ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಆತ್ಮಸ್ಥೈರ್ಯ ತುಂಬಬೇಕು: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು, ನವೆಂಬರ್ 17, 2019 (www.justkannada.in): ಶಾಲಾ ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಬೆಂಗಳೂರು ಬಂಟರ ಸಂಘ ಏರ್ಪಡಿಸಿದ್ದ ಸಂಪರ್ಕ -2019 ಕಾರ್ಯಕ್ರಮವನ್ನು ಉದ್ಥಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆತ್ಮಸ್ಥೈರ್ಯವನ್ನು ತುಂಬಬೇಕು. ಶಿಕ್ಷಣದ ಜೊತೆಗೆ ಉದ್ಯೋಗ ಹಾಗೂ ಬದುಕಿನ ಮೌಲ್ಯಗಳ ಪಾಠ ಅಗತ್ಯ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಲಹೆ ನೀಡಿದರು.

ಶಾಲಾ ಕಾಲೇಜ್ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆತ್ಮಸ್ಥೈರ್ಯವನ್ನು ತುಂಬಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ. ಬದಲಾಗಿ ಶೈಕ್ಷಣಿಕವಾಗಿ ಗರಿಷ್ಠ ಅಂಕ ಪಡೆಯಬೇಕು ಅನ್ನೋ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ. ಇದ್ರಿಂದ ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಆತಂಕಕ್ಕಿಡಾಗುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕು ಎಂದು ಭಾಸ್ಕರ್ ರಾವ್ ಹೇಳಿದ್ರು.

ನಮ್ಮಲ್ಲಿ ಜನರ ಕೊರತೆ ಇಲ್ಲ. ಆದ್ರೆ ಮಾನವ ಸಂಪನ್ಮೂಲದ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಉದ್ಯೋಗದ ಬಗ್ಗೆಯೂ ತಿಳುವಳಿಕೆಯನ್ನು ನೀಡಬೇಕು. ಮಾನವ ಸಂಪನ್ಮೂಲ ಮತ್ತು ವಿದ್ಯಾರ್ಜನೆಯಲ್ಲಿ ಗುಣಮಟ್ಟ ಬಹಳ ಮಹತ್ತರವಾದ ಪಾತ್ರ ವಹಿಸುತ್ತದೆ. ಪಠ್ಯ ವಿಷಯಗಳಲ್ಲಿ ಶೇ.95ರಷ್ಟು ಅಂಕ ಪಡೆದು ಸರಿಯಾದ ಉದ್ಯೋಗ ಸಿಗದಿದ್ದಾಗ ಬಹಳಷ್ಟು ಮಂದಿ ಖಿನ್ನತೆಗೆ ಒಳಗಾಗುತ್ತಾರೆ. ಇದ್ರಿಂದ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತವೆ. ಹೀಗಾಗಿ ಶಾಲಾ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು. ಅಲ್ಲದೆ ವೃತ್ತಿಪರ ಕೌಶಲ್ಯತೆಗಳ ಬಗ್ಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಬೆಂಗಳೂರು ಬಂಟರ ಸಂಘ, ಸಂಪರ್ಕ 2019ರ ಕಾರ್ಯಕ್ರಮದ ಮೂಲಕ ಮಾನವ ಸಂಪನ್ಮೂಲ ಕ್ರೂಢಿಕರಿಸಿ ಬಲವರ್ಧನೆ ಮಾಡುವುದರ ಜೊತೆಗೆ ಸಮುದಾಯದ ಕಿರಿಯರಿಗೆ ಉದ್ಯೋಗ ಅವಕಾಶಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಆಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ವಹಿಸಿದ್ದರು. ಮುಖ್ಯ ಆತಿಥಿಯಾಗಿ ಲುಮೇನ್ಸ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಸಿ. ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಮಧುಕರ ಶೆಟ್ಟಿ, ಬಂಟರ ಸಂಘದ ಮಾನವ ಸಂಪನ್ಮೂಲ ವಿಭಾಗದ ಮುಖಸ್ಥೆ ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು.