ಮೈಸೂರು,ಜೂನ್,25,2025 (www.justkannada.in): ಆಷಾಢ ಮಾಸದಲ್ಲಿ ಮೈಸೂರಿಗೆ ಹಬ್ಬದ ಸಂಭ್ರಮವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕಾಗಿ ಸಕಲ ಸಿದ್ದತೆ ನಡೆಸಲಾಗುತ್ತಿದೆ.
ಚಾಮುಂಡಿ ಬೆಟ್ಟಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ ಭೇಟಿ ನೀಡಿ ಸಿದ್ದತೆ ವೀಕ್ಷಣೆ ಮಾಡಿದರು ಬಳಿಕ ಸಿದ್ದತೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಮೂರು ರೀತಿಯಲ್ಲಿ ದರ್ಶನ ವ್ಯವಸ್ಥೆ ಮಾಡಲಾಗಿದೆ. ಉಚಿತ ದರ್ಶನ, 300 ರೂ ದರ್ಶನ ಮತ್ತು 2000 ದರ್ಶನಕ್ಕೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದೆ.
ಲಲತಾ ಮಹಲ್ ಮೈದಾನದಿಂದ ಹೊರಡುವ ಬಸ್ಸಿನಲ್ಲೇ ಪ್ರತ್ಯೇಕವಾಗಿ ಉಚಿತ ದರ್ಶನ ಭಕ್ತಾದಿಗಳಿಗೆ ಪ್ರತ್ಯೇಕ ಬಸ್, 300 ರೂ ಟಿಕೆಟ್ ಪಡೆದು ಹೋಗುವರಿಗೆ ಪ್ರತ್ಯೇಕ ಬಸ್ ಮತ್ತು ಎರಡು ಸಾವಿರ ರೂ ಟಿಕೆಟ್ ಪಡೆದು ಹೋಗುವವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಮೂರು ವಿಭಾಗ ಮಾಡಿ ದರ್ಶನಕ್ಕೆ ಪ್ರತ್ಯೇಕ ಸರದಿ ಸಾಲನ್ನೂ ಕೂಡ ಮಾಡಲಾಗುತ್ತಿದೆ. ಉಚಿತ ದರ್ಶನಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೂ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಸಿಟಿ ಬಸ್ ಬಸ್ ನಿಂದ ಬರುವ ಪುರುಷರಿಗೆ ಟಿಕೆಟ್ ಕೊಟ್ಟು ಬರಬೇಕಾಗುತ್ತದೆ. ಲಲಿತಾ ಮಹಲ್ ಬಳಿಯಿಂದ ಹೋಗುವ ಸಾಮಾನ್ಯ ಭಕ್ತಾದಿಗಳಿಗೆ ಉಚಿತವಾಗಿರುತ್ತದೆ. ಅದು ಶುಕ್ರವಾರ ಮಾತ್ರ ಉಚಿತವಾಗಿರುತ್ತದೆ. ಶುಕ್ರವಾರದಿಂದ ಭಾನುವಾರದವರೆಗೂ 300, 2000 ಟಿಕೆಟ್ ಕೊಟ್ಟು ಹೋಗುವ ಭಕ್ತಾಧಿಗಳಿಗೆ ಮೂರೂ ದಿನಗಳೂ ಬಸ್ ಉಚಿತವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಡ್ರೈ ಫ್ರೂಟ್ಸ್ ಮತ್ತು ನಂದಿನ ಬಾದಾಮಿ ಹಾಲನ್ನೂ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. 2 ಸಾವಿರ ವಿಶೇಷ ಟಿಕೆಟ್ ಹೊಂದಿರುವ ಭಕ್ತಾದಿಗಳನ್ನ ಕರೆತರುವ ಬಸ್ಸನ್ನ ಮಹಿಷಾಸುರ ಪ್ರತಿಮೆವರೆಗೂ ಕರೆತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್, ಪ್ರಾಧಿಕಾರದ ಕಾರ್ಯದರ್ಶಿ ರೂಪ, ಡಿಸಿಪಿ ಮುತ್ತುರಾಜ್, ಜಿ.ಪಂ ಸಿಇಒ ಯುಕೇಶ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
Key words: Ashada Friday, Chamundi Hills, system, DC, Lakshmikanth Reddy