Friday, August 28, 2026

BDA Apartments

Home Front Page ಮಾನವ–ಆನೆ ಸಂಘರ್ಷ, ಕಸ್ತೂರಿ ರಂಗನ್ ವರದಿ ಅನುಷ್ಠಾನ: ಸಮಗ್ರ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್

ಮಾನವ–ಆನೆ ಸಂಘರ್ಷ, ಕಸ್ತೂರಿ ರಂಗನ್ ವರದಿ ಅನುಷ್ಠಾನ: ಸಮಗ್ರ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್

ಬೆಂಗಳೂರು/ಮೈಸೂರು, ಆಗಸ್ಟ್, 28, 2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೊಡಗಿನ ಜನರ ಪ್ರಮುಖ ಸಮಸ್ಯೆಗಳನ್ನು ಮತ್ತೊಮ್ಮೆ ಕರ್ನಾಟಕ ಸರ್ಕಾರದ ಗಮನಕ್ಕೆ ತಂದಿದ್ದು, ಮಾನವ–ಆನೆ ಸಂಘರ್ಷ ಹಾಗೂ ಡಾ. ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಗ್ರ ಪ್ರಸ್ತಾವನೆಗಳನ್ನು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ.

ಈ ಎರಡೂ ವಿಚಾರಗಳು ಕೊಡಗಿನ ಜನರಲ್ಲಿ, ವಿಶೇಷವಾಗಿ ರೈತರು, ತೋಟದ ಮಾಲೀಕರು ಹಾಗೂ ಅರಣ್ಯ ಪ್ರದೇಶಗಳ ಸುತ್ತಮುತ್ತ ವಾಸಿಸುವ ನಿವಾಸಿಗಳಲ್ಲಿ ಗಂಭೀರ ಆತಂಕವನ್ನು ಮೂಡಿಸಿವೆ.

ಈ ಸಮಸ್ಯೆಗಳ ಕುರಿತು ಚರ್ಚಿಸಲು ಕೊಡಗಿನಲ್ಲಿ ಕರೆಯಲಾಗಿದ್ದ ವಿಶೇಷ ಸಭೆಗೆ  ಯದುವೀರ್ ಒಡೆಯರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಮೈಸೂರಿನಲ್ಲಿ ನಡೆಯುತ್ತಿದ್ದ ದಿಶಾ ಸಭೆಯಲ್ಲಿ ಪೂರ್ವನಿಗದಿತ ಅಧಿಕೃತ ಕಾರ್ಯಕ್ರಮವಿದ್ದ ಕಾರಣ ಅವರು ಕೊಡಗಿನ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಕೊಡಗಿನ ಜನರ ಧ್ವನಿ ಮತ್ತು ಕಳಕಳಿಯನ್ನು ಅಧಿಕೃತವಾಗಿ ಪ್ರತಿನಿಧಿಸುವ ನಿಟ್ಟಿನಲ್ಲಿ, ತಮ್ಮ ವಿವರವಾದ ಅಭಿಪ್ರಾಯಗಳು, ಸಲಹೆಗಳು ಮತ್ತು ಪ್ರಸ್ತಾವನೆಗಳನ್ನು ಮೈಸೂರಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೇರವಾಗಿ ಸಲ್ಲಿಸಿದರು.

ಮಾನವ–ಆನೆ ಸಂಘರ್ಷಕ್ಕೆ ಸಮಗ್ರ ಕ್ರಮಕ್ಕೆ ಒತ್ತಾಯ

ಕೊಡಗಿನಲ್ಲಿ ಹೆಚ್ಚುತ್ತಿರುವ ಮಾನವ–ಆನೆ ಸಂಘರ್ಷವನ್ನು ಉಲ್ಲೇಖಿಸಿದ ಸಂಸದ ಯದುವೀರ್ ಒಡೆಯರ್, ಈ ಸಮಸ್ಯೆಯನ್ನು ತಾತ್ಕಾಲಿಕ ಹಾಗೂ ತುಂಡು-ತುಂಡು ಕ್ರಮಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಮಾನವ ಜೀವಗಳು, ಕೃಷಿ ಹಾಗೂ ಜನರ ಜೀವನೋಪಾಯವನ್ನು ರಕ್ಷಿಸಲು ವೈಜ್ಞಾನಿಕ, ಸಮಗ್ರ ಮತ್ತು ದೀರ್ಘಕಾಲೀನ ಕಾರ್ಯತಂತ್ರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಅವರ ಪ್ರಸ್ತಾವನೆಯಲ್ಲಿ ಅಪಾಯದ ಅರಣ್ಯ ಗಡಿ ಪ್ರದೇಶಗಳಲ್ಲಿ ರಕ್ಷಣಾತ್ಮಕ ಮೂಲಸೌಕರ್ಯವನ್ನು ಬಲಪಡಿಸುವುದು, ಆನೆಗಳ ಚಲನವಲನವನ್ನು ವೈಜ್ಞಾನಿಕವಾಗಿ ಹಾಗೂ ನೈಜ ಸಮಯದಲ್ಲಿ (Real-time) ಮೇಲ್ವಿಚಾರಣೆ ಮಾಡುವುದು, ಪರಿಣಾಮಕಾರಿ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಸ್ಥಾಪಿಸುವುದು, ತ್ವರಿತ ಪ್ರತಿಕ್ರಿಯಾ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಅರಣ್ಯ ಪ್ರದೇಶಗಳಲ್ಲಿಯೇ ಸಾಕಷ್ಟು ಮೇವು ಮತ್ತು ನೀರಿನ ಲಭ್ಯತೆಯನ್ನು ಖಚಿತಪಡಿಸುವ ಮೂಲಕ ಆನೆಗಳು ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.

ಮಾನವ–ವನ್ಯಜೀವಿ ಸಂಘರ್ಷವನ್ನು ವಿಪತ್ತು ನಿರ್ವಹಣೆಯ ಸವಾಲಿನಷ್ಟೇ ಗಂಭೀರವಾಗಿ ಪರಿಗಣಿಸಿ, ತಡೆಗಟ್ಟುವ ಕ್ರಮಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಕಾಲಿಕ ಪರಿಹಾರಕ್ಕಾಗಿ ಲಭ್ಯವಿರುವ ರಾಜ್ಯ ಮತ್ತು ರಾಷ್ಟ್ರೀಯ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು  ಸಂಸದ ಯದುವೀರ್ ಅವರು ಒತ್ತಾಯಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿ ಕೊಡಗಿನ ಜನರನ್ನು ಕಡೆಗಣಿಸಬಾರದು

ಡಾ. ಕಸ್ತೂರಿರಂಗನ್ ವರದಿಯ ಕುರಿತು ಮಾತನಾಡಿದ ಯದುವೀರ್ ಒಡೆಯರ್, ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಅದೇ ಸಂದರ್ಭದಲ್ಲಿ ಹಲವು ತಲೆಮಾರುಗಳಿಂದ ಈ ಪ್ರದೇಶಗಳಲ್ಲಿ ವಾಸಿಸುತ್ತಾ, ಪರಿಸರವನ್ನು ಸಂರಕ್ಷಿಸಿಕೊಂಡು ಬಂದಿರುವ ಜನರ ಹಕ್ಕುಗಳು, ಜೀವನೋಪಾಯ ಮತ್ತು ಭವಿಷ್ಯವನ್ನೂ ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದರು.

ಈ ನಿಟ್ಟಿನಲ್ಲಿ ಅವರು ಹಲವಾರು ವಿವರವಾದ ಸಲಹೆಗಳನ್ನು ಸಲ್ಲಿಸಿದ್ದು, ಕೇವಲ ಉಪಗ್ರಹ ಚಿತ್ರಗಳನ್ನೇ ಆಧರಿಸದೆ ಸ್ಥಳೀಯ ಮಟ್ಟದಲ್ಲಿ ಭೌತಿಕ ಪರಿಶೀಲನೆ ನಡೆಸುವುದು, ವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಯನ್ನು ನಿಖರವಾಗಿ ಗುರುತಿಸುವುದು, ಕಾನೂನುಬದ್ಧ ಕೃಷಿ ಮತ್ತು ಅಗತ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಸೂಕ್ತ ರಕ್ಷಣೆ ಒದಗಿಸುವುದು ಹಾಗೂ ಸ್ಥಳೀಯ ಸಮುದಾಯಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವಂತೆ ಮನವಿ ಮಾಡಿದ್ದಾರೆ.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ರೈತರು, ನಿವಾಸಿಗಳು ಹಾಗೂ ಅರಣ್ಯ ಪ್ರದೇಶಗಳ ಸಮೀಪ ವಾಸಿಸುವ ಸಮುದಾಯಗಳು ಅನಗತ್ಯ ನಿರ್ಬಂಧಗಳು ಅಥವಾ ಅನಿಶ್ಚಿತತೆಗೆ ಒಳಗಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಕೊಡಗು ಐತಿಹಾಸಿಕವಾಗಿ ಪರಿಸರ ಸಂರಕ್ಷಣೆ ಮತ್ತು ಜನರ ಜೀವನೋಪಾಯ ಎರಡೂ ಸಹಬಾಳ್ವೆ ನಡೆಸಲು ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟಿದೆ. ಆದ್ದರಿಂದ, ಭಾರತ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸುವ ಯಾವುದೇ ಪ್ರಸ್ತಾವನೆಯು ಕೊಡಗಿನ ನೈಜ ಪರಿಸ್ಥಿತಿ ಮತ್ತು ಜನರ ನೆಲಮಟ್ಟದ ಕಳಕಳಿಯನ್ನು ಪ್ರತಿಬಿಂಬಿಸುವಂತಿರಬೇಕು ಎಂದು  ಸಂಸದ ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.

“ಪ್ರಕೃತಿಯನ್ನು ರಕ್ಷಿಸುವುದಕ್ಕೂ ತಮ್ಮ ಜೀವನೋಪಾಯವನ್ನು ರಕ್ಷಿಸುವುದಕ್ಕೂ ಕೊಡಗಿನ ಜನರನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಳ್ಳಬಾರದು. ಎರಡನ್ನೂ ರಕ್ಷಿಸುವುದು ಸಾಧ್ಯ, ಮತ್ತು ಎರಡನ್ನೂ ರಕ್ಷಿಸಲೇಬೇಕು. ನಮ್ಮ ನಿಲುವು ವೈಜ್ಞಾನಿಕ, ಪ್ರಾಯೋಗಿಕ ಹಾಗೂ ನೆಲಮಟ್ಟದ ವಾಸ್ತವಾಂಶಗಳಿಗೆ ಸೂಕ್ಷ್ಮವಾಗಿರಬೇಕು.” ಎಂದು ಅವರು ಹೇಳಿದರು.

ಯದುವೀರ್ ಒಡೆಯರ್ ಅವರು ಸಚಿವ ರಾಮಲಿಂಗಾರೆಡ್ಡಿ ಹಾಗೂ ರಾಜ್ಯ ಸರ್ಕಾರವು ತಮ್ಮ ಪ್ರಸ್ತಾವನೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೈಸೂರು ಮತ್ತು ಕೊಡಗಿನ ಜನರ ಸಮಸ್ಯೆಗಳನ್ನು ಸೂಕ್ತ ವೇದಿಕೆಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುವುದರ ಜೊತೆಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮುಂದೆ ಜನರ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಲು ತಾವು ಮುಂದುವರಿಯುವುದಾಗಿ  ಸಂಸದ ಯದುವೀರ್ ಒಡೆಯರ್ ಪುನರುಚ್ಚರಿಸಿದ್ದಾರೆ.

Key words: Human-elephant conflict, Kasturirangan report, MP Yaduveer, Minister Ramalingreddy