Sunday, August 9, 2026

BDA Apartments

Home Front Page ಬಸ್ರೂರು ಅಪ್ಪಣ್ಣ ಹೆಗ್ಡೆ ಮತ್ತು ಕೆ.ವಿ.ಶ್ರೀನಿವಾಸನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬಸ್ರೂರು ಅಪ್ಪಣ್ಣ ಹೆಗ್ಡೆ ಮತ್ತು ಕೆ.ವಿ.ಶ್ರೀನಿವಾಸನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು,ಫೆಬ್ರವರಿ,7,2026 (www.justkannada.in): ಮಾಜಿ ಶಾಸಕ ಮತ್ತು ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ ಮತ್ತು ನಾಡಿನ ಹಿರಿಯ ಪತ್ರಕರ್ತ ಕೆ.ವಿ.ಶ್ರೀನಿವಾಸನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕ ಮತ್ತು ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಸ್ನೇಹಿತರಾಗಿದ್ದ ಹೆಗ್ಡೆ ಅವರು ಮತ್ತು ನಾನು 1983ರಲ್ಲಿ ವಿಧಾನಸಭೆಯಲ್ಲಿ ಸದಸ್ಯರಾಗಿದ್ದೆವು. ರಾಜಕೀಯ ಕ‍್ಷೇತ್ರವನ್ನು ಸಮಾಜದ ಸೇವೆ ಮಾಡಲು ಒದಗಿ ಬಂದ ಅವಕಾಶ ಎಂದು ಬಗೆದಿದ್ದ ಅಪ್ಪಣ್ಣ ಹೆಗ್ಡೆ ಅವರು ಸರಳ, ಸಜ್ಜನಿಕೆಯ ಮನುಷ್ಯ. ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾದಳವನ್ನು ಕಟ್ಟಿ ಬೆಳೆಸಿದವರು.

ಅವರ ನಿರ್ಗಮನದಿಂದ ಹಳೆಯ ತಲೆಮಾರಿನ ಮತ್ತೊಬ್ಬ ರಾಜಕಾರಣಿ ನಮ್ಮಿಂದ ದೂರವಾದಂತೆ ಆಗಿದೆ. ಅವರ ಬದುಕು ಮತ್ತು ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದಿದ್ದಾರೆ.

ಕೆ.ವಿ.ಶ್ರೀನಿವಾಸನ್ ನಿಧನಕ್ಕೆ ಸಂತಾಪ

ಹಾಗೆಯೇ  ಕೆ.ವಿ.ಶ್ರೀನಿವಾಸನ್ ಅವರ ನಿಧನಕ್ಕೆ ಸಂತಾಪ  ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ನಾಡಿನ ಹಿರಿಯ ಪತ್ರಕರ್ತ, ಪತ್ರಿಕಾ ವಲಯದಲ್ಲಿ ‘ಬ್ರದರ್’ ಎಂದೇ ಕರೆಯಲ್ಪಡುತ್ತಿದ್ದ ಗಾಂಧಿವಾದಿ ಹೋರಾಟಗಾರರೂ ಆದ ಕೆ.ವಿ.ಶ್ರೀನಿವಾಸನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ.

ಹುಣಸೂರು ಸಮೀಪದ ಕಲ್ಕುಣಿಕೆ ಗ್ರಾಮದವರಾದ ಶ್ರೀನಿವಾಸನ್ ಸರಳ ನಡೆ, ನುಡಿ, ಪ್ರಾಮಾಣಿಕತೆ ಮತ್ತು ವೃತ್ತಿ ಬದ್ಧತೆಯಿಂದ ಜನಾನುರಾಗಿಯಾಗಿದ್ದರು. ಸುದೀರ್ಘಕಾಲ ಮಾಧ್ಯಮರಂಗದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ವಿಶ್ರಾಂತ ಜೀವನ ನಡೆಸುತ್ತಿದ್ದರು. ಹಲವಾರು ಪತ್ರಕರ್ತರನ್ನು ರೂಪಿಸಿದ ಹಿರಿಮೆ ಅವರದ್ದಾಗಿತ್ತು.

ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಅನಾಥಾಲಯದಲ್ಲಿ ನಾಲ್ಕು ದಶಕಗಳ ಕಾಲ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಾ, ವೃತ್ತಿಜೀವನ ಸಾಗಿಸಿದ್ದು ಅವರ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹಿಡಿದ ಕನ್ನಡಿ.  ಆತ್ಮೀಯರಾಗಿದ್ದ ಶ್ರೀನಿವಾಸನ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

Key words: CM Siddaramaiah, condoles , death, Basrur Appanna Hegde, K.V. Shrinivasan