ಬೆಂಗಳೂರು, ಆಗಸ್ಟ್, 14,2026 (www.justkannada.in): ಆಧುನಿಕ ತಂತ್ರಜ್ಞಾನ ಮಕ್ಕಳನ್ನು ಓದಿನಿಂದ ವಿಮುಖರನ್ನಾಗಿಸುತ್ತಿದೆ. ಇದನ್ನು ತಪ್ಪಿಸಲು ಮಕ್ಕಳಿಗೆ ಆಕರ್ಷಕವೆನಿಸುವ ರೀತಿಯಲ್ಲಿ ಪುಸ್ತಕಗಳನ್ನು ರಚಿಸುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕನ್ನಡ ಭವನದಲ್ಲಿ ಇಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳನ್ನು ರಚಿಸುವ ಮೂರು ದಿನಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಎಲ್. ಎನ್. ಮುಕುಂದರಾಜ್ ಅವರು ಮಾತನಾಡಿದರು.
ಮಕ್ಕಳಿಗೆ ಕನ್ನಡ ಸಾಹಿತ್ಯದ ಮಹತ್ವವನ್ನೂ ಅರಿವು ಮಾಡಿಕೊಡಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ಹಾಗಾಗಿ ಮಕ್ಕಳ ಪುಸ್ತಕಗಳ ತಜ್ಞರಾದ ಜಿ. ಎನ್. ಮೋಹನ್ ಅವರ ಸಂಪಾದಕತ್ವದಲ್ಲಿ 50 ಮಕ್ಕಳ ಕೃತಿಗಳನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಇದರಲ್ಲಿ ಪ್ರಾಚೀನ, ಜಾನಪದ, ಸಮಕಾಲೀನ ಕೃತಿಗಳನ್ನು ಸಚಿತ್ರ ಮಕ್ಕಳ ಪುಸ್ತಕವಾಗಿ ರೂಪಿಸಲಾಗುವುದು ಎಂದರು.
ಯೋಜನೆಯ ಸಂಪಾದಕ ಜಿ. ಎನ್. ಮೋಹನ್ ಅವರು ಮಾತನಾಡಿ ತಂತ್ರಜ್ಞಾನದ ಅಬ್ಬರದ ಕಾಲದಲ್ಲಿ ಓದಿಗೆ ಮರಳುವಂತೆ ಮಾಡುವ ಸವಾಲನ್ನು ಇಡೀ ಜಗತ್ತು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆರಂಭದಿಂದಲೇ ಓದಿನ ರುಚಿ ಹುಟ್ಟಿಸುವುದು ಅಗತ್ಯ. ಆ ಕಾರಣಕ್ಕಾಗಿಯೇ ಮಕ್ಕಳಿಗೆ ಕಾಮಿಕ್ಸ್, ಗ್ರಾಫಿಕ್ ಪುಸ್ತಕಗಳನ್ನು ಹೆಚ್ಚಿಗೆ ಪ್ರಕಟಿಸುವ ಪರಂಪರೆ ಆರಂಭವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಕ್ಕಳ ಪುಸ್ತಕಗಳ ಬಗ್ಗೆ ಯೋಜನೆಯನ್ನು ರೂಪಿಸಿರುವುದು ಅಭಿನಂದನಾರ್ಹ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ. ಸ. ಕುಮಾರ್ ಅವರು ಮಾತನಾಡಿ ಮಕ್ಕಳಲ್ಲಿ ಕಲ್ಪನೆಯ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅವರಿಗೆ ಕಲೆಯ ಅಭಿರುಚಿಯನ್ನು ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದ್ದು ಎಂದರು.
ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ, ಸದಸ್ಯರಾದ ಪ್ರಕಾಶರಾಜ್ ಮೇಹು, ಚಿಕ್ಕಮಗಳೂರು ಗಣೇಶ್ ಉಪಸ್ಥಿತರಿದ್ದರು.
Key words: Children’s literature, needs, new dimension, L. N. Mukundaraj






