ಮಂಡ್ಯ,ಡಿಸೆಂಬರ್,6,2025 (www.justkannada.in): ಸುಮಾರು ಹದಿನೈದು ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿನ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಸಂಸದರ ವೇತನವನ್ನೇ ನೀಡಿದ್ದಾರೆ.
ಈ ಮೊದಲು ನೀಡಿದ್ದ ಭರವಸೆಯಂತೆ ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ, ಇಂದು 19,94,200 ಮೊತ್ತದ ಚೆಕ್ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಸಚಿವರಿಗೆ ಧನ್ಯವಾದ ಹೇಳಿದರು. ಇದಕ್ಕೆ ಸ್ಪಂದಿಸಿದ ಹೆಚ್ ಡಿ ಕುಮಾರಸ್ವಾಮಿ, ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟ. ನಿಮ್ಮ ನೋವು ನನಗೆ ಅರ್ಥವಾಗಿದೆ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಇದು ಐತಿಹಾಸಿಕ ಶಾಲೆ. ಮಂಡ್ಯದ ಇತಿಹಾಸದಲ್ಲಿ ಈ ಶಾಲೆಗೂ ಒಂದು ಸ್ಥಾನವಿದೆ. ಹೀಗಾಗಿ ಶಾಲೆ ಸಂಕಷ್ಟಕ್ಕೆ ಸಿಲುಕುವುದು ನನಗೆ ಇಷ್ಟವಿಲ್ಲ. ಈ ಶಾಲೆಯನ್ನು ಉಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಪಿಯುಸಿವರೆಗೆ ಈ ಶಾಲೆಯಲ್ಲಿ ಶಿಕ್ಷಣ ದೊರೆಯಲಿ. ನಾನು ಕೂಡ ಶಾಲೆಯ ಉಳಿವಿಗೆ ಕೈ ಜೋಡಿಸುತ್ತೇನೆ. ಆದಿಚುಂಚನಗಿರಿ ಶ್ರೀಗಳೊಂದಿಗೂ ಈ ಬಗ್ಗೆ ಮಾತಾಡಿದ್ದೇನೆ. ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ನಾನು ಹೇಳಲ್ಲ. ಹಂತ ಹಂತವಾಗಿ ಶಾಲೆಯ ಅಭಿವೃದ್ಧಿ ಮಾಡೋಣ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಕೇಳುತ್ತೇನೆ. ಮಂಡ್ಯದಲ್ಲಿ ಮೈಶುಗರ್ ಶಾಲೆಯೇ ನಂಬರ್ ಓನ್ ಶಾಲೆ ಆಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಹೇಳಿದರು.
ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ. 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಎಂದರೆ ಸುಲಭವಲ್ಲ. ಆ ಸಂಕಷ್ಟದ ಕಾಲದಲ್ಲಿಯೂ ಅವರು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಹೀಗಾಗಿ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಹೇಳುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ. ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ. ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂದು ಮನವಿ ಮಾಡಿದ್ದಾರೆ. ಮೈಶುಗರ್ ಶಾಲೆಯಲ್ಲಿ ಎಲ್ ಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ ನೀಡಲು ಹೇಳಿದ್ದೇನೆ. ಈ ಬಗ್ಗೆ ಚುಂಚನಗಿರಿ ಶ್ರೀಗಳ ಬಳಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸತ್ ಕಲಾಪ ಮುಗಿದ ಬಳಿಕ ಶ್ರೀಗಳ ಮಾರ್ಗದರ್ಶನದಲ್ಲಿ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರಿಗೂ ಈ ಬಗ್ಗೆ ಹೇಳುತ್ತೇನೆ. ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಮೈಶುಗರ್ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರತಿಪಾದಿಸಿದರು.
ರಾಜ್ಯ ಸರ್ಕಾರದ ಬಗ್ಗೆ ನಾನು ಚರ್ಚೆ ಮಾಡಲ್ಲ:
ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ. ನೆರೆ ರಾಜ್ಯದ ರಾಜ್ಯಪಾಲರು ಕಾರ್ಕಳಕ್ಕೆ ಬಂದಿದ್ದರು. ಆಗ ವಕೀಲ ಹೆಣ್ಣುಮಕ್ಕಳ ಶೌಚಾಲಯ ಕಟ್ಟಲು ಒಂದು ಕೋಟಿ ಕೇಳಿದ್ದೆ. ರಾಜ್ಯ ಸರ್ಕಾರ ಒಂದು ವರ್ಷದಿಂದ ಹಣವನ್ನು ಕೊಟ್ಟಿಲ್ಲ. ನಿಮ್ಮ ಕಾಲದಲ್ಲಿ ಕೇಳಿದಾಗ ಎಲ್ಲಾ ಕೊಟ್ಟಿದ್ದೀರಾ ಎಂದರು. ಇಂದು ಹಾಸನದಲ್ಲಿ ದೊಡ್ಡ ಜಾಹಿರಾತು ಕೊಟ್ಟಿದ್ದಾರೆ. ನಮ್ಮ ಕಾಲದಲ್ಲಿ ಬಿಡುಗಡೆಯಾದ ಹಣದ ಕಾಮಗಾರಿಗೆ ಟೇಪ್ ಕಟ್ ಮಾಡಲು ಹೋಗಿದ್ದಾರೆ. ಈ ಸರ್ಕಾರದ ಮೇಲೆ ಟೀಕೆ ಮಾಡಲು ಸರ್ಕಾರ ಜನರ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ಮೇಲೆ ಕೇವಲ ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಅದು ಬೇಕಿಲ್ಲ. ನಮ್ಮನ್ನು ಪ್ರಧಾನಮಂತ್ರಿಗಳ ಮುಂದೆ ನಿಲ್ಲಬೇಕು ಅಂತಾರೆ. ಮೊದಲು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಎಂಎಸ್ಪಿ ಬೆಲೆ ನಿಗದಿ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ರಾಜ್ಯ ಸರಕಾರ ಬಗೆಹರಿಸಿಕೊಳ್ಳಲಿ. ಮೊದಲು ನೀವು ಖರೀದಿ ಕೇಂದ್ರ ತೆರೆಯಿರಿ. ಆ ಬಳಿಕ ಕೇಂದ್ರವನ್ನು ಕೇಳಿ. ಎಂಎಸ್ ಪಿ ಬೆಲೆಯನ್ನು ಕಾರ್ಯರೂಪಕ್ಕೆ ತರುವುದು ರಾಜ್ಯದ ಕರ್ತವ್ಯ. ಇವರು ಕೇಂದ್ರ ಸರ್ಕಾರ ಅನುದಾನ ಪಡೆಯಲು ಕೋರ್ಟ್ಗೆ ಹೋಗಬೇಕು ಅಂತಾರೆ. ನಾನು ಸಿಎಂ ಆಗಿದ್ದಾಗ ಕೋರ್ಟ್ಗೆ ಹೋಗಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 4.5 ಸಾವಿರ ಕೋಟಿ ಸಾಲವನ್ನು ನಾನು ತೀರಿಸಿದ್ದೇನೆ. ನನ್ನ ಕಾಲದ ಸಾಲವನ್ನು ಇವರೇನು ತೀರಿಸಿಲ್ಲ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.
ವಾಚ್ ಹೇಗೆ ಖರೀದಿ ಮಾಡಿದ್ದಾರೆ ಎನ್ನೋದೇ ಮುಖ್ಯ:
ಸಿಎಂ, ಡಿಸಿಎಂ ಅವರಿಬ್ಬರೂ ಎಷ್ಟು ಲಕ್ಷ ಬೆಲೆ ವಾಚ್ ಕಟ್ಟಿದ್ದಾರೆ ಎನ್ನೋದು ಮುಖ್ಯವಲ್ಲ. ವಾಚ್ನ್ನು ಹೇಗೆ ಖರೀದಿ ಮಾಡಿದ್ದಾರೆ ಎನ್ನೋದೇ ಮುಖ್ಯ. ಅವರ ದುಡಿಮೆ ದುಡ್ಡಿನಲ್ಲಿ ಖರೀದಿ ಮಾಡಿದ್ದಾರಾ ಹೇಗೆ ಎನ್ನೋದು ಮುಖ್ಯ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಹೆಚ್ ಡಿಕೆ ಉತ್ತರಿಸಿದರು.
ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ:
ಸರಕಾರಿ ಇಲಾಖೆಗಳಲ್ಲಿ 63% ಭ್ರಷ್ಟಾಚಾರ ಆರೋಪ ಮಾಡಿರುವ ಉಪ ಲೋಕಾಯುಕ್ತರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಹೆಚ್ ಡಿಕೆ, ಉಪ ಲೋಕಾಯುಕ್ತರಿಗೆ ಒಂದ್ ನಮಸ್ಕಾರ. ಉಪ ಲೋಕಾಯುಕ್ತರಾಗಿ ಅವರು ಏನ್ ಕೆಲಸ ಮಾಡ್ತಿದ್ದಾರೆ? ಅವರ ಜವಾಬ್ದಾರಿ ಏನು? ಮಾಧ್ಯಮ ಮುಂದೆ ಹೇಳಿಕೆ ನೀಡಲಷ್ಟೇ ಅವರಿಗೆ ಅಧಿಕಾರ ನೀಡಲಾಗಿದೆಯಾ? ಇಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಲಿಕ್ಕೆ ಅಧಿಕಾರ ನೀಡಲಾಗಿದೆಯಾ? ಯಾರ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಅನ್ನೋದು ಬೇರೆ ಚರ್ಚೆ. ಭ್ರಷ್ಟಾಚಾರ ಗೊತ್ತಿದ್ದೂ ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ. ಹೀಗಾದರೆ ಪ್ರಯೋಜನವೇನು? ಎಂದು ಅಭಿಪ್ರಾಯಪಟ್ಟರು.
2019ರ ಭ್ರಷ್ಟಾಚಾರ ಬಗ್ಗೆ ಉಪ ಲೋಕಾಯುಕ್ತರು ಮಾತಾನಾಡಿದ್ದಾರೆಂದು ಸಿಎಂ ಟ್ವಿಟ್ ಮಾಡಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಈ ಮೂರು ವರ್ಷದ ಆಡಳಿತ ಎಷ್ಟು ಪರಿಶುದ್ಧ, ಪಾರದರ್ಶಕವಾಗಿದೆ ಎಂಬ ಬಗ್ಗೆ ವರದಿ ಮಾಡಿಸಲಿ ಎಂದು ಒತ್ತಾಯಿಸಿದರು.
Key words: Teachers, Salary, Union Minister, HDK







