀವ್ರ ವಿರೋಧ.

ಮೈಸೂರು,ನವೆಂಬರ್,30,2023(www.justkannada.in): ಮೈಸೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಹೊರಟಿರುವ ಸಂಸದ ಪ್ರತಾಪ್ ಸಿಂಹ ಅವರ ನಡೆಗೆ ನಮ್ಮ ತೀವ್ರ ವಿರೋಧ ಇದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಡಗಲಪುರ ನಾಗೇಂದ್ರ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಖಜಾನೆ ಲೂಟಿ ಮಾಡುತ್ತಾರೆ. ವಿಮಾನ ನಿಲ್ದಾಣ ಅಭಿವೃದ್ಧಿಯೂ ನಮಗೆ ಬೇಕಿರಲಿಲ್ಲ. ಇವುಗಳಿಂದ ನಮ್ಮ‌ ರೈತರಿಗೆ, ಜನರಿಗೆ  ಏನೂ ಪ್ರಯೋಜನ ಇಲ್ಲ. ಈಗಾಗಲೇ ಕ್ರಿಕೆಟ್ ಸ್ಟೇಡಿಯಂ ಕಟ್ಟುವುದಕ್ಕೆ ಭೂ ಸ್ವಾಧೀನ ಪ್ರಕ್ರೀಯೆ ನಡೆಯುತ್ತಿದೆ. ಇದನ್ನ ಈ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇಲಾವಾಲ ಹೋಬಳಿಯ ಉಯಿಲಾಳ ಗ್ರಾಮದ ಸುತ್ತುಮುತ್ತಲಿನ ಪ್ರದೇಶ ಸೂಕ್ಷ್ಮ ಪ್ರದೇಶವಾಗಿದೆ. ಅಲ್ಲಿ ಕಾಡು ಪ್ರಾಣಿಗಳು ವಾಸ ಮಾಡುತ್ತವೆ. ಜೊತೆಗೆ ಶ್ರೀರಂಗಪಟ್ಟಣದ ಬರ್ಡ್ ಸೆಂಕ್ಚುರಿ ಕೂಡ ಸಮೀಪದಲ್ಲೇ ಇದೆ.  ಹಾಗಾಗಿ ಅಲ್ಲಿ ಯಾವುದೇ ಕಾರಣಕ್ಕೂ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಕೂಡದು. ನಮ್ಮ ಮನವಿಗೆ ಸ್ಪಂದಿಸಿದಿದ್ದರೇ ಮುಂದಿನ‌ ದಿನಗಳಲ್ಲಿ ಸಂಸದರ ಮೇಲೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗಾಗುತ್ತದೆ ಎಂದು ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

Key words: Badgalpura Nagendra- opposes – construction – international – cricket stadium -Mysore.