ಮೈಸೂರು,ಜನವರಿ,29,2026 (www.justkannada.in): ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್ ತಯಾರಿಕಾ ಫ್ಯಾಕ್ಟರಿ ಪತ್ತೆಯಾಗಿರುವ ಹಿನ್ನೆಲೆ, ರಾಜ್ಯದ ಗುಪ್ತಚರ ಇಲಾಖೆ ಹಾಗೂ ಗೃಹ ಇಲಾಖೆಯ ವೈಫಲ್ಯವೆಂದು ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್ ತಯಾರಿಕಾ ಫ್ಯಾಕ್ಟರಿಯನ್ನು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ದೆಹಲಿಯ ಎನ್ ಸಿಬಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದಾರೆ. ಮಹಾರಾಷ್ಟ್ರ ಪೊಲೀಸರ ಬಳಿಕ ಈಗ ದೆಹಲಿ “ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ” ತಂಡವು, ಮೈಸೂರು ನಗರ ಪೊಲೀಸರಿಗೆ ಸಣ್ಣ ಸುಳಿವು ನೀಡದೆ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದೆ.
ದೇಶವೆ ಬೆಚ್ಚಿ ಬೀಳವಂತಹ “ಡ್ರಗ್ಸ್ ಫ್ಯಾಕ್ಟರಿ”ಗಳು ಸಾಂಸ್ಕೃತಿಕ ನಗರಿಯಲ್ಲಿ ಅದರಲ್ಲೂ, ಸಿಎಂ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ತಲೆ ಎತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚುವಲ್ಲಿ ರಾಜ್ಯದ ಪೊಲೀಸರು ಮತ್ತೆ ಎಡವಿರುವುದು ರಾಜ್ಯದ ಗುಪ್ತಚರ ಇಲಾಖೆ ಹಾಗೂ ಗೃಹ ಇಲಾಖೆಯ ವೈಫಲ್ಯವನ್ನು ಎದ್ದು ತೋರಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಇಷ್ಟೆಲ್ಲ ಮಾದಕ ವಸ್ತು ತಯಾರಿಕಾ ಘಟಕಗಳು ರಾಜ್ಯಾದ್ಯಂತ ಹರಡಿಕೊಂಡಿದ್ದರೂ, “ಅದರ ಬಗ್ಗೆ ಮಾಹಿತಿ ಇಲ್ಲ” , “ನನಗೇನು ಗೊತ್ತಿಲ್ಲ ” ಎನ್ನುವ ಪರಮೇಶ್ವರ್ ಅವರನ್ನು ಗೃಹ ಸಚಿವರನ್ನಾಗಿ ಪಡೆದಿರುವುದು ಕನ್ನಡಿಗರ ದುರ್ದೈವ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
Key words: Another, drug factory, Mysore, JDS, outrage, government







