ಮಾತೃಶ್ರೀ, ಸಾಂತ್ವನ ಯೋಜನೆ ಮುಂದುವರಿಸಿ : ಸಿಎಂಗೆ ಪತ್ರ ಬರೆದು ಸಿದ್ದರಾಮಯ್ಯ ಆಗ್ರಹ

 

ಬೆಂಗಳೂರು, ಮೇ 16, 2020 : (www.justkannada.in news): ರಾಜ್ಯ ಸರ್ಕಾರ ಕೊರೋನಾ ರೋಗದ ಹೆಸರಲ್ಲಿ ಸಂಪನ್ಮೂಲಗಳ ಉಳಿತಾಯದ ನೆಪದಲ್ಲಿ ಎಲ್ಲಾ ‘ ಸಾಂತ್ವನ ಕೇಂದ್ರ ‘ ಗಳನ್ನು ಹಾಗೂ “ಮಾತೃಶ್ರೀ” ಯೋಜನೆಯನ್ನು ರದ್ದುಪಡಿಸುವ ಆದೇಶ ಹೊರಡಿಸಿರುವುದು ಖಂಡನಾರ್ಹ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಹೇಳಿರುವುದಿಷ್ಟು…

ಮಾನ್ಯ ಯಡಿಯೂರಪ್ನ ರವರೇ

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳಾ ಸಮೂಹ ಇರುತ್ತದೆ. ಮಹಿಳೆಯರ ಪ್ರಮುಖ ಸಮಸ್ಯೆಗಳಾದ ವರದಕ್ಷಿಣೆ ಕಿರುಕುಳ, ಲೈಂಗಿಕ ಹಲ್ಲೆ, ಕೌಟುಂಬಿಕ ಹಿಂಸೆ ಹಾಗೂ ಇತರೆ ದೌರ್ಜನ್ಯಗಳಿಗೆ ಒಳಪಟ್ಟ ಮಹಿಳೆಯರ ಸಮಸ್ಯೆಗಳಿಗೆ ಒಂದೆ ಸೂರಿನಡಿಯಲ್ಲಿ ಸ್ಪಂದಿಸಿ, ಅವರಿಗೆ ವೈದ್ಯಕೀಯ, ಕಾನೂನು, ಸಲಹೆ ಹಾಗೂ ಸಾಂತ್ವನವನ್ನು ನೀಡುವುದರ ಮೂಲಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ 2001-02ನೇ ಸಾಲಿನಿಂದ “ಸಾಂತ್ವನ” ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 193 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಕೇಂದ್ರದಲ್ಲೂ ಓರ್ವ ಸಮಾಲೋಚಕರು, ವಕೀಲರು ಸೇರಿದಂತೆ 4 ಜನ ಸರ್ಕಾರ ನೀಡುವ ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಏಕಾಏಕಿ ದಿನಾಂಕ:12-5-2020 ರಂದು ರಾಜ್ಯ ಸರ್ಕಾರ ಕೊರೋನಾ ರೋಗದ ನೆಪ ಒಡ್ಡಿ, ಸಂಪನ್ಮೂಲಗಳ ಉಳಿತಾಯದ ನೆಪದಲ್ಲಿ ಎಲ್ಲಾ ಸಾಂತ್ವನ ಕೇಂದ್ರಗಳನ್ನು ರದ್ದುಪಡಿಸುವ ಆದೇಶ ಹೊರಡಿಸಿದೆ.

 siddaramaiha-cm-karnatakla-covid-reason

ಇದೆ ರೀತಿ ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕತೆ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ತಲಾ ರೂ.5,000/-ಗಳ ಸಹಾಯಧನ ನೀಡುವ “ಮಾತೃಶ್ರೀ” ಯೋಜನೆಯನ್ನು 2018 ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆಯಿಂದ ಅನೇಕ ಗರ್ಭಿಣಿ ಮತ್ತು ಬಾಣಂತಿಯರಿಗೆ ಉಪಯೋಗವಾಗಿ ಹೆರಿಗೆ ಸಂದರ್ಭದ ಸಾವಿನ ಪ್ರಮಾಣಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಸಾಂತ್ವನ ಮತ್ತು ಮಾತೃಶ್ರೀಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಏಕಾಏಕಿ ರಾಜ್ಯ ಸರ್ಕಾರ ರದ್ದುಗೊಳಿಸಿರುವುದು ಮಹಿಳಾ ಸಮೂಹಕ್ಕೆ ಮಾಡಿರುವ ದೊಡ್ಡ ದ್ರೋಹ ಮತ್ತು ಅನ್ಯಾಯವಾಗಿರುತ್ತದೆ.

 siddaramaiha-cm-karnatakla-covid-reason

ಸರ್ಕಾರಕ್ಕೆ ಏನಾದರೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕೂಡಲೆ ಸಾಂತ್ವನ ಮತ್ತು ಮಾತೃಶ್ರೀ ಯೋಜನೆಗಳ ರದ್ಧತಿಯನ್ನು ಹಿಂಪಡೆದು ಯಥಾಸ್ಥಿತಿ ಮುಂದುವರೆಸಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

key words : siddaramaiha-cm-karnatakla-covid-reason