ಮೈಸೂರು, ಏಪ್ರಿಲ್ ,2,2026 (www.justkannada.in): ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ ಸವಿತಾ ಅವರು ಕರೆ ನೀಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಇಂದು ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಆಯೋಜಿಸಿದ್ದ ವಾರ್ಷಿಕ ಆಥ್ಲೆಟಿಕ್ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕುಲಸಚಿವೆ ಎಂ.ಕೆ ಸವಿತಾ, ಇಂದಿನ ದಿನಗಳಲ್ಲಿ ಕ್ರೀಡೆಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕ್ರೀಡೆಗಳು ನಮ್ಮ ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಸಹ ಶಾಂತವಾಗಿಡಲು ಸಹಾಯ ಮಾಡುತ್ತವೆ. ಕ್ರೀಡೆಗಳು ನಮ್ಮಲ್ಲಿ ಏನು ಕಲಿಸುತ್ತವೆ ಎಂದರೆ, ಏನೇ ಆದರೂ ಸೋಲನ್ನು ಒಪ್ಪಿಕೊಳ್ಳುವ ಮನೋಭಾವ, ಜೊತೆಯಲ್ಲಿ ಜಯವನ್ನು ಸಾಧಿಸಿದಾಗ ಅತಿಶಯೋಕ್ತಿಯಿಲ್ಲದೆ ಆನಂದಿಸುವುದು. ಕ್ರೀಡೆಗಳು ನಮ್ಮಲ್ಲಿ ತಂಡದ ಭಾವನೆ, ಸಹಕಾರ, ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಹಾಗಾಗಿ, ನಾವೆಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ, ನಮ್ಮ ಜೀವನವನ್ನು ಸುಂದರವಾಗಿಸೋಣ ಎಂದರು.
ವಿಶೇಷ ಆಹ್ವಾನಿತರಾಗಿ ಕ್ರೀಡಾಕೂಟಕ್ಕೆ ಆಗಮಿಸಿ ಮಾತನಾಡಿದ ನಿವೃತ್ತ ಅಥ್ಲೇಟಿಕ್ ತರಬೇತಿದಾರರಾದ ಪ್ರಭಾಕರ್ ಜಿ.ಆರ್, ಪ್ರತಿಯೊಬ್ಬರಿಗೂ ಯಾವುದೇ ಇಲಾಖೆಯಲ್ಲೂ ಜವಾಬ್ದಾಯಾಗಿ ಕರ್ತವ್ಯವನ್ನು ನಿರ್ವಹಿಸಲು ದೈಹಿಕ ಸಾಮರ್ಥ್ಯ ಮುಖ್ಯ. ಹಾಗಾಗಿ ದಿನಕ್ಕೆ 1/2 ಗಂಟೆಯಾದರೂ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ಅಬ್ದುಲ್ ರಹಿಮಾನ್ ಎಂ, ಕ್ರೀಡೆಯಲ್ಲಿ ಎಲ್ಲರು ಹೆಚ್ಚಾಗಿ ಭಾಗವಹಿಸಬೇಕೆಂದು ತಿಳಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರತಿಮಾ ಕೆ.ಆರ್ ಅವರು ವೇದಿಕೆಯ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮಕ್ಕೆ ಡಾ. ನಂದಕುಮಾರ್.ವಿ. ಐ.ಕ್ಯೂ.ಎ.ಸಿ ಸಂಚಾಲಕರು ಹಾಗೂ ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್ ಹಾಗೂ ಕಾಲೇಜಿನ ಎಲ್ಲ ಅಧ್ಯಾಪಕರು, ಅಧ್ಯಾಪಕೇತರ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಚಂದ್ರಕಲಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರಾಧ್ಯಾಪಕ ಡಾ. ರವಿಶಂಕರ್ ಡಿ. ಕೆ. ವಂದಿಸಿದರು.
Key words: Students, develop, sportsmanship spirit, Registrar, M.K. Savita







