ಮೈಸೂರು,ಏಪ್ರಿಲ್,2,2026 (www.justkannada.in): ಮೈಸೂರಿನ ಸಂಗೀತ ಪರಂಪರೆಗೆ ಹೊಸ ಮೆರುಗೆಂಬಂತೆ, ಇದೇ ಮೊದಲ ಬಾರಿಗೆ ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಗಾಯನದ ಮುದ್ರಣ ಮೈಸೂರು ಆಕಾಶವಾಣಿಯಲ್ಲಿ ನಡೆದಿದೆ.
ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ ಮಾಲಿಕೆಯ ಅಂಗವಾಗಿ ನಗರದ ಕೇರ್ಗಳ್ಳಿಯ ನಿವಾಸಿ ವಿದುಷಿ ದೇವಿ ಅವರು ಹಿಂದೂಸ್ತಾನಿ ಹಾಡುಗಾರಿಕೆ ಪ್ರಸ್ತುತ ಪಡಿಸಿದ್ದಾರೆ. ಇವರಿಗೆ ತಬಲಾದಲ್ಲಿ ಸುಮಿತ್ ನಾಯಕ್ ಹಾಗು ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಸಾಥ್ ನೀಡಿದ್ದಾರೆ. ಈ ಕಾರ್ಯಕ್ರಮ ಭಾನುವಾರ ಏಪ್ರಿಲ್ 5ರಂದು ರಾತ್ರಿ 10ಗಂಟೆಗೆ ರಾಷ್ಟ್ರಾದ್ಯಂತ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರವಾಗಲಿದೆ.
“ಇದು ಸಂಗೀತ ಕಲಾವಿದರಿಗೆ ದೊರೆಯುವ ಒಂದು ಅಮೂಲ್ಯ ಅವಕಾಶ,” ಎಂದು ವಿದುಷಿ ದೇವಿ ತಿಳಿಸಿದ್ದಾರೆ. ಇವರು ಪ್ರಸ್ತುತ ಮುಂಬೈನ ವಿದುಷಿ ಅಪೂರ್ವಾ ಗೋಖಲೆಯವರ ಬಳಿ ಸಂಗೀತಾಭ್ಯಾಸ ನಡೆಸುತ್ತಿದ್ದಾರೆ.
ದೇವಿ ಅವರು ಗ್ವಾಲಿಯರ್ ಘರಾನೆಗೆ ಸೇರಿದ ಖ್ಯಾತ ಹಿಂದುಸ್ತಾನಿ ಗಾಯಕಿ ಹಾಗೂ ಆಕಾಶವಾಣಿಯ ಎ-ಗ್ರೇಡ್ ಕಲಾವಿದೆ. ಅವರ ಸಂಗೀತಯಾನವು ದಿ. ಪಂಡಿತ್ ಚಂದ್ರಶೇಖರ ಪುರಾಣಿಕಮಠ, ಪಂಡಿತ್ ನಾರಾಯಣ ಪಂಡಿತ್, ವಿದುಷಿ ಪದ್ಮಾ ತಲವಾಲಕರ್, ಪಂ. ವ್ಯಾಸಮೂರ್ತಿ ಕಟ್ಟಿ, ಶ್ರೀ ರವಿಕಿರಣ ಮಣಿಪಾಲ್ ಅವರಂತಹ ಗಣ್ಯ ಗುರುಗಳ ಮಾರ್ಗದರ್ಶನದಲ್ಲಿ ನಡೆದಿದೆ. ಆ ಬಳಿಕ ಅವರು ವಿದುಷಿ ಅಪೂರ್ವ ಗೋಖಲೆ ಅವರ ಬಳಿ ಮಾರ್ಗದರ್ಶನ ಪಡೆಯಲು ಆರಂಭಿಸಿ, ತಮ್ಮ ಕಲೆಯನ್ನು ಇನ್ನಷ್ಟು ಪರಿಪಕ್ವಗೊಳಿಸುತ್ತಿದ್ದಾರೆ.
ಅವರು ಪ್ರತಿಷ್ಠಿತ ಸಿಸಿಆರ್ಟಿ (CCRT) ಜೂನಿಯರ್ ರಿಸರ್ಚ್ ಫೆಲೋಶಿಪ್ ಪಡೆದವರಾಗಿದ್ದು, ಕಿರಿಯ ವಯಸ್ಸಿನಲ್ಲಿಯೇ ಸಂಸ್ಕೃತಿ ಸಚಿವಾಲಯದ ಸಿಸಿಆರ್ಟಿ ವಿದ್ಯಾರ್ಥಿವೇತನಕ್ಕೂ ಭಾಜನರಾಗಿದ್ದಾರೆ. ಹಿಂದುಸ್ತಾನಿ ಗಾಯನದಲ್ಲಿ ಆಲ್ ಇಂಡಿಯಾ ರೇಡಿಯೋ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ನೇರವಾಗಿ ಗ್ರೇಡ್ ಪಡೆದಿದ್ದಾರೆ. ಸಂಗೀತ ಅಲಂಕಾರ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಶ್ರೇಷ್ಠ ಸ್ಥಾನಗಳನ್ನು ಪಡೆದಿದ್ದಾರೆ.
ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ದ್ವಿತೀಯ ರ್ಯಾಂಕ್ ನೊಂದಿಗೆ ಪಡೆದಿದ್ದು, ಹಿಂದುಸ್ತಾನಿ ಸಂಗೀತದಲ್ಲಿಯೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರ ಪ್ರಮುಖ ಕೊಡುಗೆಗಳಲ್ಲಿ ‘ನಾದಪಿಯ’ ಯೋಜನೆ ಪ್ರಮುಖವಾಗಿದ್ದು, ಇದರ ಮೂಲಕ ತಮ್ಮ ಗುರು ಪಂಡಿತ್ ನಾರಾಯಣ ಪಂಡಿತ್ ಅವರ 100 ಬಂದಿಷ್ಗಳನ್ನು ಸಂಗ್ರಹಿಸಿ, ಗಾಯನ ರೂಪದಲ್ಲಿ ಉಳಿಸಿದ್ದಾರೆ.
ಬಹುಮುಖ ಪ್ರತಿಭೆಯಾದ ಅವರು ಕಲಾವಿದೆ, ಲೇಖಕಿ, ಸಂಶೋಧಕಿ ಮತ್ತು ಗುರುಗಳಾಗಿ ಗುರುತಿಸಿಕೊಂಡಿದ್ದಾರೆ. ಲೇಖಕಿ ಮತ್ತು ಸಂಶೋಧಕಿಯಾಗಿ, ಹಲವು ಪ್ರಮುಖ ಪತ್ರಿಕೆಗಳು ಮತ್ತು ಜರ್ನಲ್ಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ.
Key words: Recording, Hindustani singing, Mysore Akashavani







