ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ- ಸಂಸದ ಯದುವೀರ್

ಮೈಸೂರು,ಜುಲೈ,7,2026 (www.justkannada.in): ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್, ಕೊಡಗು ಜಿಲ್ಲೆಯ ದಶಕಗಳ ಜ್ವಲಂತ ಸಮಸ್ಯೆಯಾದ ‘ಸಿ ಅಂಡ್ ಡಿ’ (ಅ & ಆ) ವರ್ಗದ ಜಮೀನುಗಳು, ಸಿಸಿ ((Cardamom Cultivation), ಪೈಸಾರಿ ಮತ್ತು ಜಮ್ಮಾ ಭೂಮಿಗಳ ಹಕ್ಕು ಹಸ್ತಾಂತರ ಹಾಗೂ ಸಕ್ರಮ ಪ್ರಕ್ರಿಯೆಯು ಪ್ರಸ್ತುತ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಈ ಕುರಿತು ರಾಜ್ಯ ಸರ್ಕಾರವು ತಕ್ಷಣವೇ ದಿಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ರೀತಿಯ ಸಹಕಾರ, ಅರಣ್ಯ ಕಾಯ್ದೆಗಳ ತಿದ್ದುಪಡಿ ಅಥವಾ ವಿಶೇಷ ಅನುಮೋದನೆಗಳ ಅಗತ್ಯವಿದ್ದಲ್ಲಿ, ತಾವು ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ಕೇಂದ್ರದಿಂದ ಸಂಪೂರ್ಣ ಸಹಕಾರ ಕೊಡಿಸಲು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Key words: government, land issues,  Kodagu district, MP Yaduveer