ಬೆಂಗಳೂರು,ಆಗಸ್ಟ್,28,2026 (www.justkannada.in): ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಮತ್ತು ದಕ್ಷಿಣ ಭಾರತದ ಡೆಪ್ಯಟಿ ವಾಣಿಜ್ಯ ಕಮಿಷನರ್ ಆಗಿದ್ದ ಚಂದ್ರು ಅಯ್ಯರ್ ಅವರ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಕರ್ನಾಟಕ ಮತ್ತು ಬ್ರಿಟನ್ ವ್ಯಾಪಾರ ಸಂಬಂಧ ರಚನಾತ್ಮಕ ಬಲವರ್ಧನೆ ಕಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಬಣ್ಣಿಸಿದ್ದಾರೆ.
ಇಲ್ಲಿಂದ ವರ್ಗಾವಣೆಯಾಗಿ ಹೋಗುತ್ತಿರುವ ಅಯ್ಯರ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, “ಚಂದ್ರು ಅವರು ನಮ್ಮವರೇ ಆಗಿಬಿಟ್ಟಿದ್ದರು. ಇವರ ಸೇವಾವಧಿಯಲ್ಲಿ ದ್ವಿಪಕ್ಷೀಯ ಸಕ್ರಿಯತೆ ಶಿಷ್ಟಾಚಾರವನ್ನು ಮೀರಿತ್ತು. ಅವರು ನಮ್ಮೊಂದಿಗೆ ಹೂಡಿಕೆಯನ್ನು ಹೆಚ್ಚು ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೇಯಸ್ಸನ್ನು ಹೊಂದಿದ್ದಾರೆ,” ಎಂದಿದ್ದಾರೆ.
ಚಂದ್ರು ಅವರು ಇಲ್ಲಿಗೆ ಬಂದಾಗ ಬೆಂಗಳೂರಿನಿಂದ ಲಂಡನ್ ನಡುವೆ ವಾರಕ್ಕೆ ಕೇವಲ ಏಳು ನೇರ ವಿಮಾನಗಳಿದ್ದವು. ಈಗ ಇವುಗಳ ಸಂಖ್ಯೆ 34ಕ್ಕೇರಿದೆ. ಈ ಸೌಕರ್ಯದ ಹಿಂದೆ ಚಂದ್ರು ಅವರ ಪರಿಶ್ರಮವಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವರ ಕಾರ್ಯಾವಧಿಯಲ್ಲಿ ಕರ್ನಾಟಕ ಮತ್ತು ಬ್ರಿಟನ್ ನಡುವೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಸಂಶೋಧನೆ, ಅಭಿವೃದ್ಧಿ ವಲಯಗಳಲ್ಲಿ ಬಾಂಧವ್ಯವು ವಿಸ್ತರಿಸಿದೆ. ಈಗ ಇವರು ವರ್ಗಾವಣೆಯಾಗಿ ಹೋಗುತ್ತಿರುವುದು ನಮಗೆ ನಷ್ಟದ ಸಂಗತಿಯಾಗಿದೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬ್ರಿಟಿಷ್ ಹೈಕಮಿಷನರ್ ಕಚೇರಿಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
Key words: transfer: Farewell, British Deputy High Commissioner, Chandru Iyer, Minister MB Patil







