ಮೈಸೂರು,ಆಗಸ್ಟ್,8,2026 (www.justkannada.in): ಹಳೆಯ ಮೈಸೂರು ಪ್ರಾಂತ್ಯದಲ್ಲಿ ದಲಿತ ಸಮುದಾಯದ ಹಿರಿಯ ನಾಯಕರೆನ್ನಿಸಿಕೊಂಡಿರುವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವುದು ಮೈಸೂರು ಭಾಗದ ದಲಿತ ನಾಯಕತ್ವಕ್ಕೆ ದೊಡ್ಡ ಪೆಟ್ಟು ನೀಡಿದೆ.
ಕಳೆದ 2016ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಿಂದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಕೈಬಿಟ್ಟಿದ್ದಕ್ಕಾಗಿ 2018ರ ಚುನಾವಣೆಯಲ್ಲಿ ಬೆಲೆತೆತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಮುಂದಿನ ಚುನಾವಣೆಯಲ್ಲಿ ಅದು ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರ ಜೊತೆ ನಾಲ್ಕು ದಶಕಗಳಿಂದಲೂ ಹೆಜ್ಜೆ ಹಾಕುತ್ತಾ, ಅವರ ಎಡ-ಬಲದಂತೆ ಗುರುತಿಸಿಕೊಂಡಿರುವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಕೆ.ವೆಂಕಟೇಶ್ ಮೌನಕ್ಕೆ ಶರಣಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.
ಸಚಿವ ಸ್ಥಾನ ವಂಚಿತರಾಗಿರುವ ಮತ್ತೊಬ್ಬ ಶಾಸಕ ತನ್ವೀರ್ ಸೇಠ್ ಮುನಿದು ನಿಂತರೆ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೊಡೆತ ಬೀಳುವುದು ಗ್ಯಾರಂಟಿಯಾಗಿದೆ. ಮೈಸೂರು ಭಾಗದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಸಿಡಿದೆದ್ದು, 2016ರ ಅಕ್ಟೋಬರ್ 16ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು.
ನಂತರ, ಈ ಸೇಡಿನ ಜ್ವಾಲೆಯನ್ನು 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯರನ್ನು ಸೋಲಿಸಲು ಪಾತ್ರವಹಿಸುವ ಮೂಲಕ ಶ್ರೀನಿವಾಸ ಪ್ರಸಾದ್, ತಮ್ಮ ಕೋಪ ತೀರಿಸಿಕೊಂಡಿದ್ದಲ್ಲದೆ, ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದರು. ನಂತರ ಮೈಸೂರು ಪ್ರಾಂತ್ಯ ಸೇರಿದಂತೆ ರಾಜ್ಯದ ಮಟ್ಟಿಗೆ ಸೈದ್ಧಾಂತಿಕ ದಲಿತ ರಾಜಕೀಯ ನಾಯಕತ್ವವನ್ನು ಹೊಂದಿದ್ದ ಡಾ.ಎಚ್.ಸಿ.ಮಹದೇವಪ್ಪ ದಲಿತ ನಾಯಕರಾಗಿ ಹೊರಹೊಮ್ಮಿದ್ದರು. ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೆ ದಲಿತ ಸಂಘಟನೆಗಳ ವಿಶ್ವಾಸಗಳಿಸುವ ಮೂಲಕ ಅಭಿಮಾನಿ ಪಡೆಯನ್ನೇ ಹೊಂದಿದ್ದರು. ಹಾಗಾಗಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯ ಎರಡನೇ ಅವಧಿಯಲ್ಲೂ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನವೇ ದೊರಕದೆ ಇರುವುದು ಅಚ್ಚರಿಯ ಜೊತೆಗೆ ದಲಿತ ನಾಯಕತ್ವದ ಮೇಲೂ ಪರಿಣಾಮ ಬೀರಿದೆ.
ಸಿದ್ದು ಬೆನ್ನಿಗೆ ನಿಂತ ಗಟ್ಟಿಗ..
ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲಾ ಸಿದ್ದರಾಮಯ್ಯರ ಪರ ಗಟ್ಟಿಯಾಗಿ ನಿಲ್ಲುತ್ತಿದ್ದ ಮಹದೇವಪ್ಪರಿಗೆ ಪಕ್ಷದಲ್ಲಿ ಆಂತರಿಕ ವಿರೋಧ ವ್ಯಕ್ತವಾಗಿದೆ. ಸಚಿವ ಸಂಪುಟದಲ್ಲಿ ಮಹದೇವಪ್ಪ ಇದ್ದರೆ ತಮ್ಮ ನಾಯಕತ್ವಕ್ಕೆ ಧಕ್ಕೆ ಬರಲಿದೆ ಎನ್ನುವ ದಲಿತ ಸಚಿವರ ಮುಂದಾಲೋಚನೆ. ಜೊತೆಗೆ ಒಳಮೀಸಲಾತಿ ಮೊದಲಾದ ದಲಿತರ ವಿಚಾರಗಳು ಎದುರಾದಾಗ ಸರ್ಕಾರ ತಟಸ್ಥವಾಗಿ ಉಳಿಯಲು ಸಾಧ್ಯವಾಗುವುದಿಲ್ಲ ಎಂಬಿತ್ಯಾದಿ ಅಂಶಗಳು ಎಚ್ಸಿಎಂ ಸಚಿವ ಸ್ಥಾನಕ್ಕೆ ಅಡ್ಡಿಯಾಗಿವೆ ಎಂದು ಮೂಲಗಳು ಹೇಳಿವೆ.
ಪುತ್ರನಿಗೆ ಅವಕಾಶ
ಸಚಿವ ಸಂಪುಟದಲ್ಲಿ ತಮ್ಮನ್ನು ಪರಿಗಣಿಸದೇ ಇರುವ ಬಗ್ಗೆ ಮೌನಕ್ಕೆ ಶರಣಾಗಿರುವ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ.ವೆಂಕಟೇಶ್, ಮುಂದಿನ ಚುನಾವಣೆಯಲ್ಲಿ ತಮ್ಮ ಬದಲಿಗೆ, ಪುತ್ರನಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಒಕ್ಕಲಿಗ ಸಮಾಜಕ್ಕೆ ಸೇರಿದ ವೆಂಕಟೇಶ್, ಸಿದ್ದರಾಮಯ್ಯ ಅವರ ಜತೆಯಾಗಿ ಬಂದವರು. ಸಿದ್ದರಾಮಯ್ಯರನ್ನು ಬೆಂಬಲಿಸಿ ಕಾಂಗ್ರೆಸ್ ಸೇರಿದರೂ ಕೂಡ ಡಿ.ಕೆ.ಶಿವಕುಮಾರ್ ಸೇರಿದಂತೆ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದರು. ವಿಶೇಷವಾಗಿ ತಮ್ಮ ಕ್ಯಾಂಪ್ನಲ್ಲಿರುವ ಒಕ್ಕಲಿಗ ಶಾಸಕರಿಗೆ ಮಣೆ ಹಾಕಿದ್ದರಿಂದಾಗಿ ವೆಂಕಟೇಶ್ ಯಾವುದೇ ಲಾಬಿ, ಒತ್ತಡ, ಮನವೊಲಿಕೆಯ ಕೆಲಸಕ್ಕೆ ಕೈ ಹಾಕದೇ ಇದ್ದಿದ್ದರಿಂದ ಯಾವುದೇ ಅಸಮಾಧಾನ ಕಾಣಿಸಿಕೊಳ್ಳಲು ದಾರಿಯಾಗಲಿಲ್ಲ.
ತನ್ವೀರ್ ಸೇಠ್ ಮುನಿದರೆ ಸಂಕಷ್ಟ?
ಸತತ ಆರು ಬಾರಿಯಿಂದ ಆಯ್ಕೆಯಾಗುತ್ತ ಬಂದಿರುವ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ಸೇಠ್ ಅವರ ಅಸಮಾಧಾನ ಮುಂದುವರಿದರೆ ಮುಂದಿನ ದಿನಗಳಲಿ ಕಾಂಗ್ರೆಸ್ಗೆ ಕಷ್ಟವಾಗಲಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳ ಪೈಕಿ ಏಕೈಕ ಮುಸ್ಲಿಂ ಶಾಸಕರಾಗಿರುವ ತನ್ವೀರ್ ಸೇಠ್ ಗೆ ಅಪಾರ ಕಾರ್ಯಕರ್ತರು, ಬೆಂಬಲಿಗರ ಬೆಂಬಲವಿದೆ. ನಗರದ ಮೂರು ಕ್ಷೇತ್ರಗಳ ಪೈಕಿ ಅತಿ ಹೆಚ್ಚು ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಂತಾಗಿದೆ. ಆದರೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಕುಪಿತಗೊಂಡಿರುವ ತನ್ವೀರ್ ಸೇಠ್ ಬೆಂಬಲಿಗರು ರಾಜೀನಾಮೆ ಕೊಡುವಂತೆ ಒತ್ತಡ ಹೇರುತ್ತಿದ್ದಾರೆ.
2023ರ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ತನ್ವೀರ್ ರನ್ನು ಮನವೊಲಿಸಿ ಕಣಕ್ಕಿಳಿಯುವಂತೆ ಹೈಕಮಾಂಡ್ ನೋಡಿಕೊಂಡಿತ್ತು. ಆದರೆ, ಈಗ ಸಚಿವ ಸ್ಥಾನ ಕೊಡದೆ ಇರುವುದರಿಂದ ಮುಂದೆಯೂ ಪರಿಗಣಿಸುವುದು ಅನುಮಾನವಾಗಿದೆ.
ಬೆಂಬಲಿಗರಲ್ಲಿ ನಿರಾಸೆಯ ಕಾರ್ಮೋಡ
ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಇಟ್ಟಿದ್ದ ಡಾ.ಎಚ್.ಸಿ.ಮಹದೇವಪ್ಪ ಬೆಂಬಲಿಗರಲ್ಲಿ ನಿರಾಶೆಯ ಕಾರ್ಮೋಡ ಉಂಟಾಗಿದೆ. ಎರಡು ತಿಂಗಳುಗಳಿಂದ ನಿರೀಕ್ಷೆ ಇಟ್ಟು ಕಾದಿದ್ದ ಮುಖಂಡರು ಈಗ ಮುಂದೇನೂ ಎನ್ನುವ ಚಿಂತೆಯಲ್ಲಿ ತೊಡಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಸುಮಾರು 500 ಕೋಟಿ ರೂ.ಗಳನ್ನು ಅಂಬೇಡ್ಕರ್ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರು ಮಾಡುವ ಜತೆಗೆ, ಪ್ರತಿಮೆ ನಿರ್ಮಾಣವಾಗುವಂತೆ ನೋಡಿಕೊಂಡಿದ್ದರು.
Key words: Dr. H.C Mahadevappa, Dalit leadership, Mysore, suffers blow







