ದೀಪಾವಳಿ ಸಂಭ್ರಮದ ನಡುವೆ ಎಚ್ಚರಿಕೆಯೂ ಇರಲಿ: ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ- ಕೆ.ಎಂ. ಮುನಿಗೋಪಾಲ್‌ ರಾಜು

ಮೈಸೂರು, ಅಕ್ಟೋಬರ್‌ ,19, 2025 (www.justkannada.in): ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಮನವಿ ಮಾಡಿದೆ.

ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನೇಕರು ತಮ್ಮ ಮನೆ ಹಾಗೂ ಅಂಗಡಿಗಳಿಗೆ ವಿದ್ಯುತ್‌ ದೀಪಗಳಿಂದ ಅಲಂಕೃತಗೊಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೀರಿಯಲ್ ಲೈಟ್‌ ಗಳನ್ನು ಮತ್ತು ವಿದ್ಯುತ್ ತಂತಿಗಳನ್ನು ನೀರಿನಿಂದ ದೂರವಿರಿಸಬೇಕು. ಪ್ಲಗ್ ಪಾಯಿಂಟ್‌ ಗಳಲ್ಲಿ ಅತಿಯಾದ ಲೋಡ್‌ ಹಾಕಬೇಡಿ, ಇದು ಶಾರ್ಟ್ ಸರ್ಕ್ಯೂಟ್‌ ಉಂಟಾಗುವ ಸಾಧ್ಯತೆ ಇರಲಿದೆ. ಹಣತೆ, ದೀಪಗಳನ್ನು ಕೇಬಲ್‌ ಗಳು, ವಿದ್ಯುತ್‌ ತಂತಿಗಳು ಹಾಗೂ ಪ್ಲಗ್‌ ಗಳಿಂದ ದೂರವಿರಿಸಿ.

ಮುಖ್ಯವಾಗಿ ಪಟಾಕಿ ಹಚ್ಚುವ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳು ಅಥವಾ ಟ್ರಾನ್ಸ್‌ ಫಾರ್ಮರ್‌ ಗಳು ಇರುವ ಸ್ಥಳಗಳ ಬಗ್ಗೆ ನಿಗಾವಹಿಸಿ ಮತ್ತು ಇಂತಹ ಸ್ಥಳಗಳಲ್ಲಿ ಪಟಾಕಿ ಹಚ್ಚುವುದನ್ನು ತಪ್ಪಿಸಿ. ವಿದ್ಯುತ್ ಉಪಕರಣಗಳಿಂದ ಮಕ್ಕಳನ್ನು ದೂರವಿರಿಸಿ ಹಾಗೂ ಹಿರಿಯ ಸಮ್ಮುಖದಲ್ಲಿ ಪಟಾಕಿ ಹಚ್ಚುವ ಹಾಗೂ ದೀಪಗಳನ್ನು ಇರಿಸುವಂತೆ ಗಮನವಹಿಸಿ. ವಿದ್ಯುತ್‌ ಸಮಸ್ಯೆಗಳು  ಅಥವಾ ಅವಘಡಗಳು ಸಂಭವಿಸಿದಲ್ಲಿ ಗ್ರಾಹಕ ಸಹಾಯವಾಣಿ 1912ಗೆ ಮಾಹಿತಿ ನೀಡಬೇಕಿದೆ. ಸೆಸ್ಕ್‌ ವತಿಯಿಂದ ನೀಡಿರುವ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸುವಂತೆ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Key words: Deepavali, celebrations, electrical, safety , CESC, K.M. Munigopal Raju