Wednesday, August 19, 2026

BDA Apartments

Home Front Page ಕಡೇಚೂರು ಕೈಗಾರಿಕಾ ಪ್ರದೇಶ 7 ಸಾವಿರ ಎಕರೆಗೆ ವಿಸ್ತರಣೆ- ಸಚಿವ ಅಶ್ವತ್ ನಾರಾಯಣ್

ಕಡೇಚೂರು ಕೈಗಾರಿಕಾ ಪ್ರದೇಶ 7 ಸಾವಿರ ಎಕರೆಗೆ ವಿಸ್ತರಣೆ- ಸಚಿವ ಅಶ್ವತ್ ನಾರಾಯಣ್

ಯಾದಗಿರಿ,ಫೆಬ್ರವರಿ,13,2022(www.justkannada.in):  ಜಿಲ್ಲೆಯ ಕಡೇಚೂರಿನಲ್ಲಿರುವ 3,500 ಎಕರೆ ಕೈಗಾರಿಕಾ ಪ್ರದೇಶವನ್ನು 7 ಸಾವಿರ ಎಕರೆಗೆ ವಿಸ್ತರಿಸಿ, ಈ ಭಾಗದಲ್ಲಿ ಉದ್ಯೋಗಸೃಷ್ಟಿ ಸಾಧ್ಯವಾಗುವಂತೆ ಕೈಗಾರಿಕೆಗಳು ನೆಲೆಯೂರುವಂತೆ ಮಾಡಲಾಗುವುದು. ಕೈಗಾರಿಕಾ ಪ್ರದೇಶ ವಿಸ್ತರಣೆಗಾಗಿ ಕೇಂದ್ರ ಸರಕಾರದಿಂದಲೂ 1,000 ಕೋಟಿ ರೂ. ನೆರವು ಸಿಗುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಇರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ನೂತನ ತರಬೇತಿ ಕೇಂದ್ರ ಸಂಕೀರ್ಣವನ್ನು ಅವರು ಭಾನುವಾರದಂದು ಉದ್ಘಾಟಿಸಿ ಮಾತನಾಡಿದರು.

ತರಬೇತಿ ಕ್ಯಾಂಪಸ್, ಕಾರ್ಯಾಗಾರ ಮತ್ತು ವಿದ್ಯಾರ್ಥಿ ನಿಲಯಗಳಿರುವ ಈ ಕೇಂದ್ರವನ್ನು 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಮಾನ ತಯಾರಿಕೆಯಲ್ಲಿ ಹೆಸರು ಮಾಡಿರುವ ಡಸಾಲ್ಟ್ ಕಂಪನಿ ಇಲ್ಲಿ ತನ್ನ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ ವರ್ಷಕ್ಕೆ 120 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಈ ಕೇಂದ್ರದ ಮೂಲಕ ಸ್ಥಳೀಯ ಉದ್ದಿಮೆಗಳಿಗೆ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಸಮರ್ಥರಾಗುವಂತೆ ಈ ಕೇಂದ್ರದಲ್ಲಿ ಎಲೆಕ್ಟ್ರಿಕಲ್ ಇನ್ಸ್ಟಾಲೇಶನ್, ಐಒಟಿ, ಮತ್ತು ಇಂಗ್ಲಿಷ್ ಭಾಷಾ ಕಲಿಕೆಯ ಅತ್ಯುತ್ತಮ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಇಂಗ್ಲಿಷ್ ಲ್ಯಾಬಿನಲ್ಲಿ ವರ್ಷಕ್ಕೆ 200 ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುವುದು ಎಂದು ಅವರು ವಿವರಿಸಿದರು.

ಈ ನೂತನ ಕೇಂದ್ರದಲ್ಲಿ ಟೂಲ್ ಮತ್ತು ಡೈ ಮೇಕಿಂಗ್ ಹಾಗೂ ಮೆಕ್ಯಾಟ್ರಾನಿಕ್ಸ್ ನಲ್ಲಿ 4 ವರ್ಷಗಳ ದೀರ್ಘಾವಧಿ ಕೋರ್ಸುಗಳನ್ನು ಆರಂಭಿಸಲಾಗುತ್ತಿದೆ. ಇದರ ಜೊತೆಗೆ, ಫಿಟ್ಟರ್, ಟರ್ನರ್, ಮಿಲ್ಲರ್, ಗ್ರೈಂಡರ್, ಸಾಲಿಡ್ ವರ್ಕ್ಸ್, ಯೂನಿಗ್ರಾಫಿಕ್ಸ್, ಆಟೋಕ್ಯಾಡ್, ಮಾಸ್ಟರ್ ಕ್ಯಾಮ್, ಕ್ಯಾಡ್ ಕ್ಯಾಮ್ ಮುಂತಾದ ಅಲ್ಪಾವಧಿ ಕೋರ್ಸುಗಳೂ ಇದ್ದು, ಇವುಗಳಲ್ಲಿ ವರ್ಷಕ್ಕೆ 400 ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕೊಡಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ದೀರ್ಘಾವಧಿ ಕೋರ್ಸುಗಳಿಗೆ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ಕೊನೆಯ ವರ್ಷದಲ್ಲಿ ಕೈಗಾರಿಕೆ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಗರಿಷ್ಠ 15 ಸಾವಿರ ತರಬೇತಿ ಭತ್ಯೆಯನ್ನೂ ಕೊಡಲಾಗುವುದು. ಒಟ್ಟಿನಲ್ಲಿ, ಯಾದಗಿರಿ ಜಿಲ್ಲೆಯಲ್ಲಿ ಗುಣಮಟ್ಟದ ಉದ್ಯಮಶೀಲ ಸಂಸ್ಕೃತಿಯನ್ನು ರೂಪಿಸಲಾಗುವುದು ಎಂದು ಸಚಿವರು ನುಡಿದರು.

ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ಆರ್ ತಳವಾರ, ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮುಂತಾದವರು ಇದ್ದರು.

Key words- Yadagiri-minister-ashwath narayan