ಸಿಲಿಂಡರ್ ದರ ಏರಿಕೆ: ಇದು ಆಡಳಿತವಲ್ಲ, ಸಂಘಟಿತ ಲೂಟಿ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ​ 01,2026 (www.justkannada.in): ವಾಣಿಜ್ಯ ಬಳಕೆಯ ಸಿಲಿಂಡರ್ ದರ 993 ರೂ. ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ  ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಇದು ಆಡಳಿತವಲ್ಲ, ಇದು ಸಂಘಟಿತ ಲೂಟಿ. ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು ಮತ್ತು ನಂತರ ಅವರ ಮೇಲೆ ಹೊರೆ ಹಾಕುವುದು ಪ್ರಧಾನಿ ಮೋದಿ ಮಾದರಿ ಎಂದು ಕುಟುಕಿದ್ದಾರೆ.

ನಾವು ಮೊದಲೇ ಎಚ್ಚರಿಸಿದಂತೆ, ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪ್ರಧಾನಿ ಮೋದಿ ಸರ್ಕಾರವು ಮತ್ತೊಮ್ಮೆ ಬೆಲೆಯನ್ನು ಏರಿಕೆ ಮಾಡಿದೆ. ಚುನಾವಣೆಗಳ ಅವಧಿಯಲ್ಲಿ ದರ ಏರಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಸರ್ಕಾರ, ಮೇ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 993 ರೂ ರಷ್ಟು ಹೆಚ್ಚಿಸಿದೆ. ಕೇವಲ 4 ತಿಂಗಳಲ್ಲಿ, ಕೇಂದ್ರ ಸರ್ಕಾರವು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆರು ಬಾರಿ ಹೆಚ್ಚಿಸಿದೆ, ಇದರಿಂದ ಸಾಮಾನ್ಯ ಜನರ ಮೇಲೆ 1,518ರೂ ರಷ್ಟು ಹೆಚ್ಚುವರಿ ಹೊರೆ ಬಿದ್ದಿದೆ. ಜಾಗತಿಕವಾಗಿ ಸಮಸ್ಯೆ ಬಂದಾಗ ದೇಶದ ಜನರನ್ನ ರಕ್ಷಿಸುವ ಬದಲು, ಮೋದಿ ದೇಶದ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಸಿಎಂ ಹರಿಹಾಯ್ದಿದ್ದಾರೆ.

ಟೊಳ್ಳಾದ ವಿದೇಶಾಂಗ ನೀತಿ ನಮ್ಮ ಆರ್ಥಿಕತೆ ರಕ್ಷಿಸಲು ವಿಫಲವಾಗಿದೆ. ಈಗ ಸಾಮಾನ್ಯ ಭಾರತೀಯರು ಅದಕ್ಕೆ ಬೆಲೆಯನ್ನು ಪಾವತಿಸುತ್ತಿದ್ದಾರೆ. ಈ ಹೆಚ್ಚಳವು ಕೇವಲ ವ್ಯವಹಾರಗಳ ಮೇಲೆ ಪರಿಣಾಮ ಬೀರುವುದಿಲ್ಲ, ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು, ಸಣ್ಣ ತಿನಿಸುಗಳು ಹಾಗೂ ಅಡುಗೆ ಸೇವೆಗಳು ಬೆಲೆಗಳನ್ನು ಹೆಚ್ಚಿಸಲು ಒತ್ತಾಯಿಸಲ್ಪಡುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

Key words: Cylinder, price hike, CM, Siddaramaiah