Tuesday, August 18, 2026

BDA Apartments

Home Front Page ಮೈಸೂರಲ್ಲಿ ಹೊರನಾಡ ಕನ್ನಡಿಗರ ಕಲರವ: ಕಣ್ಮನ ಸೆಳೆದ ನೃತ್ಯ ರೂಪಕ, ನಾಟಕ, ಕನ್ನಡಿಗರ ಗೀತೆ

ಮೈಸೂರಲ್ಲಿ ಹೊರನಾಡ ಕನ್ನಡಿಗರ ಕಲರವ: ಕಣ್ಮನ ಸೆಳೆದ ನೃತ್ಯ ರೂಪಕ, ನಾಟಕ, ಕನ್ನಡಿಗರ ಗೀತೆ

ಮೈಸೂರು,ಸೆಪ್ಟಂಬರ್,29,2025 (www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ 2025 ಪ್ರಯುಕ್ತ ಕರ್ನಾಟಕ ಸಂಸ್ಕೃತಿ ಸೊಬಗನ್ನು ಪ್ರತಿಬಿಂಬಿಸುವ ನೃತ್ಯ, ನೃತ್ಯ ರೂಪಕ ಹಾಗೂ ಕನ್ನಡಿಗರ ಗೀತೆಯ ಬಿಡುಗಡೆಯನ್ನು ವಿಶೇಷವಾಗಿ ತಮಿಳುನಾಡಿನ ವಿವಿಧ ಕನ್ನಡಿಗರ ಸಂಘ ಒಗ್ಗೂಡಿ ಹೊರನಾಡ ಕನ್ನಡಿಗರು ಶೀರ್ಷಿಕೆಯಡಿ ಇದೇ ಪ್ರಥಮ ಬಾರಿಗೆ ಮೈಸೂರಿನ ಕಲಾಮಂದಿರದಲ್ಲಿ ಸೆಪ್ಟೆಂಬರ್ 24 ರಂದು ಪ್ರಸ್ತುತಪಡಿಸಿದರು.

ನವದುರ್ಗೆಯರ ಸ್ತುತಿ ನೃತ್ಯ, ಚಾಮುಂಡಿ ಹರಸಿದ ಮಹಾನುಭಾವರ ನೃತ್ಯ ರೂಪಕ ಸೇರಿದಂತೆ ಹೊರನಾಡ ಕನ್ನಡಿಗರ ಗೀತೆಯಲ್ಲಿ ಸುಮರು 45 ಮಂದಿ ಗೃಹಿಣಿಯರು ಪಾಲ್ಗೊಂಡು ಸಂಜೆಯ ಕಲಾ ಸೌರಭದೊಂದಿಗೆ ಅತ್ಯಾಕರ್ಷಣೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ತಂದಿದ್ದು ವಿಶೇಷವಾಗಿತ್ತು.

ನೃತ್ಯ ರೂಪಕ ವೈಭವ : ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಪೊಲೀಸ್, ಶಿಕ್ಷಕಿ, ನ್ಯಾಯಾಲಯ, ರಾಜಕೀಯ, ಕೃಷಿ ವಲಯ  ಸೇರಿದಂತೆ ವಿವಿಧ ರಂಗದಲ್ಲಿ ತನ್ನ ಜೀವನದಲ್ಲಿ ಹೇಗೆ ಮಹಿಳೆಯರು ದೇವಿಯಾಗಿ ರಕ್ಷಣೆ ಮಾಡುತ್ತಾರೆ ಮತ್ತು ಪ್ರತಿ ಹೆಣ್ಣಿನಲ್ಲೂ ಒಂದಲ್ಲ ಒಂದು ರೀತಿಯಲ್ಲಿ ದೇವಿ ಇದ್ದಾಳೆ ಎಂಬುದನ್ನು ಸಾರುವ ಸಂದೇಶ ನೃತ್ಯ ರೂಪಕದಲ್ಲಿ ಮೂಡಿಬಂದಿದೆ. ಇದರಲ್ಲಿ ನವ ದುರ್ಗೆಯರ ಸ್ತುತಿ,  ನೋಡುಗರ ಕಣ್ಮನ ಸೆಳೆಯಿತು. ಜೊತೆಗೆ ಸಮಾಜದಲ್ಲಿ ವಿವಿಧ ರಂಗದಲ್ಲಿ ಮಹಿಳೆಯರ ಪಾತ್ರ ಹಾಗೂ ನೀಡಿದ ಕೊಡುಗೆ ಎಂತಹುದು ಎಂಬುದನ್ನು ತಿಳಿಸಿಕೊಡಲಾಗಿತ್ತು.

ಜನಮನ ಮಿಡಿದ ಹೃದಯವಂತ ಅರಸರು (ಎರಡು ನಾಟಕ) ಎಂಬ ಪುಸ್ತಕ ಡಾ. ಗೀತಾ ಸೀತಾರಾಮ್ ರಚನೆ ಆಧಾರಿತ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಕುರಿತ ನಾಟಕ ಪ್ರದರ್ಶನ ಕೂಡ ರಾಜರ ಕೊಡುಗೆ ಸಾರಿ ಹೇಳಿತ್ತು. ಇದರಲ್ಲಿ ಕೆಂಪನಂಜಮ್ಮಣಿ ಪಾತ್ರ ಪ್ರೇಕ್ಷಕರ ಕಣ್ಣಿಗೆ ಬಂದಿದ್ದು ಕೊಂಡಾಡುವಾಗೆ ಆಗಿತ್ತು. ಅಷ್ಟೆ ಅಲ್ಲದೆ ಕನ್ನಡ ಪ್ರೀತಿ, ಪ್ರೇಮ, ನಾಡುನುಡಿ, ಸಂಸ್ಕೃತಿ, ಇತಿಹಾಸ ಬೆಳಕು ಚೆಲ್ಲಿದ್ದರು.

ನಾವು ಕನ್ನಡಿಗರು : ನಾವಿರೊ ಊರೆ ನಮ್ಮೂರು.. ಕನ್ನಡಿಗರೆಲ್ಲ ನಮ್ಮೋರು.. ದುಡಿಮೆಗೆ ಬಿಟ್ಟೆವು ತವರೂರು. ಇರುವೆಡೆ ನೆಮ್ಮದಿ ಕಾಣೋರು ನಾವು ಕನ್ನಡಿಗರು.. ಹೊರನಾಡ ಕನ್ನಡಿಗರು ಎಂಬ ಗೀತೆ ಕೇಳುಗರ ಕಿವಿಗೆ ಹಿಂಪಾಗಿ ನೆರೆದಿದ್ದವರನ್ನು ತಲೆ ದೂಗುವಂತೆ ಮಾಡಿದ್ದು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ ಈ ಗೀತೆಯೂ ಕನ್ನಡ ಬಗ್ಗೆ ಅಭಿಮಾನ ಸೇರಿದಂತೆ ಎಲ್ಲರನ್ನು ಒಗ್ಗೂಡಿಸುವ ಜೊತೆಗೆ ಮುಂದಿನ ಪೀಳಿಗೆಗೆ ಕನ್ನಡ ಹಾಗೂ ಸಂಸ್ಕೃತಿ ಬಿಂಬಿಸುವಂತ ಸಾಹಿತ್ಯ ಇದಾಗಿತ್ತು. ಗೀತೆಯ ಕೊನೆ ಸಾಲಿನಲ್ಲಿ ಹೇಳುವಂತೆ ಎಲ್ಲೆಡೆ ಕನ್ನಡ ಬೆಳೆಯಲಿ, ಭಾಷಾ ಹಿರಿಮೆ ಬೆಳಗಲಿ, ಜೈ ಭುವನೇಶ್ವರಿ.. ಜೈ ಕರ್ನಾಟಕ ಎಂಬ ಭಾವನೆ ಮೂಡಿ ಮೋಡಿ ಮಾಡಿದ್ದು ಜಯಕಾರ, ಚಪ್ಪಾಳೆಯೇ ಸಾಕ್ಷಿಯಾಯಿತು.

ಆರು ತಿಂಗಳ ತರಬೇತಿ

ನೃತ್ಯ, ನೃತ್ಯ ರೂಪಕ ಹಾಗೂ ಹೊರನಾಡ ಕನ್ನಡಿಗರ ಗೀತೆ ಸಿದ್ಧತೆಗೆ ಸುಮಾರು ಆರು ತಿಂಗಳ ಕಾಲ ತರಬೇತಿ ಪಡೆಯಲಾಗಿತ್ತು. ತಮಿಳುನಾಡು ಹೊರನಾಡ ಕನ್ನಡಿಗರಲ್ಲಿ ಸುಮಾರು 45 ಮಂದಿ ಗೃಹಿಣಿಯರು ಪಾಲ್ಗೊಂಡಿದ್ದೇವು. ಗೃಹಿಣಿಯರಲ್ಲಿ ತಾಯಿ ಮತ್ತು ಮಕ್ಕಳು ಸಹ ಜೊತೆಗೂಡಿ ಒಂದೆಡೆ ಸೇರಿ ಒಂದು ಗಂಟೆಗಳ ಕಾಲ ಪ್ರದರ್ಶನ ನೀಡಿದ್ದು ವಿಶೇಷತೆಯಲ್ಲಿ ವಿಶೇಷವಾಗಿದೆ.

ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಕೊಡುಗೆ ಇದ್ದು, ಎಲ್ಲಾ ರಂಗದಲ್ಲೂ ಹೆಣ್ಣು ಸಮಾಜಕ್ಕೆ ಕಣ್ಣು ಇದ್ದಾಗೆ ಹೀಗಾಗಿಯೇ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೊರನಾಡುಗಳಲ್ಲಿ ಕನ್ನಡ ಭಾಷೆ ಬಳಕೆ ಕಡಿಮೆ ಹೀಗಾಗಿ ಮುಂದಿನ ಪೀಳಿಗೆಗೆ ಹಾಗೂ ಕನ್ನಡ ಉಳಿವಿಗೆ ವಿನೂತನವಾಗಿ ಸೇವೆ ಸಲ್ಲಿಸಲಾಗುತ್ತಿದೆ. ಹಲವು ವರ್ಷಗಳಿಂದ ಹೊರನಾಡಲ್ಲಿ ಕನ್ನಡ ವಿವಿಧ ಸಂಘಗಳಿದ್ದು ತಮಿಳುನಾಡು ಚೆನ್ನೈನಲ್ಲಿ ಕಳೆದ 52ವರ್ಷಗಳಿಂದ ಅಲ್ಲಿಯೂ ಕನ್ನಡ ರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ದಸರಾದಲ್ಲಿ ನಮ್ಮ ತಂಡ ಪಾಲ್ಗೊಳ್ಳಲು ದಸರಾ ಸಮಿತಿ ಹಾಗೂ ನಮ್ಮ ತಂದೆ ನಂದಿದ್ವಜ ಮಹಾದೇವಪ್ಪ ಅವರ ಸಹಕಾರದಿಂದ ಎಲ್ಲವೂ ಸಾಧ್ಯವಾಯಿತು ಎಂದು   ಹೊರನಾಡ ಕನ್ನಡಿಗರು ಸಂಚಾಲಕರಾದ ದಾಕ್ಷಾಯಿಣಿ ಎಸ್. ದಳವಾಯಿ ಹೇಳಿದರು.

Key words: Horanad kannadiga, Mysore, drama, songs