ಬೆಂಗಳೂರು, ಜೂನ್ ,6, 2021(www.justkannada.in): ಬೆಂಗಳೂರು ನಗರ ರೈಲ್ವೆ ನಿಲ್ದಾಣ ಎಂದೇ ಗುರುತಿಸುವಂತಹ ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಚಲಿಸುವ ಸಿಹಿನೀರಿನ ಸುರಂಗ ಆಕ್ವೇರಿಯಂ ಹೊಂದಿರುವ ಭಾರತದ ಮೊಟ್ಟ ಮೊದಲ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಿಟಿಐ ಸುದ್ದಿಯೊಂದರ ಪ್ರಕಾರ, ಈ ಸುರಂಗ ಆಕ್ವೇರಿಯಂ ಅನ್ನು ಜುಲೈ 1, ಗುರುವಾದಂದು ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ ನಿಯಮಿತ (ಐಆರ್ಎಸ್ಡಿಸಿ), ಹೆಚ್ಎನ್ಐ ಆಕ್ವಟಿಕ್ ಕಿಂಗ್ಡಂನ ಸಹಯೋಗದೊಂದಿಗೆ ಸ್ಥಾಪಿಸಿದೆ.
ನೋಡಲು ಅತ್ಯಂತ ಆಕರ್ಷಕವಾಗಿರುವ ಈ ಸುರಂಗ ಆಕ್ವೇರಿಯಂ ಅಮೇಜಾನ್ ನದಿಯ ಪರಿಕಲ್ಪನೆಯನ್ನು ಆಧರಿಸಿದ್ದು, ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ಮುದ ನೀಡಲಿದೆ. ಜೊತೆಗೆ, ಈ ಉಪಕ್ರಮ ಭಾರತೀಯ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯವನ್ನೂ ಒದಗಿಸಲಿದೆ. ಹೇಗೆಂದರೆ ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಿರುವ ಈ ಸುರಂಗ ಆಕ್ವೇರಿಯಂ ವೀಕ್ಷಿಸಲು ಪ್ರತಿ ಪ್ರಯಾಣಿಕರಿಗೆ ರೂ.25 ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಕೋವಿಡ್ ಸಾಂಕ್ರಾಮಿಕದ ಕುರಿತು ಮಾತನಾಡಿದ ಐಆರ್ಎಸ್ಡಿಸಿ ಸಿಇಒ ಹಾಗೂ ಎಂಡಿ ಎಸ್.ಕೆ. ಲೋಹಿಯಾ ಅವರು, ಕೋವಿಡ್ ಮಾರ್ಗಸೂಚಿಗಳಿರುವ ಕಾರಣದಿಂದಾಗಿ ಆಕ್ವೇರಿಯಂ ವೀಕ್ಷಿಸಲು ಒಂದು ಬಾರಿಗೆ ಕೇವಲ ೨೫ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಈ ಸುರಂಗ ಆಕ್ವೇರಿಯಂ 12 ಅಡಿ ಉದ್ದವಿದ್ದು, ವಿಶೇಷ ಮೀನುಗಳು ಹಾಗೂ ಜಲಚರಗಳನ್ನು ಹೊಂದಿರುವ ಭಾರತದ ಈ ರೀತಿಯ ಮೊಟ್ಟ ಮೊದಲ ಆಕ್ವೇರಿಯಂ ಆಗಿದೆ. ಸುರಂಗ ಪ್ರವೇಶಿಸುವ ವೀಕ್ಷಕರನ್ನು ಡಾಲ್ಫಿನ್ ಮೀನು ಕಿರುನಗೆ ಹಾಗೂ ನಮನದೊಂದಿಗೆ ಸ್ವಾಗತಿಸುತ್ತದಂತೆ!
ಬೆAಗಳೂರು ನಗರದ ಜೊತೆಗೆ, ದೆಹಲಿಯ ಆನಂದ್ ವಿಹಾರ್, ಸಿಕಂದರಾಬಾಧ್, ಚಂಢೀಘಡ ಹಾಗೂ ಪುಣೆ ನಗರಗಳಲ್ಲಿಯೂ ಈ ರೀತಿಯ ಸುರಂಗ ಆಕ್ವೇರಿಯಂಗಳನ್ನು ನಿರ್ಮಿಸಲಾಗುತ್ತಿವೆ.
ಹಂತಹಂತಗಳಲ್ಲಿ ಭಾರತದಾದ್ಯಂತ ಇನ್ನೂ 90 ರೈಲ್ವೆ ನಿಲ್ದಾಣಗಳಲ್ಲಿ ಇದೇ ರೀತಿಯ ಸುರಂಗ ಆಕ್ವೇರಿಯಂಗಳನ್ನು ಸ್ಥಾಪಿಸಲಾಗುವುದು ಎಂದು ಕಂಪನಿ ತಿಳಿಸಿದೆಯಂತೆ.
ಬೆಂಗಳೂರು ನಗರದಲ್ಲಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೊ ರೈಲು ಸಂಚಾರ ಜುಲೈ 1ರ ಬೆಳಿಗ್ಗೆ 7 ಗಂಟೆಯಿAದ ಆರಂಭಿಸಲಾಗಿದ್ದು, ಇದೇ ದಿನದಂದೂ ಈ ವಿಶೇಷ ಆಕರ್ಷಣೆಯನ್ನು ಆರಂಭಿಸಿರುವುದು ಮತ್ತೊಂದು ವಿಶೇಷತೆಯಾಗಿದೆ.
Key words: India’s- first -freshwater -aquarium -Bangalore -railway station






