Thursday, September 17, 2026

BDA Apartments

ವಿಶ್ವಕರ್ಮ ಅವರು ಶ್ರಮ ಸಂಸ್ಕೃತಿ ಮತ್ತು ಕಾಯಕ ತತ್ವದ ಸಂಕೇತ:-ಶಾಸಕ ಕೆ. ಹರೀಶ್...
Home Front Page ವಿಶ್ವಕರ್ಮ ಅವರು ಶ್ರಮ ಸಂಸ್ಕೃತಿ ಮತ್ತು ಕಾಯಕ ತತ್ವದ ಸಂಕೇತ:-ಶಾಸಕ ಕೆ. ಹರೀಶ್ ಗೌಡ

ವಿಶ್ವಕರ್ಮ ಅವರು ಶ್ರಮ ಸಂಸ್ಕೃತಿ ಮತ್ತು ಕಾಯಕ ತತ್ವದ ಸಂಕೇತ:-ಶಾಸಕ ಕೆ. ಹರೀಶ್ ಗೌಡ

ಮೈಸೂರು, ಸೆಪ್ಟಂಬರ್,17,2026 (www.justkannada.in): ವಿಶ್ವಕರ್ಮ ಕೇವಲ ಒಬ್ಬ ದೇವತೆ ಮಾತ್ರವಲ್ಲ, ಅವರು ಶ್ರಮ ಸಂಸ್ಕೃತಿ ಮತ್ತು ಕಾಯಕ ತತ್ವದ ಸಂಕೇತ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಹೇಳಿದರು.

ಇಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಜಯಂತೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ  ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂದು ಋಗ್ವೇದ ಮತ್ತು ಪುರಾಣಗಳ ಪ್ರಕಾರ, ಈ ಬ್ರಹ್ಮಾಂಡದ ಪ್ರತಿಯೊಂದು ಸೃಷ್ಟಿಯ ಹಿಂದಿರುವ ದೈವಿಕ ಶಕ್ತಿಯೇ ವಿಶ್ವಕರ್ಮ. ಸ್ವರ್ಗ ಲೋಕ, ಸತ್ಯಯುಗದ ಇಂದ್ರಪುರಿ, ತ್ರೇತಾಯುಗದ ಲಂಕಾ ನಗರಿ, ದ್ವಾಪರಯುಗದ ದ್ವಾರಕಾ ನಗರ ಹಾಗೂ ಹಸ್ತಿನಾಪುರಗಳನ್ನು ನಿರ್ಮಿಸಿದ ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ ಅವರು ಎಂದು ಬಣ್ಣಿಸಿದರು.

ದೇವತೆಗಳ ದಿವ್ಯ ಆಯುಧಗಳಾದ ಶ್ರೀವಿಷ್ಣುವಿನ ಸುದರ್ಶನ ಚಕ್ರ, ಶಿವನ ತ್ರಿಶೂಲ ಮತ್ತು ಕರ್ಣನ ಕುಂಡಲಗಳನ್ನು ರೂಪಿಸಿದ ಶಕ್ತಿ ಇವರದ್ದು.  ಮರಗೆಲಸ, ಕಬ್ಬಿಣದ ಕೆಲಸ, ಕಲ್ಲು ಹಾಗೂ ಶಿಲ್ಪಕಲೆ, ಚಿನ್ನ ಹಾಗೂ ಬೆಳ್ಳಿಯ ಆಭರಣ ಕೆಲಸ ತಾಮ್ರ ಮತ್ತು ಕಂಚಿನ ಕೆಲಸ ಪಂಚ ವೃತ್ತಿಗಳಲ್ಲಿ ನಿರತರಾಗಿರುವ ಕುಶಲಕರ್ಮಿಗಳು ಮತ್ತು ವಿಶ್ವಕರ್ಮ ಸಮುದಾಯದವರು ನಮ್ಮ ಸಮಾಜದ ಬೆನ್ನೆಲುಬಾಗಿದ್ದಾರೆ ಎಂದು ಹೇಳಿದರು.

ವಿಧಾನಪರಿಷತ್ ಶಾಸಕರಾದ  ಆರ್. ರಘು ಕೌಟಿಲ್ಯ ಅವರು ಮಾತನಾಡಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿಗೂ ಮತ್ತು ವಿಶ್ವಕರ್ಮ ಸಮುದಾಯಕ್ಕೂ ಅತ್ಯಂತ ಅವಿನಾಭಾವ ಹಾಗೂ ಐತಿಹಾಸಿಕ ಸಂಬಂಧವಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕಟ್ಟಿರುವ ಮೈಸೂರು ಸಂಸ್ಥಾನದ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಮತ್ತು ಶ್ರಮ ಅಪಾರವಾದದ್ದು. ಕಲೆ, ವಾಸ್ತುಶಿಲ್ಪ ಹಾಗೂ ಕೌಶಲ್ಯದ ಮೂಲಕ ಅವರು ನೀಡಿದ ಕೊಡುಗೆ ಚಿರಸ್ಮರಣೀಯ ಎಂದು ಹೇಳಿದರು.

ಯುಗಪುರುಷ, ಪ್ರಜಾಪ್ರಭುತ್ವದ ಹರಿಕಾರ ಎಂದೇ ಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಜ ಅರ್ಥದಲ್ಲಿ ಈ ಯುಗದ ಶ್ರೇಷ್ಠ ರಾಜ.ಸುಮಾರು ಐದು ಶತಮಾನಗಳ ಕಾಲ (೫೦೦ ವರ್ಷಗಳು) ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ಮಂದಿರವಿರಲಿಲ್ಲ ಆದರೆ ಆ ರಾಮರಾಜ್ಯದ ಪರಿಕಲ್ಪನೆಯನ್ನು ತಮ್ಮ ಆಡಳಿತದಲ್ಲಿ ಸಾಕಾರಗೊಳಿಸಿದವರು ನಮ್ಮ ಒಡೆಯರು.ವಿಶ್ವಕರ್ಮ ಅವರು ಶ್ರಮ ಸಂಸ್ಕೃತಿ ಮತ್ತು ಕಾಯಕ ತತ್ವದ ಸಂಕೇತ mla harish gowda

ಜಗಜ್ಯೋತಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನಂತರ ಸಮಾಜದ ಪ್ರತಿಯೊಂದು ಹಿಂದುಳಿದ ಹಾಗೂ ತುಳಿತಕ್ಕೊಳಗಾದ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ಮತ್ತು ಮೀಸಲಾತಿ ನೀಡಲು ಮುಂದಾದ ಮಹಾನ್ ಮಾನವತಾವಾದಿ ನಾಲ್ವಡಿ ಕೃಷ್ಣರಾಜರು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಪ್ರತಿಯೊಬ್ಬ ಹಿಂದುಳಿದ ವರ್ಗದ ವ್ಯಕ್ತಿಯೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಅತ್ಯಂತ ಗೌರವದಿಂದ ಸ್ಮರಿಸಬೇಕಾದುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕವಿಗಳು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಮೃತ್ಯುಂಜಯ ಅವರು ಮಾತನಾಡಿ ವಿಶ್ವಕರ್ಮರ ಐದು ಮುಖಗಳಿಂದ ಮನು, ಮಯ, ತ್ವಷ್ಟ್ರ, ಶಿಲ್ಪಿ ಮತ್ತು ದೈವಜ್ಞ ಎಂಬ ಐದು ಮಕ್ಕಳ ಉದ್ಭವವಾಯಿತು ಎಂಬ ನಂಬಿಕೆ ಇದೆ. ಇವರಿಂದಲೇ ಕಬ್ಬಿಣ, ಮರ, ಕಂಚು/ತಾಮ್ರ, ಶಿಲ್ಪಕಲೆ ಹಾಗೂ ಚಿನ್ನ, ಬೆಳ್ಳಿಯ ನೈಪುಣ್ಯ ಕಾರ್ಯಗಳು ಜಗತ್ತಿಗೆ ಪರಿಚಯಗೊಂಡವು ಎಂದು ಹೇಳಿದರು.

ವಿಶ್ವಕರ್ಮ ಜಯಂತಿಯ ದಿನದಂದು ಕಾರ್ಖಾನೆಗಳು, ಕಚೇರಿಗಳು ಹಾಗೂ ಮನೆಗಳಲ್ಲಿ ಉಪಕರಣಗಳು, ಯಂತ್ರಗಳು ಮತ್ತು ಕಾಯಕದ ಸಾಧನಗಳನ್ನು ಪೂಜಿಸಲಾಗುತ್ತದೆ. ಕಾಯಕವೇ ಕೈಲಾಸ ಎಂಬ ತತ್ವಕ್ಕೆ ವಿಶ್ವಕರ್ಮ ದಿನಾಚರಣೆಯೇ ಅತ್ಯುತ್ತಮ ಉದಾಹರಣೆ. ಪ್ರತಿಯೊಬ್ಬ ಕೌಶಲದ ಕೆಲಸಗಾರ, ಶಿಲ್ಪಿ, ಎಂಜಿನಿಯರ್ ಹಾಗೂ ಶ್ರಮಿಕರಲ್ಲಿ ವಿಶ್ವಕರ್ಮನ ಅಂಶ ಅಡಗಿದೆ ಎಂದು ಹೇಳಿದರು.ಶಾಸಕ ಕೆ. ಹರೀಶ್ ಗೌಡ jk02_new jk02 new

ಕಾರ್ಯಕ್ರಮದಲ್ಲಿ ಮಾಗಡಿ ತಾಲೂಕಿನ ಶ್ರೀ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರ ಗೆಜ್ಜೆಗಾರಗುಪ್ಪೆಯ ಮಠಾಧಿಪತಿಗಳಾದ ಶ್ರೀ ಡಾ. ಕುಮಾರಸ್ವಾಮಿ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್, ಗಣ್ಯರಾದ ರಮಣಿ, ಕೆಂಡಗಣ್ಣೇಸ್ವಾಮಿ, ಹುಚ್ಚಪ್ಪ, ಅರಕೇಶ್, ಶಂಕರ್, ಜಯಕುಮಾರ್ ಅವರು ಉಪಸ್ಥಿತರಿದ್ದರು.

Key words: Vishwakarma, symbol, culture, hard work, Mysore, MLA, K. Harish Gowda.