ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆ, ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಶಾಸಕರ ಆಗ್ರಹ..

ಮೈಸೂರು,ಫೆಬ್ರವರಿ,7,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆಗೆ ಮತ್ತು  ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗೆ  ಶಾಸಕರು ಆಗ್ರಹಿಸಿದ್ದಾರೆ.

ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಶ್ರೀವತ್ಸ ಆಗ್ರಹ, ಟೂರಿಸ್ಟ್ ಫ್ರೆಂಡ್ಲಿ, ಪೀಪಲ್ ಫ್ರೆಂಡ್ಲಿ ಎನ್ನುವಂತಹ ವಾತಾವರಣ ನಿರ್ಮಿಸಬೇಕು. ಶುಕ್ರವಾರ, ಶನಿವಾರ, ಭಾನುವಾರ ಮೈಸೂರಿನ ಹೃದಯ ಭಾಗದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದೆ. ಪರಿಣಾಮ ದೂರದ ಊರುಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಟ್ರಾಫಿಕ್ ನಲ್ಲಿ ಸಿಲುಕಿ‌‌ ಪರದಾಡುತ್ತಿದ್ದಾರೆ. ಹಾಗಾಗಿ ಮೈಸೂರಿನ ಹೃದಯ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಬಿ ಫಾರ್ಮ್ ಕೊಟ್ಟಿದ್ದು ಪರಮೇಶ್ವರ್ ಅವರು.ಅವರು ಬಿ ಫಾರ್ಮ್ ಕೊಟ್ಟ ಕಾರಣ ನಾನು 29 ವರ್ಷಕ್ಕೇ ಶಾಸಕನಾಗಲು ಸಾಧ್ಯವಾಯಿತು. ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ. ಗೃಹ ಸಚಿವ ಪರಮೇಶ್ವರ್ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಇತ್ತೀಚಿಗೆ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಅದರಲ್ಲೂ ಇಂಜಿನಿಯರಿಂಗ್, ಮೆಡಿಕಲ್, ಬಿಎ., ಬಿಕಾಂ., ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಸಮಾರಂಭದಲ್ಲಿ ಎಂಎಲ್ ಸಿ.  ಸಿ ಎನ್ ಮಂಜೇಗೌಡ ಮಾತನಾಡಿ, ಪೊಲೀಸರ ವಸತಿ ಗೃಹಗಳ ನವೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರು ಹಗಲಿರುಳೆನ್ನದೇ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ.. ಪೊಲೀಸರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕಾರಣಿ ಬೆಳೆಯ ಬೇಕಾದರೆ ಪೊಲೀಸರ ನೆರವು ಅಗತ್ಯ. ಹಾಗಾಗಿ ರಾಜಕಾರಣಿ ಬೆಳೆದ ನಂತರ ಪೊಲೀಸರಿಗೆ ನೆರವು ನೀಡಬೇಕು ಎಂದರು.

Key words: MLAs, stop, drug, solve, traffic jam, problem, Mysore.