ಮೈಸೂರು, ಅಕ್ಟೋಬರ್, 21,2025 (www.justkannada.in): ದೀಪಾವಳಿ ಅಮಾವಾಸ್ಯೆ ಸಂದರ್ಭದಲ್ಲಿ ಐತಿಹಾಸಿಕ ಪಿರಿಯಾಪಟ್ಟಣ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ದೇವರ ದರ್ಶನ ಪಡೆದಿದ್ದು ಧನ್ಯತಾ ಭಾವ ಮೂಡಿಸಿತು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಯದುವೀರ್ ಒಡೆಯರ್ ಸಮಸ್ತ ಭಕ್ತಾದಿಗಳೊಡನೆ ಪಾದಯಾತ್ರೆ ಮೂಲಕ ಹತ್ತಿ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಭಕ್ತಿಯಿಂದ ಪ್ರಾರ್ಥಿಸಿದರು.
ವಿಶೇಷ ಅನುಭೂತಿ
ನಂತರ ಮಾಹಿತಿ ನೀಡಿದ ಸಂಸದರು, ನಮ್ಮ ಕ್ಷೇತ್ರದ ಸಾವಿರಾರು ಭಕ್ತರೊಂದಿಗೆ ಪಾದಯಾತ್ರೆ ಕೈಗೊಂಡು, ದರ್ಶನ ಪಡೆದಿದ್ದು ವಿಶೇಷ ಅನುಭೂತಿ ದೊರೆಯಿತು ಎಂದರು.
ನಾಡು ಸುಭಿಕ್ಷವಾಗಲಿ
ಬೆಳಕಿನ ಹಬ್ಬ ದೀಪಾವಳಿ ನಾಡಿನ ಪ್ರತಿಯೊಬ್ಬರಿಗೂ ಸುಖ, ಶಾಂತಿ, ಸಮೃದ್ಧಿ ತರಲಿ. ನಾಡು ಸದಾ ಸುಭಿಕ್ಷವಾಗಿರಲಿ ಎಂದು ಸಂಸದರು ಇದೇ ಸಂದರ್ಭದಲ್ಲಿ ಶುಭ ಕೋರಿದರು.
ಬೆಟ್ಟ ಅಭಿವೃದ್ಧಿ ಪಡಿಸಲು ಸಂಕಲ್ಪ
ಸಾವಿರಾರು ಭಕ್ತರು ಈ ಐತಿಹಾಸಿಕ ಬೆಟ್ಟದೊಂದಿಗೆ ಧಾರ್ಮಿಕ ಭಾವನೆ ಬೆಸೆದುಕೊಂಡಿದ್ದಾರೆ. ಈ ಬೆಟ್ಟವನ್ನು ಅಭಿವೃದ್ಧಿಪಡಿಸಲು ಇದೇ ಸಂದರ್ಭದಲ್ಲಿ ಸಂಕಲ್ಪ ತೊಡುತ್ತೇನೆ ಎಂದು ಯದುವೀರ್ ಭರವಸೆ ನೀಡಿದರು.
ರಾಜ್ಯ ಸರ್ಕಾರವು ಈ ಬೆಟ್ಟವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದರಿಂದ ಭಕ್ತರು ಬೇಸರಗೊಂಡಿದ್ದಾರೆ. ಪಾದಯಾತ್ರೆ ವೇಳೆ ಕೆಲವು ಭಕ್ತರು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಸಿದರು.
ರಾಜ್ಯ ಸರ್ಕಾರ ಮಾಡಿರುವ ಪ್ರಮಾದವನ್ನು ಸರಿಪಡಿಸಲಾಗುವುದು. ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಅಭಿವೃದ್ದಿ ಪಡಿಸಲು ಬದ್ಧನಾಗಿದ್ದೇನೆ ಎಂದು ಸಂಸದರಾದ ಯದುವೀರ್ ಒಡೆಯರ್ ಭರವಸೆ ನೀಡಿದ್ದಾರೆ.
Key words: Devotees, Mysore, MP, Yaduveer, Shidlu Mallikarjuna