ಮೈಸೂರು,ಆಗಸ್ಟ್,4,2026 (www.justkannada.in): ಅಷಾಢ ಮಾಸ ಇಂದು ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಚಿನ್ನದ ಪಲ್ಲಕ್ಕಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಮತ್ತು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಒಟ್ಟಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಸುತ್ತ ತಾಯಿಯ ಪಲ್ಲಕ್ಕಿ ಉತ್ಸವ ಪ್ರದಕ್ಷಿಣೆ ಹಾಕಲಿದ್ದು, ಪಲ್ಲಕ್ಕಿ ಉತ್ಸವಕ್ಕೆ ಕರ್ನಾಟಕ ಪೊಲೀಸರು ಪೊಲೀಸ್ ಬ್ಯಾಂಡ್ ನುಡಿಸಿ ಗೌರವ ಸಲ್ಲಿಕೆ ಮಾಡಿದರು. ಈ ವೇಳೆ ಭಕ್ತರು ಚಾಮುಂಡಿ ತಾಯಿಗೆ ಜೈ ಜೈ ಎಂದು ಘೋಷಣೆ ಕೂಗಿ ಪುನೀತರಾದರು. 
ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಂಸದ ಯದುವೀರ್ ಅವರು, ರಾಜ್ಯಕ್ಕೆ ಒಳ್ಳೆ ಮಳೆ ಬೆಳೆ ಬಂದು ಎಲ್ಲಾ ಕೆರೆ ಕಟ್ಟೆಗಳು ತುಂಬಲಿ ಎಂದು ಕೇಳಿಕೊಳ್ಳುತ್ತೇನೆ. ತಾಯಿಯ ದರ್ಶನ ಮಾಡಿದ್ದೇನೆ. ಆಷಾಢ ಮಾಸದ ರೇವತಿ ನಕ್ಷತ್ರದ ದಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟಿದ್ದು. ಅವರು ಹುಟ್ಟು ಹಬ್ಬದ ದಿನವೇ ತಾಯಿಯ ವರ್ಧಂತಿ ಅಚರಣೆ ಮಾಡುತ್ತಾ ಬಂದಿದ್ದೇವೆ. 1835 ರಿಂದಲೂ ಇದು ನಡೆದುಕೊಂಡು ಬರುತ್ತಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ. ನಾಡಿನ ಸಮಸ್ತ ಜನತಗೆ ತಾಯಿ ಚಾಮುಂಡಿ ಒಳ್ಳೆಯದ್ದು ಮಾಡಲಿ. ರಾಜ್ಯಕ್ಕೆ ಒಳ್ಳೆ ಮಳೆ ಬಂದು ಎಲ್ಲಾ ಕೆರೆ ಕಟ್ಟೆಗಳು ತುಂಬಲಿ ಎಂದು ತಾಯಿಯ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಪ್ರತಿವರ್ಷ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಂದು ದೇವರ ದರ್ಶನ ಪಡೆದು, ಬೆಟ್ಟದಲ್ಲಿ ಚಿನ್ನದ ರಥಕ್ಕೆ ಚಾಲನೆ ಕೊಡುವ ಸಂಪ್ರದಾಯವಿದೆ.
Key words: Chamundeshwari Vardhanti Mahotsav, Yaduveer, Pallakki utsava







