Friday, August 14, 2026

BDA Apartments

Home Crime ಜೈಲಿನಲ್ಲಿ ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್‌ ರೇವಣ್ಣ ಬಳಿ ಇದ್ದಿದ್ದು ‘ಆಂಧ್ರ ಆ್ಯಕ್ಟಿವೇಟೆಡ್ ಸಿಮ್’

ಜೈಲಿನಲ್ಲಿ ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್‌ ರೇವಣ್ಣ ಬಳಿ ಇದ್ದಿದ್ದು ‘ಆಂಧ್ರ ಆ್ಯಕ್ಟಿವೇಟೆಡ್ ಸಿಮ್’

ಬೆಂಗಳೂರು,ಆಗಸ್ಟ್, 14,2026 (www.justkannada.in): ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್‌ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ  ತನಿಖೆ ನಡೆಸುತ್ತಿರುವ  ತನಿಖಾ ತಂಡವು  ಜೈಲಿಗೆ ಸಿಮ್ ಗಳನ್ನ ತಲುಪಿಸುವ ಕೆಲಸ ಮಾಡುತ್ತಿದ್ದ ಸಂಘಟಿತ ಜಾಲವೊಂದನ್ನ ಪತ್ತೆ ಹಚ್ಚಿದೆ.

ಪ್ರಜ್ವಲ್ ರೇವಣ್ಣ ಬಳಿಸಿದ್ದು ‘ಆಂಧ್ರ ಆ್ಯಕ್ಟಿವೇಟೆಡ್ ಸಿಮ್ ಎನ್ನಲಾಗಿದ್ದು   ಬ್ಯಾರಕ್‌ ಗೆ ಮೊಬೈಲ್ ಹೇಗೆ ಬಂತು, ಜೈಲು ಸಿಬ್ಬಂದಿಯ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಸಾಗುತ್ತಿದೆ. ಹಾಗೆಯೇ ಹೊರರಾಜ್ಯದಲ್ಲಿ ಖರೀದಿಸಿದ ಸಿಮ್ ಕಾರ್ಡ್‌ ಗಳನ್ನು ಪರಪ್ಪನ ಅಗ್ರಹಾರದಲ್ಲಿ ಇರುವ ವಿಚಾರಣಾಧೀನ, ಸಜಾ ಕೈದಿಗಳಿಗೆ ತಲುಪಿಸುವ ಸಂಘಟಿತ ಜಾಲವೊಂದು ಜೈಲಿನೊಳಗೇ ಕೆಲಸ ಮಾಡುತ್ತಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ.

ಜೈಲಿನ ಸುತ್ತಮುತ್ತ ಜಾಮ‌ರ್ ಅಳವಡಿಸಲಾಗಿದೆ. ನೆಟ್ವರ್ಕ್ ಸಿಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಜೈಲಿನ ಒಳಗೆ ಏರ್‌ ಟೆಲ್ ಕಂಪನಿಯ ಸಿಮ್ ಬಳಕೆಯಾಗುತ್ತಿದೆ. ಅದರಲ್ಲೂ ಅಂಧ್ರ ಪ್ರದೇಶದಲ್ಲಿ ಆ್ಯಕ್ಟಿವೇಟ್ ಆದ ಏರ್ ಟೆಲ್ ಸಿಮ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರಾಗೃಹಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ತನಿಖಾ ತಂಡಕ್ಕೆ ಸೂಚಿಸಿದ್ದು,  ಇದರ ಬೆನ್ನಲ್ಲೇ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡವು ತನಿಖೆ ಆರಂಭಿಸಿದೆ.

AI Created Photo

ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ಬ್ಯಾರಕ್‌ ನಲ್ಲಿ ಸಿಕ್ಕಿದ ಮೊಬೈಲ್‌ ನಲ್ಲೂ ಆಂಧ್ರಪ್ರದೇಶ ದಲ್ಲಿ ಆ್ಯಕ್ಟಿವೇಟ್ ಆದ ಏರ್‌ಟೆಲ್ ಸಿಮ್ ಬಳಸಲಾಗಿದೆ. ಆತ ಬಳಸುತ್ತಿದ್ದ ಸಿಮ್ ಕಾರ್ಡ್ ಕಳೆದ ಮಾರ್ಚ್ ತಿಂಗಳಿನಿಂದಲೇ ಬಳಕೆಯಲ್ಲಿ ಇರುವುದು ತನಿಖೆಯಿಂದ ಗೊತ್ತಾಗಿದೆ. ಜೈಲಿನ ವೈ-ಫೈ ಮೂಲಕವೇ ಪ್ರಜ್ವಲ್, ಪ್ರತಾಪ್ ರಾಯ್ ಜಾಲತಾಣ ಬಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ನಲ್ಲಿ ಯುವತಿಯರ ಮೊಬೈಲ್ ಸಂಖ್ಯೆ ಪತ್ತೆ

ಪ್ರಜ್ವಲ್ ಇದ್ದ ಬ್ಯಾರಕ್‌ನಲ್ಲಿ ಸಿಕ್ಕಿದ ನೋಟ್‌ಬುಕ್‌ನಲ್ಲಿ ಕೆಲವು ಯುವತಿಯರು. ಸಂಬಂಧಿಕರು ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ಕೋಡ್‌ವರ್ಡ್‌ಲ್ಲಿ ಬರೆದು ಕೊಂಡಿರುವುದು ಪತ್ತೆಯಾಗಿದೆ. ಪಾಕೆಟ್ ಮಾದರಿಯ ನೋಟ್‌ಬುಕ್‌ನಲ್ಲಿ 30ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಪತ್ತೆಯಾಗಿವೆ. ತಾಯಿಯ ಹೆಸರನ್ನು ಪಾರ್ವತಿ, ತಂದೆಯ ಹೆಸರನ್ನು ಶಿವಯ್ಯ ಎಂದು ಪ್ರಜ್ವಲ್ ಬರೆದುಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಕರಣದಲ್ಲಿ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ. ‘ಈ ಹಿಂದೆ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆಗ ಈರಣ್ಣ ರಂಗಾಪುರ ಅವರು ಸಿಸಿಬಿ ಪೊಲೀಸರನ್ನು ಒಳಗೆ ಬಿಡಲು ಹಿಂದೇಟು ಹಾಕಿದ್ದರು. ಕೆಲವು ಬ್ಯಾರಕ್‌ಗಳಲ್ಲಿದ್ದ ನಿಷೇಧಿತ ವಸ್ತುಗಳನ್ನು ಸಿಬ್ಬಂದಿ ಮೂಲಕ ಬೇರೆಡೆ ಸ್ಥಳಾಂತರ ಮಾಡಿಸಿದ್ದರು. ಹೀಗಾಗಿಯೇ ಈ ಹಿಂದೆಯೂ ಅಮಾನತುಗೊಂಡಿದ್ದರು’ ಎನ್ನಲಾಗಿದೆ.

‘ಜೈಲಿನ ಹೈಸೆಕ್ಯುರಿಟಿ ಬ್ಯಾರಕ್‌ ನಲ್ಲಿ ಪ್ರಜ್ವಲ್‌ ನನ್ನು ಇರಿಸಲಾಗಿತ್ತು. ಸಿಸಿಬಿ ದಾಳಿ ವೇಳೆ ಆ ಬ್ಯಾರಕ್‌ ನಲ್ಲಿ ರೆಡ್‌ ಮಿ ಕಂಪನಿಯ ಮೊಬೈಲ್, ಚಾರ್ಜರ್, ಸಿಮ್ ಕಾರ್ಡ್, ಪೆನ್ ಡ್ರೈವ್, ಡೈರಿ ಸಿಕ್ಕಿವೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ ಹೇಳಿದರು.

ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ,  ಪ್ರಜ್ವಲ್‌ ಗೆ ಯಾರು ಮೊಬೈಲ್‌ ತಲುಪಿಸಿದ್ದರೋ ಆ ಅಧಿಕಾರಿಯ ತಲೆದಂಡ ಖಚಿತ. ಕಾರಾಗೃಹಗಳ ಸುಧಾರಣೆ ಸಂಬಂಧ ಹಿತೇಂದ್ರ ಸಮಿತಿ ವರದಿ ಸಲ್ಲಿಕೆ ಮಾಡಿತ್ತು. ಆ ವರದಿಯ ಪುನರ್‌ ಪರಿಶೀಲನೆ ನಡೆಸಿ ಕಾರಾಗೃಹಗಳಲ್ಲಿ ಸುಧಾರಣಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Key words: Mobile phone, found,jail case, Prajwal Revanna, Andhra, activated, SIM